ಇತ್ತೀಚೆಗೆ ಒಂದು ಮಂಗಳವಾರ ಬೆಂಗಳೂರಿನ ಜೆಪಿ ನಗರದ ಸಾಪ್ತಾಹಿಕ ಮಿಲನ ಶಾಖೆ ಮುಗಿಸಿ, ಸಾರಕ್ಕಿಯಲ್ಲಿ ಮನೆಗೆ ತರಕಾರಿ ಖರೀದಿಸಲು ಹೋಗಿದ್ದೆ. ಪ್ರತಿ ಮಂಗಳವಾರ ಸಾಪ್ತಾಹಿಕ ಮಿಲನ ಮುಗಿಸಿದ ಬಳಿಕ ಮನೆಗೆ ತರಕಾರಿ ತೆಗೆದುಕೊಂಡು ಹೋಗುವುದು ನನ್ನ ರೂಢಿ. ಆ ದಿನವೂ ತರಕಾರಿ ಖರೀದಿಸಿ ಪಾರ್ಕಿಂಗ್ ಜಾಗದ ಬಳಿಯಿದ್ದ ಸ್ಕೂಟರ್ ತೆಗೆದುಕೊಳ್ಳಲು ಹೋದೆ. ಬೆಳಗಿನ ಹೊತ್ತು ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡಲು ಜಾಗವೇ ಇರುವುದಿಲ್ಲ. ಆ ದಿನ ಕೂಡ ಹಾಗೆಯೇ ಆಗಿತ್ತು. ಒಬ್ಬರು ಗೃಹಸ್ಥರು ನಾನು ಸ್ಕೂಟರ್ ತೆಗೆಯುವುದನ್ನೇ ಕಾಯುತ್ತಿದ್ದರು. ನಾನಾದರೋ ತರಕಾರಿ ಚೀಲವನ್ನು ಸ್ಕೂಟರ್ನಲ್ಲಿಟ್ಟು, ಅನಂತರ ಸ್ಟ್ಯಾಂಡ್ ತೆಗೆದು, ಆಮೇಲೆ ಹೆಲ್ಮೆಟ್ ಧರಿಸಿ ಸ್ಕೂಟರ್ ಸ್ಟಾರ್ಟ್ ಮಾಡಬೇಕಿತ್ತು. ಬೆಂಗಳೂರಿನಲ್ಲಿ ಜನರಿಗೆ ವ್ಯವಧಾನವೇ ಇರುವುದಿಲ್ಲ. ಒಂದು ಸೆಕೆಂಡ್ ತಡವಾದರೂ ಜನ ಜಗಳಕ್ಕೇ ನಿಲ್ಲುತ್ತಾರೆ. ಆದರೆ ಆ ದಿನ ನಾನು ನಿಧಾನವಾಗಿ ಪಾರ್ಕಿಂಗ್ ಜಾಗದಿಂದ ಸ್ಕೂಟರ್ ತೆಗೆಯುತ್ತಿದ್ದರೂ ಕಾಯುತ್ತಿದ್ದ ಆ ಗೃಹಸ್ಥರು ಮಾತ್ರ ಸಮಾಧಾನಚಿತ್ತರಾಗಿಯೇ ಇದ್ದರು. ನಾನು ಇನ್ನೇನು ಸ್ಕೂಟರ್ ಏರಿ ಹೊರಡಬೇಕೆನ್ನುವಷ್ಟರಲ್ಲಿ ಅವರು, `ಆರೆಸ್ಸೆಸ್ಸಾ?’ ಎಂದು ಕೇಳಿದರು. ನಾನು ಹೌದು ಎಂದೆ. ನಾನು ಸಂಘದ ನಿಕ್ಕರ್ ಧರಿಸಿದ್ದರಿಂದ ಅವರು ಆ ಪ್ರಶ್ನೆ ಕೇಳಿದ್ದರು. ನಂತರ ಅವರು ನಗುನಗುತ್ತಾ ಅಭಿಮಾನದಿಂದ `ಮೋದಿ ಸರ್ಕಾರ ಬಂದಿದೆ’ ಎಂದರು. ಮೋದಿ ಸರ್ಕಾರಕ್ಕೂ ಸಂಘದ ನಿಕ್ಕರ್ಗೂ ಅವರು ಸಂಬಂಧ ಕಲ್ಪಿಸಿದ್ದನ್ನು ನೋಡಿ ನನಗೆ ಒಳಗೊಳಗೇ ಆಶ್ಚರ್ಯವಾಯಿತು. ನಗುವೂ ಬಂದಿತು. ಅದಾದ ನಂತರ ನಾನು ಮನೆಗೆ ಹೊರಟೆ. ಆದರೆ ಆ ಗೃಹಸ್ಥರ ಉದ್ಗಾರ ನನ್ನ ಮನಸ್ಸನ್ನು ಪದೇಪದೇ ಕಾಡುತ್ತಲೇ ಇತ್ತು.
