ನವದೆಹಲಿ: ಇಲ್ಲಿನ ಇಂದಿರಾಗಾಂಧಿ ರಾಷ್ಟ್ರೀಯ ಸಂಸ್ಕೃತಿ ಕಲಾ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ಭಾರತಕ್ಕೆ ವಾಪಾಸ್ ತರಲಾದ 10 ಶಿಲ್ಪ ಕಲಾಕೃತಿಗಳನ್ನು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಿದರು.
ತಮಿಳುನಾಡು ಸರ್ಕಾರಕ್ಕೆ ಇಂದು ಹಸ್ತಾಂತರಿಸಿದ ಪ್ರಾಚೀನ ವಸ್ತುಗಳಲ್ಲಿ ದ್ವಾರಪಾಲ, ನಟರಾಜ, ಕಂಕಲಮೂರ್ತಿ ಕದಯಂ, ನಂದಿಕೇಶ್ವರ ಕದಯಮ್, ಚತುರ್ಭುಜ ವಿಷ್ಣು, ಶ್ರೀ ದೇವಿ, ಶಿವ ಮತ್ತು ಪಾರ್ವತಿ, ನಿಂತಿರುವ ಮಗುವಿನ ಶಿಲ್ಪ ಇತ್ತು.
ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಎಲ್. ಮುರುಗನ್, ಸಂಸ್ಕೃತಿ ಸಚಿವಾಲಯ, ಭಾರತೀಯ ಸರ್ವೇಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳು ಮತ್ತು ತಮಿಳು ನಾಡು ಸರ್ಕಾರದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಕಳೆದ 8 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಮ್ಮ ಪ್ರಾಚೀನ ನಾಗರಿಕತೆ ತತ್ವಗಳನ್ನು ಸಂರಕ್ಷಿಸಲು, ಪ್ರಪಂಚದ ಸಂಪ್ರದಾಯಗಳು, ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ರಕ್ಷಿಸಲು, ಭಾರತೀಯ ಜ್ಞಾನ ವ್ಯವಸ್ಥೆಯನ್ನು ಪ್ರಚಾರ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಮ್ಮ ದೇವರನ್ನು ಮನೆಗೆ ತರುವುದು ಅಂತಹ ಒಂದು ಉಪಕ್ರಮವಾಗಿದ್ದು, ಅದು ನಮ್ಮ ಪರಂಪರೆಯನ್ನು ರಕ್ಷಿಸುವ, ಪ್ರಚುರಪಡಿಸುವ ಹಾಗೂ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ನಮ್ಮ ಬಾಂಧವ್ಯ ವೃದ್ಧಿಯಾಗಲು ಪ್ರಧಾನಿಯವರ ವೈಯಕ್ತಿಕ ಸಂಬಂಧಗಳು ಸಹ ಕಾರಣವಾಗಿವೆ. ಪ್ರಧಾನಿಯವರ ವೈಯಕ್ತಿಕ ಸಂಬಂಧಗಳು ಮತ್ತು ಈ ದೇಶಗಳೊಂದಿಗಿನ ಆತ್ಮೀಯ ಸಂಬಂಧಗಳು ಆಯಾ ದೇಶಗಳು ಮತ್ತು ಕದ್ದ ಪ್ರಾಚೀನ ವಸ್ತುಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಹಿಂಪಡೆಯುವ ತನಕ ಅನುಸರಿಸಿದ ಕ್ರಮಗಳಲ್ಲಿ ನಿರಂತರ ಸಹಕಾರ ದೊರೆತಿದೆ” ಎಂದರು.
ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು 2014 ರಿಂದ ಸ್ವದೇಶಕ್ಕೆ ಮರಳಿದ ವಿಗ್ರಹಗಳ ಸಂಖ್ಯೆಯಲ್ಲಿ ಆದ ಹೆಚ್ಚಳವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. “ಪ್ರಧಾನಮಂತ್ರಿ ಅವರು ಅಮೆರಿಕಗೆ ತೆರಳಿದ್ದಾಗ 157 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಿದ್ದು, ಇದು ಈವರೆಗಿನ ಅತಿ ಹೆಚ್ಚಿನ ವಸ್ತುಗಳು ಸ್ವದೇಶಕ್ಕೆ ವಾಪಸ್ ಬಂದಂತಾಗಿವೆ. ಕಳೆದ 8 ವರ್ಷಗಳಲ್ಲಿ 228 ವಸ್ತುಗಳನ್ನು ವಾಪಸ್ ತರಲಾಗಿದೆ. ಸ್ವಾತಂತ್ರ್ಯ ದೊರೆತ ನಂತರ ಮತ್ತು 2013 ರ ವರೆಗೆ ಕೇವಲ 13 ವಸ್ತುಗಳು ಭಾರತಕ್ಕೆ ಬಂದಿವೆ. ಸ್ನೇಹಿತರೇ ಈ ಅಂಕಿ ಅಂಶಗಳು ಸ್ವತಃ ಮಾತನಾಡುತ್ತವೆ ಮತ್ತು ಈ ಸರ್ಕಾರ ನಮ್ಮ ಪರಂಪರೆಗೆ ನೀಡುವ ಮಹತ್ವವನ್ನು ಇವು ಪ್ರತಿಬಿಂಬಿಸುತ್ತವೆ. ಸುಸ್ಥಿರ ಪ್ರಯತ್ನಗಳ ಫಲವಾಗಿ 2014 ರ ನಂತರ 228 ವಸ್ತುಗಳನ್ನು ತರಲಾಗಿದ್ದು, ಈವರೆಗೆ 241 ವಸ್ತುಗಳು ಭಾರತಕ್ಕೆ ಮರಳಿವೆ” ಎಂದಿದ್ದಾರೆ.
ದೇಶ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಹಾಗೂ ದೇಶ 25 ವರ್ಷಗಳ ಅಮೃತ ಕಾಲ ಪ್ರವೇಶಿಸುತ್ತಿರುವಾಗ ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯ ಜಾಗತಿಕ ರಕ್ಷಕನಾಗಿ ಮುನ್ನಡೆಸಲು ಇದು ಒಂದು ಅವಕಾಶವಾಗಿದೆ. ಕಳುವಾದ ಪ್ರಾಚೀನ ವಸ್ತುಗಳನ್ನು ಸ್ವದೇಶಕ್ಕೆ ಹಿಂಪಡೆಯುವ ಬಗ್ಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಾದಕ್ಕೆ ಅವಕಾಶ ಕಲ್ಪಿಸುತ್ತದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹತ್ತು ಪುರಾತನ ವಸ್ತುಗಳನ್ನು ಪರಿಚಯಿಸುವ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.