
2020 ಜೂನ್ 15ರಂದು ಪೂರ್ವ ಲಡಾಖ್ನ ಎತ್ತರದ ಗಲ್ವಾನ್ ಕಣಿವೆಯು ಭಾರತ ಮತ್ತು ಚೀನಾ ಪಡೆಗಳ ನಡುವೆ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲದಲ್ಲಿ ನಡೆದ ಅತ್ಯಂತ ಮಾರಣಾಂತಿಕ ಘರ್ಷಣೆಗೆ ಸಾಕ್ಷಿಯಾಯಿತು. ಸೈನಿಕರು ಕಲ್ಲುಗಳು, ಕೋಲುಗಳು ಮತ್ತು ತಾತ್ಕಾಲಿಕ ಶಸ್ತ್ರಗಳೊಂದಿಗೆ ಹೋರಾಡಿದರು. ಎರಡೂ ಪಕ್ಷಗಳು ಪೂರ್ಣ ಶಸ್ತ್ರಸಜ್ಜಿತರಾಗಿದ್ದರೂ ಒಂದು ಗುಂಡು ಕೂಡ ಹಾರಿಸಲಿಲ್ಲ. 1993 ಮತ್ತು 1996ರಲ್ಲಿ ಸಹಿ ಮಾಡಿದ ಒಪ್ಪಂದಗಳ ಪರಿಣಾಮವಾಗಿ ಅಲ್ಲಿ ಗುಂಡು ಹಾರಲಿಲ್ಲ, ವಾಸ್ತವಿಕ ನಿಯಂತ್ರಣ ರೇಖೆ (LAC) ಉದ್ದಕ್ಕೂ ಶಸ್ತ್ರಾಸ್ತ್ರ ಬಳಕೆಯನ್ನು ಈ ಒಪ್ಪಂದದಡಿ ನಿರ್ಬಂಧಿಸಲಾಗಿತ್ತು.
ಆದರೆ ಈ ಗಾಲ್ವಾನ್ ಘರ್ಷಣೆ ಒಂದು ತಾರ್ಕಿಕ ಪ್ರಶ್ನೆಯನ್ನು ಎತ್ತಿತು. ಅದೇನೆಂದರೆ ಎಲ್ಲಾ ಯುದ್ಧಗಳನ್ನು ಇಷ್ಟೊಂದು ನಿಯಂತ್ರಣದೊಂದಿಗೆ ನಡೆಸಲು ಸಾಧ್ಯವೇ? ಒಪ್ಪಂದದ ಮಿತಿಯೊಳಗೆ ನಡೆಸಲು ಸಾಧ್ಯವೇ? ಗಲ್ವಾನ್ ಸಂಘರ್ಷ ಒಂದು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಸಂಘರ್ಷ ಉಲ್ಭಣವಾಗುವುದನ್ನು ಒಪ್ಪಂದಗಳಡಿ ನಿಯಂತ್ರಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿತು. ಆದರೆ ಹೆಚ್ಚಿನ ಸಂಘರ್ಷಗಳಲ್ಲಿ ಇದು ಸಾಧ್ಯವಿಲ್ಲ. ಒಪ್ಪಂದಗಳನ್ನು ಮುರಿದು ಕಾದಾಟಗಳು ವಿಷಮ ಪರಿಸ್ಥಿತಿಯನ್ನು ತಲುಪಬಹುದು. ಅದರಲ್ಲೂ ವಿಶೇಷವಾಗಿ ಪರಮಾಣು ಶಸ್ತ್ರಸಜ್ಜಿತ ಎದುರಾಳಿಗಳ ನಡುವೆ ಸಂಘರ್ಷ ಏರ್ಪಟ್ಟರೆ ಅದನ್ನು ಹತೋಟಿಯಲ್ಲಿಡುವುದು ಕಷ್ಟಸಾಧ್ಯವೇ ಆಗಿರುತ್ತದೆ.
ಪ್ರತಿ ವರ್ಷ ಮಾರ್ಚ್ 5ರಂದು ಸಂಯುಕ್ತ ರಾಷ್ಟ್ರಗಳ ಮೇಲ್ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ನಿಶ್ಶಸ್ತ್ರೀಕರಣ ಮತ್ತು ಅಣುಪ್ರಸರಣ ರಹಿತ ಜಾಗೃತಿ ದಿನ (International Day for Disarmament and Non-Proliferation Awareness) ಅನ್ನು ಆಚರಿಸಲಾಗುತ್ತದೆ. ಈ ದಿನದ ಸಂದೇಶ ಸ್ಪಷ್ಟ- ಅದೇನೆಂದರೆ ಶಸ್ತ್ರಾಸ್ತ್ರಗಳ ಬಳಕೆ ಮತ್ತು ಉತ್ಪಾದನೆಯನ್ನು ಕಡಿಮೆಗೊಳಿಸುವುದು ಮತ್ತು ಅದರ ಪ್ರಸಾರವನ್ನು ತಡೆಯುವುದು, ಶಾಂತಿಯತ್ತ ಸಾಗುವುದು.