ಗೆಳೆಯ ಪ್ರಸನ್ನಕುಮಾರ್ ಅವರ ಮನೆಯ ಮುಂದೆ ನಿಂತು ನಾವಿಬ್ಬರೂ ಮಾತನಾಡುತ್ತಿದ್ದೆವು. ಆಗಷ್ಟೇ ಚುನಾವಣಾ ಫಲಿತಾಂಶ ಬಂದು ೨ ದಿನಗಳಾಗಿತ್ತು. ಆ ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ಬಳಿಗೆ ಬಂದು , ಪ್ರಸನ್ನಕುಮಾರ್ ಅವರ ಕೈ ಕುಲುಕಿ `ಕಂಗ್ರಾಜುಲೇಶನ್ಸ್ ಸಾರ್’ ಎಂದರು. `ಏನು ವಿಷಯ?’ ಎಂದು ಪ್ರಸನ್ನಕುಮಾರ್ ಕೇಳಿದಾಗ ಅವರು ಹೇಳಿದ್ದು: `ನೀವೆಲ್ಲ ಬಹಳ ವರ್ಷಗಳಿಂದ ಆರೆಸ್ಸೆಸ್ನಲ್ಲಿ ಕೆಲಸ ಮಾಡುತ್ತಾ ಬಂದಿದ್ದಿರಿ. ನಿಮ್ಮ ಶ್ರಮದಿಂದಲೇ ಈಗ ಮೋದಿ ಸರ್ಕಾರ ಬಂದಿದೆ’ ಎನ್ನುತ್ತಾ ಅವರು ಮತ್ತೊಮ್ಮೆ ಶುಭಾಶಯ ಹೇಳಿ ಮುಂದೆ ಹೊರಟರು.
ಸಂಘ ಪರಿವಾರದ ಬಹುತೇಕ ಕಾರ್ಯಕರ್ತರಿಗೆ ಇಂತಹ ಅನುಭವಗಳು ಆಗಿಯೇ ಇರುತ್ತದೆ. ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾಗಿದ್ದಕ್ಕೆ ಸಂಘದ ಸ್ವಯಂಸೇವಕರ ಪರಿಶ್ರಮವೇ ಕಾರಣ ಎಂದು ಬಹುತೇಕ ಜನ ಭಾವಿಸಿರುವುದು ಸುಳ್ಳೇನಲ್ಲ. ತಮ್ಮ ಭಾವನೆಗಳನ್ನು ಅವರು ವ್ಯಕ್ತಪಡಿಸಿದಾಗ ಅದರಲ್ಲಿ ಅಭಿಮಾನದ ಬೆಳ್ಳಿರೇಖೆ ಮಾತ್ರ ಕಾಣಿಸುವುದು ಗಮನಿಸಬೇಕಾದ ಸಂಗತಿ. ಬಿಜೆಪಿಯಲ್ಲೇ ಯಾರೋ ಒಬ್ಬರು ಪ್ರಧಾನಿಯಾಗಿದ್ದರೆ ಬಹುಶಃ ಸಂಘದ ಸ್ವಯಂಸೇವಕರಿಗೆ ಹೀಗೆ ಶುಭಾಶಯ ಹೇಳುವವರ ಸಂಖ್ಯೆ ಈ ಪರಿ ಇರುತ್ತಿರಲಿಲ್ಲವೇನೋ. ಆದರೆ ಈಗ ದೇಶದ ಪ್ರಧಾನಿಯಾದವರು ಸಂಘದ ಸ್ವಯಂಸೇವಕರು, ಸಂಘದ ಪ್ರಚಾರಕರಾಗಿದ್ದವರು. ಅಷ್ಟೇ ಅಲ್ಲ, ರಾಜಕೀಯ ರಂಗದಲ್ಲಿದ್ದರೂ ರಾಜಕೀಯದ ಕೆಸರು ಅಂಟಿಸಿಕೊಳ್ಳದೆ, ಶುದ್ಧಹಸ್ತರಾಗಿರುವುದು ಮೋದಿ ಅವರನ್ನು ಜನರು ಗೌರವದಿಂದ ಕಾಣುವುದಕ್ಕೆ ಇನ್ನೊಂದು ಕಾರಣ. ಹಿಂದೆ ವಾಜಪೇಯಿ ಪ್ರಧಾನಿಯಾದಾಗಲೂ ಇಂತಹದೇ ಅಭಿಮಾನದ ಬೆಳ್ಳಿರೇಖೆ ಹೊಳೆದಿತ್ತು.
