ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿಯನ್ನು ಎಳೆ ಎಳೆಯಾಗಿ ತೆರೆದಿಟ್ಟರು ಮತ್ತು ಕಾಂಗ್ರೆಸ್ ವಿರುದ್ಧ ಮಾತಿನ ಛಾಟಿ ಬೀಸಿದರು.
“ಹಿಂದೆ ಗ್ಯಾಸ್ ಸಂಪರ್ಕ ಎಂಬುದು ದೊಡ್ಡಸ್ಥಿಕೆಯ ಸಂಕೇತವಾಗಿತ್ತು. ಈಗ, ಬಡವಾತಿ ಬಡವರಿಗೆ ಗ್ಯಾಸ್ ಸಂಪರ್ಕಕ್ಕೆ ಪ್ರವೇಶವಿದೆ. ಬಡವರಿಗೆ ಬ್ಯಾಂಕ್ ಖಾತೆಗಳಿಗೆ ಪ್ರವೇಶವಿದೆ, ಸೇವೆ ವಿತರಣೆಯಲ್ಲಿ ಡಿಬಿಟಿ ಸಹಾಯ ಮಾಡುತ್ತಿದೆ. ಕಳೆದ ವರ್ಷಗಳಲ್ಲಿ ಈ ದೇಶವು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡಿದೆ. ಈಗ ಯೋಜನೆಗಳು ಕಾರ್ಯಗತಗೊಳ್ಳುವ ವೇಗ ಹೆಚ್ಚಾಗಿದೆ. ಗ್ರಾಮಸ್ಥರಿಗೆ ಈಗ ಶೌಚಾಲಯವಿದೆ” ಎಂದಿದ್ದಾರೆ
ಮುಂಬರುವ ವರ್ಷಗಳಲ್ಲಿ ಭಾರತವು ಹೇಗೆ ಜಾಗತಿಕ ನಾಯಕತ್ವದ ಪಾತ್ರವನ್ನು ವಹಿಸುತ್ತದೆ ಎಂಬುದರ ಕುರಿತು ಯೋಚಿಸಲು ‘ಆಜಾದಿ ಕಾ ಅಮೃತ್ ಮಹೋತ್ಸವ’ ಸೂಕ್ತ ಸಮಯ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಹಲವಾರು ಅಭಿವೃದ್ಧಿಯ ದಾಪುಗಾಲುಗಳನ್ನು ಇಟ್ಟಿದೆ ಎಂಬುದು ಸತ್ಯ ಎಂದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಹೊಸ ವಿಶ್ವ ಕ್ರಮಗಳಿವೆ. ನಾವು ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದೇವೆ. ಭಾರತವು ಜಾಗತಿಕ ನಾಯಕತ್ವದ ಪಾತ್ರವನ್ನು ತೆಗೆದುಕೊಳ್ಳಬೇಕು. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, “ಇಷ್ಟು ಸೋಲುಗಳ ನಂತರವೂ ಕಾಂಗ್ರೆಸ್ ದುರಹಂಕಾರ ಕಡಿಮೆ ಆಗಿಲ್ಲ. ಪ್ರಶ್ನೆ ಚುನಾವಣಾ ಫಲಿತಾಂಶದ ಬಗ್ಗೆ ಅಲ್ಲ, ಆದರೆ ಇಷ್ಟು ದಿನ ಅಧಿಕಾರದಲ್ಲಿದ್ದವರ ಉದ್ದೇಶದ ಬಗ್ಗೆ. ಜನರಿಗೆ ಎಲ್ಲೆಲ್ಲಿ ಅವಕಾಶ ಸಿಕ್ಕಿತೋ, ಅಲ್ಲಲ್ಲಿ ಅವರು ಕಾಂಗ್ರೆಸ್ ಅನ್ನು ಮತ್ತೆ ಪ್ರವೇಶಿಸದಂತೆ ಮಾಡಿದರು. ಟೀಕೆ ಪ್ರಜಾಪ್ರಭುತ್ವಕ್ಕೆ ಆಭರಣವಿದ್ದಂತೆ. ಆದರೆ ಕುರುಡು ವಿರೋಧ ಪ್ರಜಾಪ್ರಭುತ್ವಕ್ಕೆ ಅಪಮಾನ” ಎಂದಿದ್ದಾರೆ.
ಕೊರೋನಾವೈರಸ್ ಸಮಯದಲ್ಲಿ ಕಾಂಗ್ರೆಸ್ ಎಲ್ಲಾ ಮಿತಿಗಳನ್ನು ಮೀರಿದೆ. ಇರುವ ಸ್ಥಳದಲ್ಲಿಯೇ ಇರಲು ತಜ್ಞರು ಸಲಹೆ ನೀಡಿದಾಗ, ಕಾಂಗ್ರೆಸ್ ವಲಸೆ ಕಾರ್ಮಿಕರನ್ನು ಪ್ರಚೋದಿಸಿತು. ಮೊದಲ ಅಲೆಯ ಸಮಯದಲ್ಲಿ ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈ ತೊರೆಯಲು ಉಚಿತ ರೈಲು ಟಿಕೆಟ್ ನೀಡಿತು. ಅದೇ ಸಮಯದಲ್ಲಿ, ದೆಹಲಿ ಸರ್ಕಾರವು ವಲಸೆ ಕಾರ್ಮಿಕರಿಗೆ ನಗರವನ್ನು ತೊರೆಯುವಂತೆ ಹೇಳಿತು ಮತ್ತು ಅವರಿಗೆ ಬಸ್ಸುಗಳನ್ನು ಒದಗಿಸಿತು. ಪರಿಣಾಮವಾಗಿ, ಕೋವಿಡ್ ಪಂಜಾಬ್, ಯುಪಿ ಮತ್ತು ಉತ್ತರಾಖಂಡದಲ್ಲಿ ವೇಗವಾಗಿ ಹರಡಿತು ಎಂದಿದ್ದಾರೆ.
ಕೊರೊನಾವೈರಸ್ ಜಾಗತಿಕ ಸಾಂಕ್ರಾಮಿಕವಾಗಿದೆ ಆದರೆ ಕೆಲವರು ಅದನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಕೋವಿಡ್ ಮೋದಿ ಅವರ ಪ್ರತಿಷ್ಠೆಗೆ ಹಾನಿ ಮಾಡುತ್ತದೆ ಎಂದು ಕೆಲವರು ಭಾವಿಸಿದ್ದರು ಎಂದಿದ್ದಾರೆ.
“ಕಾಂಗ್ರೆಸ್ ಗಾಂಧಿಯವರ ಹೆಸರನ್ನು ಬಳಸುತ್ತದೆ. ಆದರೆ ಭಾರತವು ಆತ್ಮನಿರ್ಭರ ಆಗಬೇಕೆಂದು ಬಯಸುವುದಿಲ್ಲ. ಗಾಂಧಿಯ ಕನಸುಗಳು ನನಸಾಗುವುದನ್ನು ನೋಡಲು ಬಯಸುವುದಿಲ್ಲ. ನೀವು ನನ್ನನ್ನು ವಿರೋಧಿಸಬಹುದು, ಆದರೆ ನೀವು ಫಿಟ್ ಇಂಡಿಯಾ ಚಳವಳಿ ಮತ್ತು ಇತರ ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದೀರಿ? ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಬಾರದು ಎಂದು ನೀವು ಮನಸ್ಸು ಮಾಡಿದ್ದೀರಿ ಎಂದು ನನಗನಿಸುತ್ತದೆ” ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾತಿನೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.