ಆಧುನಿಕ ನಿಶ್ಶಸ್ತ್ರೀಕರಣ ಚೌಕಟ್ಟು 1968ರ ಅಣುಶಸ್ತ್ರ ಅಪ್ರಸಾರ ಒಪ್ಪಂದ (NPT)-Treaty on the Non-Proliferation of Nuclear Weapons -1968) ನಲ್ಲಿ ಬೇರೂರಿದ್ದು, ಇದು ಐದು ಅಣ್ವಸ್ತ್ರ ರಾಷ್ಟ್ರಗಳನ್ನು ಗುರುತಿಸಿ, ಅಣ್ವಸ್ತ್ರ ಪ್ರಸಾರವನ್ನು ತಡೆಯುವ ಜೊತೆಗೆ ನಿಶ್ಶಸ್ತ್ರೀಕರಣವನ್ನು ಪ್ರೋತ್ಸಾಹಿಸುತ್ತದೆ.
New START (2010)ನಂತಹ ಅನಂತರದ ಒಪ್ಪಂದಗಳು ಪ್ರಮುಖ ಶಕ್ತಿಗಳ ನಡುವೆ ನಿಯೋಜಿತ ರಣತಂತ್ರೀಯ ಶಸ್ತ್ರಾಗಾರಗಳನ್ನು ಮಿತಿಗೊಳಿಸುವ ಪ್ರಯತ್ನ ಮಾಡಿದವು. ಸಂಯುಕ್ತ ರಾಷ್ಟ್ರಗಳ ವಾರ್ಷಿಕ ಆಚರಣೆ ಕ್ರಮೇಣ ಶಸ್ತ್ರಗಳ ಕಡಿಮೆಮಾಡುವಿಕೆ ಮತ್ತು ಜವಾಬ್ದಾರಿಯುತ ನಿರ್ವಹಣೆಯ ಆಕಾಂಕ್ಷೆಯನ್ನು ಬಲಪಡಿಸುತ್ತದೆ.
ಆದರೆ ಜಾಗತಿಕ ಅಣ್ವಸ್ತ್ರ ಕ್ರಮವ್ಯವಸ್ಥೆ ಇದಕ್ಕೆ ತದ್ವಿರುದ್ಧವೇ ಆಗಿದೆ. 2026 ರಂತೆ ಅಂದಾಜುಗಳ ಪ್ರಕಾರ:
- ಅಮೆರಿಕಾ ಸಂಯುಕ್ತ ರಾಷ್ಟ್ರಗಳು: ~5,000 ವಾರ್ಹೆಡ್ಗಳು
- ರಷ್ಯಾ: 4,300+
- ಚೀನಾ: 500+ (ವಿಸ್ತರಣೆಯಲ್ಲಿದೆ)
- ಭಾರತ: 160–180
- ಪಾಕಿಸ್ತಾನ: 170
- ಇಸ್ರೇಲ್: 80–100 (ಘೋಷಿತವಲ್ಲದ್ದು) ವಾರ್ಹೆಡ್ ಹೊಂದಿವೆ.
ಮೈತ್ರಿಯಡಿ ಕಾರ್ಯನಿರ್ವಹಿಸುವ ದೇಶಗಳಲ್ಲಿ ನಿಶ್ಶಸ್ತ್ರೀಕರಣ ಚರ್ಚೆಗಳು ಸಾಂಸ್ಥಿಕ ಭದ್ರತಾ ಭರವಸೆಗಳೊಳಗೆ ನಡೆಯುತ್ತವೆ. ಆದರೆ ಭಾರತದ ಪರಿಸ್ಥಿತಿ ಭಿನ್ನವಾಗಿದೆ ಎಂಬುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು.
ಭಾರತದ ಮೇಲಿದೆ ಭೂಗೋಳ ಮತ್ತು ರಣತಂತ್ರೀಯ ಒತ್ತಡ
ಭಾರತದ ಭದ್ರತಾ ಪರಿಸರ ಅತ್ಯಂತ ಕ್ಲಿಷ್ಟವಾಗಿದೆ. ಉತ್ತರ-ಪೂರ್ವಕ್ಕೆ ಚೀನಾ ಇದೆ. ಇಲ್ಲಿ ಅಸ್ಥಿರ ಗಡಿ ಹಾಗೂ 1962ರ ಘರ್ಷಣೆಯ ಇತಿಹಾಸವನ್ನು ನಾವು ಹೊಂದಿದ್ದೇವೆ. ಪಶ್ಚಿಮದಲ್ಲಿ ಪಾಕಿಸ್ತಾನವಿದ್ದು, 1947ರಿಂದಲೂ ಯುದ್ಧಗಳು, ಗಡಿ ಒತ್ತಡಗಳು ಮತ್ತು ಪ್ರಾಕ್ಸಿ ಘರ್ಷಣೆಗಳು ಇಲ್ಲಿ ಸಾಮಾನ್ಯವೇ ಆಗಿಬಿಟ್ಟಿದೆ.
