ನವದೆಹಲಿ: ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರ್ಲ್ಡ್ ಎಕನಾಮಿಕ್ ಫೋರಂನ ಡಾವೋಸ್ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಷಣ ಮಾಡಿದ ಮೋದಿ, ಭಾರತವು ಹೆಚ್ಚಿನ ಶಕ್ತಿ ಮತ್ತು ಚೈತನ್ಯದಿಂದ ಮುನ್ನಡೆಯುತ್ತಿದೆ. ಭಾರತವು ತನ್ನ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿದೆ ಮತ್ತು ದೇಶದಲ್ಲಿ 160 ಕೋಟಿ ಲಸಿಕೆ ಡೋಸ್ಗಳ ವಿತರಣೆ ಮಾಡುವ ಮೂಲಕ ಅಗಾಧ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದಿದ್ದಾರೆ.
ಈ ಕೊರೊನಾ ಅವಧಿಯಲ್ಲಿ ಭಾರತವು ತನ್ನ 80 ಕೋಟಿಗೂ ಹೆಚ್ಚು ನಾಗರಿಕರಿಗೆ ಉಚಿತ ಆಹಾರವನ್ನು ನೀಡುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಪ್ರಧಾನಿ ಹೇಳಿದರು.
ಭಾರತವು ಸರಿಯಾದ ದಿಕ್ಕಿನಲ್ಲಿ ಸುಧಾರಣೆಗಳತ್ತ ಗಮನ ಹರಿಸಿದೆ. ಜಾಗತಿಕ ಆರ್ಥಿಕ ತಜ್ಞರು ಭಾರತದ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದ ಈ ಸಮಯದಲ್ಲಿ, ಭಾರತವು ಅನೇಕ ದೇಶಗಳಿಗೆ ಅಗತ್ಯ ಔಷಧಿಗಳು, ಲಸಿಕೆಗಳನ್ನು ನೀಡುವ ಮೂಲಕ ಕೋಟಿಗಟ್ಟಲೆ ಜೀವಗಳನ್ನು ಉಳಿಸಿದೆ ಎಂದಿದ್ದಾರೆ.
ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಫಾರ್ಮಾ ಉತ್ಪಾದಕ ಮತ್ತು ಪ್ರಪಂಚಕ್ಕೆ ಔಷಧಾಲಯವಾಗಿದೆ. ಭಾರತದಂತಹ ಬಲಿಷ್ಠ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಭರವಸೆ ನೀಡಿದೆ. ಈ ಭರವಸೆ ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆ, 21ನೇ ಶತಮಾನವನ್ನು ಸಶಕ್ತಗೊಳಿಸುವ ತಂತ್ರಜ್ಞಾನ ಮತ್ತು ಭಾರತೀಯರ ಪ್ರತಿಭೆ ಮತ್ತು ಮನೋಧರ್ಮವನ್ನು ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು.
ಇಂದು ಭಾರತವು ವಿಶ್ವದ ಅತಿದೊಡ್ಡ, ಸುರಕ್ಷಿತ ಮತ್ತು ಯಶಸ್ವಿ ಡಿಜಿಟಲ್ ಪಾವತಿ ವೇದಿಕೆಯನ್ನು ಹೊಂದಿದೆ. ಕಳೆದ ತಿಂಗಳು ಬರೋಬ್ಬರಿ 4.4 ಶತಕೋಟಿ ವ್ಯವಹಾರಗಳು ಭಾರತದಲ್ಲಿ ಏಕೀಕೃತ ಪಾವತಿಗಳ ಇಂಟರ್ಫೇಸ್ ಮೂಲಕ ನಡೆದಿವೆ ಎಂದು ಮೋದಿ ಹೇಳಿದರು.
ಇಂದು ಭಾರತ ವಿಶ್ವಕ್ಕೆ ದಾಖಲೆಯ ಸಾಫ್ಟ್ವೇರ್ ಎಂಜಿನಿಯರ್ಗಳನ್ನು ಕಳುಹಿಸುತ್ತಿದೆ ಮತ್ತು 50 ಲಕ್ಷಕ್ಕೂ ಹೆಚ್ಚು ಸಾಫ್ಟ್ವೇರ್ ಡೆವಲಪರ್ಗಳು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಯುನಿಕಾರ್ನ್ಗಳನ್ನು ಹೊಂದಿದೆ ಮತ್ತು ಕಳೆದ 6 ತಿಂಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ನೋಂದಾಯಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಭಾರತವು ಒಂದು ಕಾಲದಲ್ಲಿ ಲೈಸೆನ್ಸ್ ರಾಜ್ಗೆ ಹೆಸರುವಾಸಿಯಾಗಿತ್ತು . ಆದರೆ ಇಂದು ವ್ಯಾಪಾರವನ್ನು ಸುಲಭಗೊಳಿಸಲು ಪ್ರೋತ್ಸಾಹಿಸುತ್ತಿದೆ ಮತ್ತು ವ್ಯವಹಾರಗಳಲ್ಲಿ ಸರ್ಕಾರದ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತಿದೆ. ಕಾರ್ಪೊರೇಟ್ ತೆರಿಗೆ ದರಗಳನ್ನು ಸರಳೀಕರಿಸುವ ಮತ್ತು ಕಡಿಮೆ ಮಾಡುವ ಮೂಲಕ ಭಾರತವು ವಿಶ್ವದಲ್ಲೇ ಅತ್ಯಂತ ಸ್ಪರ್ಧಾತ್ಮಕವಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.