ಶ್ರೀನಗರ : ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ದಕ್ಷಿಣ ಭಾಗದಿಂದ ಸಂಪೂರ್ಣವಾಗಿ ನಾಶವಾಗುವ ಹಾದಿಯಲ್ಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೋಮವಾರ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ವಾಂಚಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಪಾಕಿಸ್ಥಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದ ಮೂವರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆ ಮಾಡಿದ ನಂತರ ಸಿಂಗ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಶ್ರೀನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಸಂಘಟನೆಯ ಉನ್ನತ ಕಮಾಂಡರ್ ವಸೀಮ್ ಅಹ್ಮದ್ ವಾನಿ ಸೇರಿದಂತೆ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
“ಈ ಉಗ್ರರು 2017 ರಿಂದ ಸಕ್ರಿಯರಾಗಿದ್ದರು ಮತ್ತು ಅವರ ವಿರುದ್ಧ 19 ಎಫ್ಐಆರ್ಗಳು ದಾಖಲಾಗಿವೆ. ಜೈನಪೋರಾದ ಆದಿಲ್ ಬಶೀರ್ ಶೇಖ್ ಮತ್ತು ಜಹಾಂಗೀರ್ ಅವರು ವಾನಿಯ ಇತರ ಇಬ್ಬರು ಸಹಚರರು” ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಮಾಜಿ ಶಾಸಕ ಐಜಾಜ್ ಅಹ್ಮದ್ ಅವರಿಗೆ ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದ ಆದಿಲ್ ಬಶೀರ್ ಶೇಖ್, 2018 ರಲ್ಲಿ ಏಳು ಎಕೆ -47 ಮತ್ತು ಪಿಸ್ತೂಲ್ ಗಳನ್ನು ಲಪಟಾಯಿಸಿದ ಬಳಿಕ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿಕೊಂಡಿದ್ದ. ಶೋಪಿಯಾನ್ ಜಿಲ್ಲೆಯಲ್ಲಿ ನಾಲ್ವರು ಪೊಲೀಸರು ಮತ್ತು ನಾಲ್ವರು ನಾಗರಿಕರ ಹತ್ಯೆಯಲ್ಲಿ ಈತ ಭಾಗಿಯಾಗಿದ್ದ ಎಂದು ಅವರು ಮಾಹಿತಿ ನೀಡಿದರು.
ಭಯೋತ್ಪಾದಕರಾಗಿ ಬದಲಾದ ಮಾಜಿ ಪೊಲೀಸರನ್ನು ಕೊಲ್ಲುವ ಬಗ್ಗೆ ಉತ್ತರಿಸಿದ ಡಿಜಿಪಿ, “ನೆಲದ ಕಾನೂನಿಗೆ ವಿರುದ್ಧವಾಗಿ ಯಾರು ಹೋದರೂ ಶಿಕ್ಷಯನ್ನು ಎದುರಿಸಲೇ ಬೇಕಾಗುತ್ತದೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.