ನವದೆಹಲಿ: ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಾಳತ್ವ ವಹಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಶ್ಲಾಘಿಸಿದ್ದಾರೆ.
ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಹೊಸ ಎತ್ತರವನ್ನು ತಲುಪುತ್ತಿದ್ದಾರೆ ಮತ್ತು ಅಸಾಧ್ಯಗಳನ್ನು ಸಾಧ್ಯವಾಗಿಸುತ್ತಿದ್ದಾರೆ ಎಂದಿದ್ದಾರೆ.
ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಸ್ಮರಿಸಿದ ಅವರು, ದೇಶದ ಹೆಣ್ಣು ಮಕ್ಕಳು ಸಶಸ್ತ್ರ ಪಡೆಗಳಲ್ಲಿ ಹೊಸ ಮತ್ತು ದೊಡ್ಡ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ, ಸೈನಿಕ ಶಾಲೆಗಳಲ್ಲಿ ಬಾಲಕಿಯರ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ ಎಂದರು. ದೇಶದ ಅರ್ಧದಷ್ಟು ಸ್ಟಾರ್ಟ್ಅಪ್ಗಳು ನಿರ್ದೇಶಕರಾಗಿ ಮಹಿಳೆಯರನ್ನು ಹೊಂದಿವೆ ಎಂಬುದನ್ನು ಅವರು ಒತ್ತಿ ಹೇಳಿದರು.
ಮದುವೆಗೆ ಸಾಮಾನ್ಯ ವಯಸ್ಸನ್ನು ನಿಗದಿಪಡಿಸುವ ಮೂಲಕ ದೇಶವು ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ಪ್ರಯತ್ನಿಸುತ್ತಿದೆ . ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮದ ಯಶಸ್ಸಿನಿಂದಾಗಿ ದೇಶದಲ್ಲಿ ಲಿಂಗ ಅನುಪಾತವೇ ಬದಲಾಗಿದೆ ಎಂದರು.
ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಸಂಖ್ಯೆಯೂ ಸುಧಾರಿಸಿದೆ. ‘ಸ್ವಚ್ಛ ಭಾರತ ಅಭಿಯಾನ’ ಯೋಜನೆಯಡಿ ಮಹಿಳೆಯರಿಗೆ ಬಯಲು ಶೌಚದಿಂದ ಮುಕ್ತಿ ಸಿಕ್ಕಿದೆ ಎಂದು ಮೋದಿ ಹೇಳಿದರು.
ತ್ರಿವಳಿ ತಲಾಖ್ನಂತಹ ಸಾಮಾಜಿಕ ಪಿಡುಗು ಸಹ ಕೊನೆಗೊಳ್ಳುತ್ತಿದೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ಬಂದಾಗಿನಿಂದ, ದೇಶದಲ್ಲಿ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ 80 ಪ್ರತಿಶತದಷ್ಟು ಕಡಿಮೆಯಾಗಿದೆ. ಮಹಿಳೆಯರೇ ಈಗ ಬದಲಾವಣೆಗೆ ಮುಂದಾಗಿರುವುದರಿಂದ ಈ ಎಲ್ಲಾ ಬದಲಾವಣೆಗಳು ಆಗುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ಅವಲೋಕಿತೇಶ್ವರ ಪದ್ಮಪಾಣಿಯ ವಿಗ್ರಹವನ್ನು ಇಟಲಿಯಿಂದ ಭಾರತಕ್ಕೆ ತರುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು. ಈ ವಿಗ್ರಹವನ್ನು ಕೆಲವು ವರ್ಷಗಳ ಹಿಂದೆ ಬಿಹಾರದ ಗಯಾದ ದೇವಿ ಸ್ಥಾನದ ಕುಂದಲ್ಪುರ ದೇವಸ್ಥಾನದಿಂದ ಕಳವು ಮಾಡಲಾಗಿತ್ತು. ಅವಿರತ ಪ್ರಯತ್ನಗಳ ನಂತರ ಭಾರತವು ಈಗ ಈ ವಿಗ್ರಹವನ್ನು ಮರಳಿ ಪಡೆದಿದೆ ಎಂದು ಮೋದಿ ಹೇಳಿದರು.