NATO ಸದಸ್ಯರಿಗಿಂತ ಭಿನ್ನವಾಗಿ, ಭಾರತವು ಸಾಮೂಹಿಕ ರಕ್ಷಣಾ ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಅದರ ಸಿದ್ಧಾಂತವು ಕಾರ್ಯತಂತ್ರದ ಸ್ವಾಯತ್ತತೆಯ ಸುತ್ತ ವಿಕಸನಗೊಂಡಿದೆ. ರಾಷ್ಟ್ರೀಯ ಭದ್ರತೆಯು ಪ್ರಾಥಮಿಕವಾಗಿ ಮೈತ್ರಿ ಅವಲಂಬನೆಗಿಂತ ಸ್ಥಳೀಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಬೇಕು ಎಂಬ ತತ್ವ.
ನೀತಿ ಚರ್ಚೆಯಲ್ಲಿ, ಈ ವಿಧಾನವನ್ನು ಕೆಲವೊಮ್ಮೆ ಆಪರೇಷನ್ ಸಿಂಧೂರ್ನಂತಹ ಕಾರ್ಯತಂತ್ರದ ಚೌಕಟ್ಟುಗಳ ಮೂಲಕ ವ್ಯಕ್ತಪಡಿಸಲಾಗಿದೆ, ಇದು ವಿಶ್ವಾಸಾರ್ಹ ರಕ್ಷಣಾತ್ಮಕ ಕ್ರಮ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಒತ್ತಿಹೇಳುತ್ತದೆ.
ಭಾರತ ಇಂದಿಗೂ ಮೊದಲಿಗನಾಗಿ ಅಣ್ವಸ್ತ್ರ ಬಳಸುವುದಿಲ್ಲ ಎಂಬ ತನ್ನ ನಿಲುವಿಗೆ ಬದ್ಧವಾಗಿದೆ ನಿಂತಿದೆ. ಆದರೆ ಇತ್ತೀಚಿಗಿನ ಸಂದರ್ಭದಲ್ಲಿ ಈ ನಿಲುವನ್ನು ಅಗತ್ಯಬಿದ್ದರೆ ಬದಲಾಯಿಸುತ್ತೇವೆ ಎಂಬ ಸಂದೇಶವನ್ನೂ ಸರ್ಕಾರ ನೀಡಿದೆ. ಶತ್ರಗಳೇ ಸುತ್ತಿಕೊಂಡಿರುವ ಭಾರತಕ್ಕೆ ಅಣ್ವಸ್ತ್ರವನ್ನು ಹೊಂದುವುದು ಅನಿವಾರ್ಯವೇ ಆಗಿದೆ.
ಭಾರತದ ವಿಕಸನಗೊಳ್ಳುತ್ತಿರುವ ರಕ್ಷಣಾ ವ್ಯವಸ್ಥೆಯಲ್ಲಿ ಅಗ್ನಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳು, S-400 ಮತ್ತು ಆಕಾಶ್ ವಾಯು ರಕ್ಷಣೆಗಳು, ವಿಸ್ತರಿಸುತ್ತಿರುವ ನೌಕಾ ಸಾಮರ್ಥ್ಯಗಳು ಇವೆ.
2025ರ ಮೇ 7-10ರ ಆಪರೇಷನ್ ಸಿಂದೂರ್ ಮೂಲಕ ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ರಫೇಲ್ ಜೆಟ್ಗಳಿಂದ SCALP ಕ್ಷಿಪಣಿಗಳು ಮತ್ತು HAMMER ಬಾಂಬ್ಗಳನ್ನು ಹಾರಿಸಿ ಪಾಕಿಸ್ಥಾನ ಮತ್ತು PoK ಯಲ್ಲಿನ 9 ಭಯೋತ್ಪಾದಕ ತಾಣಗಳ ಮೇಲೆ 14 ನಿಖರ ದಾಳಿಗಳನ್ನು ನಡೆಸಿದವು. ಬ್ರಹ್ಮೋಸ್ 11 ಪಾಕ್ ವಾಯುನೆಲೆಗಳನ್ನು ಹೊಡೆದಿತ್ತು, S-400 ಬೆದರಿಕೆಗಳನ್ನು ತಡೆಯಿತು. ಇದು ಪುಟ್ಟ, ಸ್ವದೇಶಿ ಶಸ್ತ್ರಾಗಾರಗಳು ಪೂರ್ಣ ಯುದ್ಧ ಅಥವಾ ಮೈತ್ರಿ ಅವಲಂಬನೆಯಿಲ್ಲದೆ ನಿರ್ಣಾಯಕ ಪ್ರತಿಕ್ರಿಯೆಯನ್ನು ಯಾವ ಮಟ್ಟಕ್ಕೆ ನೀಡಬಲ್ಲವು ಎಂಬುದನ್ನು ಸಾಬೀತುಪಡಿಸಿತು.
