ಲಕ್ನೋ: ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂಬ ವಿಶ್ವಾಸವನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ವ್ಯಕ್ತಪಡಿಸಿದ್ದಾರೆ. ಈ ಬಾರಿ ಉತ್ತರ ಪ್ರದೇಶದಲ್ಲಿ 80 ವರ್ಸಸ್ 20 ಕದನ ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ ಉತ್ತರ ಪ್ರದೇಶವು ಪಶ್ಚಿಮ ಬಂಗಾಳ ಮತ್ತು ಕೇರಳದಂತಾಗಬಹುದು ಎಂಬ ಅವರ ಹೇಳಿಕೆಗೆ ವ್ಯಕ್ತವಾದ ಟೀಕೆಗಳಿಗೆ ತಿರುಗೇಟು ನೀಡಿದ ಯೋಗಿ ಆದಿತ್ಯನಾಥ್, ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನರನ್ನು ಎಚ್ಚರಿಸಿದ್ದೇನೆ ಎಂದು ಹೇಳಿದ್ದಾರೆ.
ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆದಿತ್ಯನಾಥ್, ” ಬಂಗಾಳದಿಂದ ಬಂದು ಯುಪಿಯಲ್ಲಿ ಅರಾಜಕತೆಯನ್ನು ಹರಡುತ್ತಿದ್ದಾರೆ, ಇದಕ್ಕಾಗಿ ಅವರ ವಿರುದ್ಧ ಜನರನ್ನು ಎಚ್ಚರಿಸುವುದು ಅಗತ್ಯವಾಗಿತ್ತು. ಜನರ ಭದ್ರತೆ, ಗೌರವಕ್ಕೆ ಅಡ್ಡಿಪಡಿಸಲು ಬರುವವರಿಗೆ ಅವಕಾಶ ನೀಡಬೇಡಿ ಎಂದು ಜನರನ್ನು ಎಚ್ಚರಿಸುವುದು ನನ್ನ ಜವಾಬ್ದಾರಿಯಾಗಿತ್ತು” ಎಂದಿದ್ದಾರೆ.
ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿದ ಆದಿತ್ಯನಾಥ್, “ಬಂಗಾಳದಲ್ಲಿ ಶಾಂತಿಯುತವಾಗಿ ಚುನಾವಣೆಗಳು ನಡೆದಿವೆಯೇ? ಇತ್ತೀಚೆಗೆ, ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲಾಯಿತು. ಬೂತ್ಗಳನ್ನು ವಶಪಡಿಸಿಕೊಳ್ಳಲಾಯಿತು, ಅರಾಜಕತೆ ಉತ್ತುಂಗದಲ್ಲಿತ್ತು, ಹಲವಾರು ಜನರು ಸತ್ತರು, ಕೇರಳದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ, ಈ ಎರಡು ರಾಜ್ಯಗಳಲ್ಲಿ ನಡೆದ ಹಿಂಸಾಚಾರ, ರಾಜಕೀಯ ಹತ್ಯೆಗಳು, ಇನ್ನೆಲ್ಲಿ ನಡೆದಿವೆ? ಎಂದು ನಾನು ಕೇಳಲು ಬಯಸುತ್ತೇನೆ” ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯೊಂದಿಗೆ ಪಶ್ಚಿಮ ಬಂಗಾಳದ ಚುನಾವಣೆಯನ್ನು ಹೋಲಿಕೆ ಮಾಡಿದ ಅವರು, ಇಲ್ಲಿ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ ಎಂದು ಹೇಳಿದರು. “ಯುಪಿ ಚುನಾವಣೆಯ ಮೊದಲ ಹಂತವು ಶಾಂತಿಯುತವಾಗಿ ಪೂರ್ಣಗೊಂಡಿದೆ” ಎಂದಿದ್ದಾರೆ.
ಎಲ್ಲರಿಗೂ ಭದ್ರತೆ ಮತ್ತು ಸಮೃದ್ಧಿಯನ್ನು ಒದಗಿಸುವ ಉದ್ದೇಶದಿಂದ ತಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ನಿರ್ದಿಷ್ಟ ಸಮುದಾಯವನ್ನು ಓಲೈಸುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರ ಸಾರ್ವಜನಿಕರ ಭಾವನೆಗಳಿಗೆ ಮಣಿಯದೆ, ಮುಖ ನೋಡಿ ಸರ್ಕಾರದ ಯೋಜನೆಗಳನ್ನು ವಿತರಿಸಿದರೆ, ಜಾತಿ, ಮತ, ಧರ್ಮದ ತಾರತಮ್ಯ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ದೊಡ್ಡ ಅಪಹಾಸ್ಯ ಇನ್ನೊಂದಿಲ್ಲ’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನವ ಭಾರತ ರಚನೆಯಾಗುತ್ತಿದೆ, ಇದು ಸಂವಿಧಾನದ ಪ್ರಕಾರ ನಡೆಯುತ್ತದೆಯೇ ಹೊರತು ಶರಿಯತ್ ಪ್ರಕಾರ ಅಲ್ಲ ಎಂದು ಆದಿತ್ಯನಾಥ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.