600 ರಿಂದ 700 ವರ್ಷಗಳಷ್ಟು ಹಳೆಯದಾದ ಆಂಜನೇಯರ್ ಹನುಮಾನ್ ವಿಗ್ರಹವನ್ನು ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ವೆಲ್ಲೂರಿನಲ್ಲಿ ಹೇಗೆ ಕಳವು ಮಾಡಲಾಗಿತ್ತು ಎಂಬುದನ್ನು ಅವರು ವಿವರಿಸಿದರು. ಈ ತಿಂಗಳ ಆರಂಭದಲ್ಲಿ, ಇದನ್ನು ಆಸ್ಟ್ರೇಲಿಯಾದಿಂದ ಹಿಂಪಡೆಯಲಾಯಿತು ಮತ್ತು ಭಾರತೀಯ ಮಿಷನ್ ಅದನ್ನು ಸ್ವೀಕರಿಸಿದೆ. ಈ ಪ್ರತಿಯೊಂದು ವಿಗ್ರಹಗಳ ಇತಿಹಾಸವು ಆಯಾ ಕಾಲದ ಪ್ರಭಾವವನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಮಾತನಾಡಿದ ಮೋದಿಯವರು ತಮ್ಮ ಮನ್ ಕಿ ಬಾತ್ ಕೇಳುಗರಿಗೆ ತಾಂಜೇನಿಯಾದ ಕಿಲಿ ಪಾಲ್ ಮತ್ತು ಅವರ ಸಹೋದರಿ ನಿಮಾ ಬಗ್ಗೆ ಪ್ರಸ್ತಾಪಿಸಿದರು. ಇವರು ಇತ್ತೀಚೆಗೆ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯರಾಗಿದ್ದಾರೆ.
ಅವರಿಗೆ ಭಾರತೀಯ ಸಂಗೀತದ ಬಗ್ಗೆ ಒಲವು ಇದೆ ಎಂದ ಮೋದಿ,ಅವರ ಲಿಪ್ ಸಿಂಕ್ ಮಾಡುವ ತಂತ್ರವನ್ನು ಶ್ಲಾಘಿಸಿದರು. ಇತ್ತೀಚೆಗಷ್ಟೇ ಗಣರಾಜ್ಯೋತ್ಸವದಂದು ಕಿಲಿ ಪೌಲ್ ಅವರು ‘ಜನ ಗಣ ಮನ’ ಹಾಡಿರುವ ವಿಡಿಯೋ ವೈರಲ್ ಆಗಿತ್ತು.
ಕೆಲವು ದಿನಗಳ ಹಿಂದೆ, ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡನ್ನು ಪ್ರಸ್ತುತಪಡಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಇವರು ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆ, ಕಿಲಿ ಪಾಲ್ ಅವರನ್ನು ತಾಂಜಾನಿಯಾದ ಭಾರತೀಯ ರಾಯಭಾರ ಕಚೇರಿ ಗೌರವಿಸಿತು. ಭಾರತೀಯ ಸಂಗೀತದ ಮಾಂತ್ರಿಕತೆ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ, ನೂರೈವತ್ತಕ್ಕೂ ಹೆಚ್ಚು ದೇಶಗಳ ಗಾಯಕರು ಮತ್ತು ಸಂಗೀತಗಾರರು ಮಹಾತ್ಮ ಗಾಂಧಿಯವರ ನೆಚ್ಚಿನ ಗೀತೆ ‘ವೈಷ್ಣವ್ ಜನತೊ’ ಅನ್ನು ಹೇಗೆ ಪ್ರಸ್ತುತಪಡಿಸಿದರು ಎಂಬುದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ದೇಶಭಕ್ತಿ ಗೀತೆಗಳ ಬಗ್ಗೆ ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಬಹುದು ಎಂದು ಮೋದಿ ಸಲಹೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.