ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಮಾಡಿದ ಆರೋಪಿಗಳನ್ನು ಅವರ ಪತ್ನಿ ಸೋನಿಯಾ ಗಾಂಧಿ ಅವರು ಕ್ಷಮಿಸಿದಂತೆ ನಿರ್ಭಯಾ ಅತ್ಯಾಚಾರಿಗಳನ್ನು ಕೂಡ ಆಕೆಯ ತಾಯಿ ಕ್ಷಮಿಸಬೇಕು ಎಂದು ಹೇಳಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ.
ಜೈಸಿಂಗ್ ಅವರ ಮನವಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನಿರ್ಭಯಾ ತಾಯಿ ಆಶಾ ದೇವಿ ಅವರು, “ಜೈಸಿಂಗ್ ಅವರಂತಹ ಜನರಿಂದಲೇ ಅತ್ಯಾಚಾರಕ್ಕೊಳಗಾದವರಿಗೆ ನ್ಯಾಯ ದೊರಕುತ್ತಿಲ್ಲ” ಎಂದು ಹೇಳಿದ್ದಾರೆ.
“ನನಗೆ ಅಂತಹ ಸಲಹೆಯನ್ನು ನೀಡಲು ಇಂದಿರಾ ಜೈಸಿಂಗ್ ಯಾರು? ಇಡೀ ದೇಶವೇ ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ಬಯಸುತ್ತಿದೆ. ಜೈಸಿಂಗ್ ಅವರಂತಹ ಜನರ ಕಾರಣದಿಂದಾಗಿಯೇ ಅತ್ಯಾಚಾರಕ್ಕೊಳಗಾದವರಿಗೆ ನ್ಯಾಯ ದೊರಕುತ್ತಿಲ್ಲ. ಅವರು ಮಾನವ ಹಕ್ಕುಗಳ ನೆಲೆಯಲ್ಲಿ ಹಣ ಸಂಪಾದಿಸುತ್ತಿದ್ದಾರೆ. ನನಗೆ ಅವರ ಸಲಹೆಯ ಅಗತ್ಯವಿಲ್ಲ” ಎಂದು ಆಶಾ ದೇವಿ ಹೇಳಿದ್ದಾರೆ.
ನಾಲ್ವರು ಅಪರಾಧಿಗಳನ್ನು ಕ್ಷಮಿಸುವಂತೆ ಕೇಳಿದ ಜೈಸಿಂಗ್ ಅವರ ಧೈರ್ಯಕ್ಕೆ ಆಘಾತ ವ್ಯಕ್ತಪಡಿಸಿದ ಆಶಾ ದೇವಿ, ಸುಪ್ರೀಂ ಕೋರ್ಟ್ನ ಹಿರಿಯ ವಕೀಲರು ತನಗೆ ಇಂತಹ ಸಲಹೆಯನ್ನು ನೀಡುತ್ತಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. “ನಾನು ಅವರನ್ನು ಸುಪ್ರೀಂ ಕೋರ್ಟ್ನಲ್ಲಿ ಹಲವು ಬಾರಿ ಭೇಟಿಯಾಗಿದ್ದೆ, ಒಮ್ಮೆಯೂ ಅವರು ನನ್ನ ಯೋಗಕ್ಷೇಮವನ್ನು ವಿಚಾರಿಸಲಿಲ್ಲ, ಆದರೆ ಇಂದು ಅವರು ಅಪರಾಧಿಗಳ ಪರವಾಗಿ ನನ್ನ ಬಳಿ ಮಾತನಾಡುತ್ತಿದ್ದಾರೆ. ಇಂತಹ ಜನರು ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ, ಆದ್ದರಿಂದಲೇ ಅತ್ಯಾಚಾರ ಘಟನೆಗಳು ನಿಲ್ಲುತ್ತಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.