ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಿದ್ದಾರೆ. ಈ ವೇಳೆ ಮಸೂದೆಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವು ಪ್ರತಿಪಕ್ಷಗಳು ತೀವ್ರ ಸ್ವರೂಪದ ವಿರೋಧವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೀವ್ರ ಗದ್ದಲ ಏರ್ಪಟ್ಟಿತು.
ಮಸೂದೆಯನ್ನು ಮಂಡನೆಗೊಳಿಸುವುದಕ್ಕೂ ಮುನ್ನ ಮಾತನಾಡಿದ ಅಮಿತ್ ಶಾ ಅವರು, ಸದನದಲ್ಲಿ ಕೇಳಲಾಗುವ ಪ್ರತಿಯೊಂದು ಪ್ರಶ್ನೆಗೂ ನಾನು ಉತ್ತರಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿ, ಸದನವನ್ನು ಬಿಟ್ಟು ಹೊರ ನಡೆಯಬೇಡಿ ಎಂದು ಕಿವಿಮಾತು ಹೇಳಿದರು.
ಪೌರತ್ವ (ತಿದ್ದುಪಡಿ) ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎನ್ನುವ ಪ್ರತಿಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಶಾ ಅವರು, ಈ ಮಸೂದೆಯು ಸಂವಿಧಾನದ ಯಾವುದೇ ವಿಧಿಗೂ ವಿರುದ್ಧವಾಗಿಲ್ಲ ಎಂದಿದ್ದಾರೆ. ಅಲ್ಲದೇ, 1971ರಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಆಶ್ರಯ ನೀಡುವ ಇಂದಿರಾಗಾಂಧಿಯವರ ನಿರ್ಧಾರ ಕೂಡ ಅಸಂವಿಧಾನಿಕವಾಗಿತ್ತೇ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
1971ರ ಬಳಿಕವೂ ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಅತ್ಯಂತ ಹೀನಾಯವಾಗಿ ದೌರ್ಜನ್ಯಕ್ಕೀಡು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ಬಳಿಕ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜನೆಗೊಳಿಸಿದಂತಹ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಮಿತ್ ಶಾ ಅವರು, ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅನುಷ್ಟಾನಕ್ಕೆ ತರುವ ಅಗತ್ಯತೆಯನ್ನು ಪ್ರತಿಪಾದಿಸಿದರು.
“ಒಂದು ವೇಳೆ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯದೇ ಇರುತ್ತಿದ್ದರೆ ಈ ಮಸೂದೆಯನ್ನು ತರುವುದು ಅಷ್ಟೊಂದು ಅಗತ್ಯವಾಗಿರಲಿಲ್ಲ” ಎಂದಿದ್ದಾರೆ.
ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅರ್ಥ ಮಾಡಿಕೊಳ್ಳುವ ಮೊದಲು ಮೂರು ನೆರೆಹೊರೆ ರಾಷ್ಟ್ರಗಳಾದ ಪಾಕಿಸ್ಥಾನ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಅಮಿತ್ ಶಾ ಪ್ರತಿಪಕ್ಷಗಳಿಗೆ ಹೇಳಿದ್ದಾರೆ. ಈ ಮೂರು ರಾಷ್ಟ್ರಗಳು ಇಸ್ಲಾಂ ಅನ್ನು ತಮ್ಮ ರಾಷ್ಟ್ರ ಧರ್ಮವಾಗಿ ಸ್ವೀಕಾರ ಮಾಡಿವೆ.
ಮಸೂದೆಯಿಂದ ಯಾಕೆ ಮುಸ್ಲಿಮರನ್ನು ಹೊರಗಿಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೂರು ರಾಷ್ಟ್ರಗಳಲ್ಲಿ ಮುಸ್ಲಿಮರನ್ನು ದೌರ್ಜನ್ಯಕ್ಕೀಡು ಮಾಡಲಾಗುತ್ತಿಲ್ಲ ಎಂದಿದ್ದಾರೆ.
ಅಲ್ಲದೇ, ಒಂದು ವೇಳೆ ಈ ಮೂರು ರಾಷ್ಟ್ರಗಳ ಯಾವುದಾದರೂ ಮುಸ್ಲಿಂ ಪ್ರಜೆಗಳು ಕಾನೂನುಬದ್ಧವಾಗಿ ಭಾರತದ ಪೌರತ್ವಕ್ಕೆ ಮನವಿಯನ್ನು ಸಲ್ಲಿಸಿದರೆ ಭಾರತ ಸರ್ಕಾರವು ಈ ಬಗ್ಗೆ ಪರಿಶೀಲನೆಯನ್ನು ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.