ಲಕ್ನೋ: ಉತ್ತರಪ್ರದೇಶದಲ್ಲಿ ಅಪರಾಧ ನಿಯಂತ್ರಣ ಮಾಡಲು ನಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತಮ್ಮ ಹಿಂದಿನ ಸರ್ಕಾರಗಳು ಪೊಲೀಸ್ ಸುಧಾರಣೆಗಳು ಮತ್ತು ಮಾರ್ಪಾಡುಗಳನ್ನು ಕೈಗೊಳ್ಳಲು ವಿಫಲರಾಗಿದ್ದವು ಎಂದ ಆರೋಪಿಸಿದ್ದಾರೆ.
ಐದು ವರ್ಷಗಳ ಕಾಲ ರಾಜ್ಯವು ಗಲಭೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳಿಂದ ಮುಕ್ತವಾಗಿದೆ ಮತ್ತು ಉತ್ತರ ಪ್ರದೇಶವು ಹೂಡಿಕೆದಾರರ ಆದ್ಯತೆಯ ತಾಣವಾಗಿದೆ ಎಂದು ಯೋಗಿ ಹೇಳಿದ್ದಾರೆ.
ಹಿಂದಿನ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ಸರ್ಕಾರಗಳ ಅವಧಿಯಲ್ಲಿ ನಡೆದ ಗಲಭೆಗಳ ಸಂಖ್ಯೆಯ ಕುರಿತು ವಿವರಗಳನ್ನು ನೀಡಿದ ಆದಿತ್ಯನಾಥ್, “ಬಿಎಸ್ಪಿ ಆಡಳಿತದಲ್ಲಿ (2007-2012) 364 ದಂಗೆಗಳು ನಡೆದಿವೆ. ಸಮಾಜವಾದಿ ಅಧಿಕಾರಾವಧಿಯಲ್ಲಿ (2012-2017) 700 ಕ್ಕೂ ಹೆಚ್ಚು ದೊಡ್ಡ ಗಲಭೆಗಳು ನಡೆದಿದ್ದು, ಇದರಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
2017 ರಿಂದ ರಾಜ್ಯದಲ್ಲಿ ಯಾವುದೇ ಗಲಭೆ ನಡೆದಿಲ್ಲ. ಆದರೂ ಸರ್ಕಾರ ಸುಮ್ಮನಿಲ್ಲ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಾವು ಸೂಕ್ಷ್ಮ ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ ಕೇಂದ್ರವನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಡೇಟಾವನ್ನು ಬಳಸಿಕೊಂಡು 2016-2017 ರ ಸಮಾಜವಾದಿ ಸರ್ಕಾರವನ್ನು 2020-2021 ರಲ್ಲಿ ಅವರ ಆಡಳಿತದೊಂದಿಗೆ ಹೋಲಿಸಿದ ಮುಖ್ಯಮಂತ್ರಿಗಳು, ಡಕಾಯಿತಿ ಪ್ರಕರಣಗಳು ಶೇಕಡಾ 58 ರಷ್ಟು ಕಡಿಮೆಯಾಗಿದೆ, ಲೂಟಿ 64 ಶೇಕಡಾ, ಕೊಲೆ ಶೇಕಡಾ 23 ರಷ್ಟು, ಅಪಹರಣ ಶೇ.53, ವರದಕ್ಷಿಣೆ ಹತ್ಯೆ ಶೇ.8 ಮತ್ತು ಅತ್ಯಾಚಾರ ಶೇ.43ರಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
“ದೊಡ್ಡ ರಾಜ್ಯವಾಗಿದ್ದರೂ, ಈ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ಸನ್ನು ಸಾಧಿಸಿದ್ದೇವೆ. ನಾವು ಮತಾಂತರ ವಿರೋಧಿ ಕಾನೂನು ಮತ್ತು ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮರುಪಡೆಯುವಿಕೆ ಕಾನೂನನ್ನು ಪರಿಚಯಿಸಿದ್ದೇವೆ”ಎಂದು ಅವರು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಆದಿತ್ಯನಾಥ್, ತಮ್ಮ ಅಧಿಕಾರಾವಧಿಯಲ್ಲಿ 155 ಹಾರ್ಡ್ಕೋರ್ ಕ್ರಿಮಿನಲ್ಗಳು ಎನ್ಕೌಂಟರ್ಗಳಲ್ಲಿ ಕೊಲ್ಲಲ್ಪಟ್ಟರು ಮತ್ತು 3,638 ಇತರರ ದಾಳಿಗಳಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
“ಹದಿಮೂರು ಪೊಲೀಸ್ ಸಿಬ್ಬಂದಿಗಳು ಸಹ ಸಾವನ್ನಪ್ಪಿದ್ದಾರೆ ಮತ್ತು 1,236 ಪೊಲೀಸರು ಗಾಯಗೊಂಡಿದ್ದಾರೆ. ದರೋಡೆಕೋರ ಕಾಯಿದೆಯಡಿ 48,038 ಜನರನ್ನು ಬಂಧಿಸಲಾಗಿದ್ದು, 694 ಕ್ರಿಮಿನಲ್ಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ದಾಖಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಪ್ರಕಾರ, ಅಪರಾಧಿಗಳಿಗೆ ಸೇರಿದ 2,046 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನೆಲಸಮ ಮಾಡಲಾಗಿದೆ.
“ಹಿಂದಿನ ಆಡಳಿತದಲ್ಲಿ ಪೊಲೀಸ್ ನೇಮಕಾತಿ ನಡೆಸಲಾಗಲಿಲ್ಲ. ನಾವು 1.5 ಲಕ್ಷ ಸಿಬ್ಬಂದಿಯನ್ನು ಪಾರದರ್ಶಕವಾಗಿ ನೇಮಕ ಮಾಡಿದ್ದೇವೆ ಮತ್ತು ಅವರಿಗೆ ಸಾವಿರಾರು ಬಡ್ತಿ ನೀಡಿದ್ದೇವೆ. ಪೊಲೀಸ್ ಪಡೆ, ಪೊಲೀಸ್ ಲೈನ್ಗಳು ಮತ್ತು ಠಾಣೆಗಳನ್ನು ಆಧುನೀಕರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ, ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.