News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಭಿವೃದ್ಧಿ ಹೊಂದಿದ ನವ ಭಾರತಕ್ಕೆ ಈ ಬಜೆಟ್‌ ಅಡಿಪಾಯ ಆಗಲಿದೆ: ಮೋದಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಬಜೆಟ್‌ ಅಭಿವೃದ್ಧಿ ಹೊಂದಿದ ಭಾರತದ ವಿರಾಟ ಸಂಕಲ್ಪವನ್ನು ಈಡೇರಿಸಲು ಅಡಿಪಾಯ ಆಗಲಿದೆ ಎಂದಿದ್ದಾರೆ.

ಐತಿಹಾಸಿಕ ಬಜೆಟ್‌ಗಾಗಿ ನಿರ್ಮಲಾ ಸೀತಾರಾಮನ್‌ ಮತ್ತು ಅವರ ತಂಡವನ್ನು ಅಭಿನಂದಿಸಿದ ಮೋದಿ, “ಬಜೆಟ್‌ನಲ್ಲಿ ಘೋಷಿಸಲಾದ ಪಿಎಂ ವಿಕಾಸ್‌‌ನಿಂದ ನಮ್ಮ ಕೋಟ್ಯಾಂತರ ವಿಶ್ವಕರ್ಮಿಗಳ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಗ್ರಾಮದಿಂದ ಹಿಡಿದು ನಗರದವರೆಗೆ ವಾಸಿಸುವ ನಮ್ಮ ಮಹಿಳೆಯರ ಜೀವನ ಮಟ್ಟದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಇದರಿಂದ ಮಹಿಳೆಯರು ಇನ್ನಷ್ಟು ಸಾಮರ್ಥ್ಯದೊಂದಿಗೆ ಮುಂದೆ ಬರಲಿದ್ದಾರೆ” ಎಂದಿದ್ದಾರೆ.

ಈ ಬಜೆಟ್ ನಲ್ಲಿ ನಮ್ಮ ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಯನ್ನು ಆರಂಭಿಸಲಾಗಿದೆ. ಈ ಬಜೆಟ್ ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕತೆಯ ಕೇಂದ್ರವನ್ನಾಗಿ ಮಾಡಲಿದೆ. ಹೊಸ ಪ್ರಾಥಮಿಕ ಸಹಕಾರಿಗಳನ್ನು ನಿರ್ಮಿಸಲು ಮಹತ್ವಕಾಂಕ್ಷೆಯ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದಿದ್ದಾರೆ.

ಇಂದು ವಿಶ್ವದ್ಯಂತ ಸಿರಿಧಾನ್ಯಗಳು ಜನಪ್ರಿಯವಾಗುತ್ತಿವೆ. ಇದರ ಅತಿ ಹೆಚ್ಚು ಲಾಭ ಭಾರತದ ಸಣ್ಣ ರೈತರ ಅದೃಷ್ಟದಲ್ಲಿದೆ. ಈಗ ಈ ಸೂಪರ್ ಫುಡ್‌ಗೆ ‘ಶ್ರೀ ಅನ್ನ’ ಹೆಸರಿನೊಂದಿಗೆ ಒಂದು ಹೊಸ ಗುರುತು ನೀಡಲಾಗಿದೆ. ‘ಶ್ರೀ ಅನ್ನ’ ಮೂಲಕ ನಮ್ಮ ಸಣ್ಣ ರೈತರಿಗೆ ಮತ್ತು ಕೃಷಿ ಮಾಡುವ ಆದಿವಾಸಿ ಸಹೋದರ- ಸಹೋದರಿಯರಿಗೆ ಆರ್ಥಿಕ ಬಲ ಸಿಗಲಿದೆ ಎಂದಿದ್ದಾರೆ.

2014 ಕ್ಕೆ ಹೋಲಿಸಿದರೆ ಮೂಲಸೌಕರ್ಯಗಳ ಮೇಲಿನ ಹೂಡಿಕೆ 400%ಕ್ಕಿಂತ ಹೆಚ್ಚು ವೃದ್ಧಿ ಕಂಡಿದೆ. ಈ ಬಾರಿ ಮೂಲಸೌಕರ್ಯದ ಮೇಲೆ 10 ಲಕ್ಷ ಕೋಟಿ ರೂಪಾಯಿಗಳ ಅಭೂತಪೂರ್ವ ಹೂಡಿಕೆಯಾಗಲಿದೆ. ಈ ಹೂಡಿಕೆ ಯುವ ಜನತೆಗೆ ಉದ್ಯೋಗವಕಾಶ ನೀಡಲಿದೆ ಮತ್ತು ಒಂದು ದೊಡ್ಡ ಜನಸಂಖ್ಯೆಗೆ ಆದಾಯದ ಹೊಸ ಅವಕಾಶವನ್ನು ಸೃಷ್ಟಿಸಲಿದೆ ಎಂದಿದ್ದಾರೆ.

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಮಧ್ಯಮ ವರ್ಗ ಒಂದು ಪ್ರಮುಖ ಆಧಾರವಾಗಿದೆ. ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಈಡೇರಿಸಲು ಮಧ್ಯಮ ವರ್ಗ ಒಂದು ದೊಡ್ಡ ಶಕ್ತಿಯಾಗಿದೆ. ಇಂತಹ ಮಧ್ಯಮ ವರ್ಗವನ್ನು ಸಶಕ್ತಗೊಳಿಸಲು ನಾವು ತೆರಿಗೆ ದರವನ್ನು ಕಡಿತ ಮಾಡಿದ್ದೇವೆ ಎಂದಿದ್ದಾರೆ.

ನವ ಭಾರತದ ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಮತ್ತು 2047ಕ್ಕೆ ಸಮೃದ್ಧ ಭಾರತ, ಸಮರ್ಥ ಭಾರತ ಮತ್ತು ಎಲ್ಲಾ ವಿಧದಲ್ಲೂ ಪರಿಪೂರ್ಣ ಭಾರತದ ನಿರ್ಮಾಣದ ಯಾತ್ರೆಯನ್ನು ಮುನ್ನಡೆಸೋಣ ಎಂದು ಮೋದಿ ಜನರಿಗೆ ಕರೆ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top