ನಿಶ್ಶಸ್ತ್ರೀಕರಣದ ದ್ವಂದ್ವ
ಮಾರ್ಚ್ 5ರ ನಿಶ್ಶಸ್ತ್ರೀಕರಣ ದಿನವು ಅಣ್ವಸ್ತ್ರ ಮುಕ್ತ ಜಗತ್ತಿನ ಶಾಶ್ವತ ಆಕಾಂಕ್ಷೆಯನ್ನು ಎತ್ತಿಹಿಡಿಯುತ್ತದೆ. ಭಾರತ ಈ ಆಕಾಂಕ್ಷೆಯನ್ನು ತಿರಸ್ಕರಿಸುವುದಿಲ್ಲ. ಆದರೆ ದೊಡ್ಡಣ್ಣ ಎನಿಸಿಕೊಂಡ ರಾಷ್ಟ್ರಗಳು ಬೇಕಾಬಿಟ್ಟಿ ಶಸ್ತ್ರಗಳನ್ನು ಸಂಗ್ರಹಿಸಿ ಉಳಿದ ದೇಶಗಳಿಗೆ ನಿರಸ್ತ್ರೀಕರಣದ ಭಾಷಣ ಬಿಗಿಯುತ್ತವೆ. ಕೆಲವರು ವಿಶಾಲ ಶಸ್ತ್ರಾಗಾರಗಳನ್ನು ಉಳಿಸಿಕೊಂಡು ಇತರರ ಶಸ್ತ್ರಗಾರವನ್ನು ಮಿತಿಗೊಳಿಸುವ ಪ್ರಯತ್ನ ನಡೆಸುವುದು ಸಲ್ಲದು.
ಭಾರತ ಶಸ್ತ್ರ ಸಜ್ಜುಗೊಳಿಸುತ್ತಿರುವುದು ತನ್ನ ಬದುಕುಳಿಯುವಿಕೆಗಾಗಿ
ಚೀನಾ ವಿಸ್ತರಣಾವಾದಿ ಧೋರಣೆಯಲ್ಲಿದೆ, ಪಾಕಿಸ್ತಾನ ಪ್ರಾಕ್ಸಿ ಯುದ್ಧದಲ್ಲಿ ಸಕ್ರಿಯವಾಗಿದೆ. ಗಲ್ವಾನ್ ಅಥವಾ ಪಹಲ್ಗಾಮ್ನಂತಹ ಘಟನೆಗಳು ಭಾರತವು ಶಸ್ತ್ರ ಸಂಗ್ರಹಿಸುವುದನ್ನು ಅನಿವಾರ್ಯವಾಗಿಸಿವೆ.
ಅನೇಕ ರಾಷ್ಟ್ರಗಳಿಗೆ ನಿಶ್ಶಸ್ತ್ರೀಕರಣ ನೈತಿಕ ಅಗತ್ಯ. ಭಾರತಕ್ಕೆ ಅದು ಷರತ್ತುಬದ್ಧ ಗುರಿ. ಗಲ್ವಾನ್ನಂತೆ ಎಲ್ಲಾ ಯುದ್ಧಗಳನ್ನು ಶಸ್ತ್ರವಿಲ್ಲದೆ ನಡೆಸಲಾಗುವುದಿಲ್ಲ. ಭಾರತದ ತಾಳ್ಮೆಯನ್ನು ದೌರ್ಬಲ್ಯ ಎಂದುಕೊಂಡಿರುವ ರಾಷ್ಟ್ರಗಳು ದಂಡೆತ್ತಿ ಬರುವುದನ್ನು ತಡೆಯುವುದು ಭಾರತಕ್ಕೆ ಅನಿವಾರ್ಯ.
ನಿಶ್ಶಸ್ತ್ರೀಕರಣದ ಕನಸು ಸುಂದರವಾದರೂ, ಅಪಾಯಕಾರಿ ನೆರೆಯಲ್ಲಿ ಭದ್ರತೆಗೆ ಸಿದ್ಧತೆಯೇ ಮೊದಲು. ಹೀಗಾಗಿ ಭಾರತ ಆದರ್ಶವಾದದ ಮಿತಿಯನ್ನು ಮತ್ತು ವಾಸ್ತವದ ಬಲವನ್ನು ನೆನಪಿಟ್ಟುಕೊಂಡು ಮುಂದಡಿ ಇಡುತ್ತಿದೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