ಮೊನ್ನೆ ಮೋದಿ ಪಾರ್ಲಿಮೆಂಟ್ ಭವನದಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಗೆ ಆಗಮಿಸುವ ಮುನ್ನ ಪಾರ್ಲಿಮೆಂಟ್ ಬಾಗಿಲಿಗೆ ಸಾಷ್ಟಾಂಗವೆರಗಿದ್ದು, ಅನಂತರ ಸಂಸದರ ಸಭೆಯಲ್ಲಿ `ಈ ಗೆಲುವು ಇಡೀ ದೇಶದ ಜನರದ್ದು , ಭಾರತದ್ದು. ನಾನು ನಿಮಿತ್ತ ಮಾತ್ರ. ನನ್ನನ್ನು ಬೆಳೆಸಿದ್ದು ಪಕ್ಷ ಹಾಗೂ ಕಾರ್ಯಕರ್ತರು’ ಎಂದು ಭಾವೋದ್ವಿಗ್ನರಾಗಿ ನುಡಿದಿದ್ದು ಇಡೀ ದೇಶದ ಜನತೆಯ ಮನಸ್ಸುಗಳನ್ನು ಆಳವಾಗಿ ತಟ್ಟಿವೆ. ಅವರನ್ನು ಹಿಗ್ಗಾಮುಗ್ಗಾ ದ್ವೇಷಿಸುವವರೂ ಕೂಡ ಅವರ ಈ ನಡವಳಿಕೆ ಕಂಡು ಬೆಚ್ಚಿ ಬೆರಗಾಗಿದ್ದಾರೆ. ನಾವು ಹಿಂದೆ ನೋಡಿದ, ಟೀಕಿಸಿದ ಮೋದಿ ಇವರೇನಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕೆಲವು ಕಮ್ಯುನಿಸ್ಟ್ ಪಕ್ಷದ ನಾಯಕರು ಮೋದಿಯ ಇಂತಹ ನಡವಳಿಕೆ, ವ್ಯಕ್ತಿತ್ವ ಕಂಡು ದಿಗಿಲಾಗಿರುವುದು ಮಾತ್ರವಲ್ಲ , ನಮ್ಮ ಪಕ್ಷದಲ್ಲಿ ಇಂತಹ ನಾಯಕರೇಕೆ ತಯಾರಾಗುತ್ತಿಲ್ಲ? ಎಂದು ತಲೆ ಕೆಡಿಸಿಕೊಂಡಿದ್ದೂ ಉಂಟು. ಮೋದಿಗೆ ಆ ಸಂಸದೀಯ ಸಭೆಗೆ ಬರುವ ಮೊದಲು ಸಂಘದ ಸರಸಂಘಚಾಲಕರಾಗಲಿ, ಬಿಜೆಪಿಯ ಹಿರಿಯ ನಾಯಕರಾಗಲಿ ಪಾರ್ಲಿಮೆಂಟ್ ಭವನದ ಬಾಗಿಲುಗಳಿಗೆ ನಮಸ್ಕರಿಸಬೇಕು, ಸಂಸದೀಯ ಸಭೆಯಲ್ಲಿ ಹೀಗೆಯೇ ಮಾತನಾಡಬೇಕು ಎಂದು ಮಾರ್ಗದರ್ಶನ ಮಾಡಿರಲಿಲ್ಲ. ಮೋದಿ ಅವರ ಸ್ವಂತ ನಡವಳಿಕೆ, ವ್ಯಕ್ತಿತ್ವ ಅಲ್ಲಿ ಪ್ರಕಟವಾಗಿತ್ತು. ಸಂಘದ ವ್ಯಕ್ತಿ ನಿರ್ಮಾಣ ಕಾರ್ಯ ಎಂತಹದೆಂಬುದಕ್ಕೆ ಇದೊಂದು ಇತ್ತೀಚಿನ ತಾಜಾ ನಿದರ್ಶನ.
12 ವರ್ಷಗಳ ಹಿಂದೆ ಶಾಸಕನೂ ಆಗದೆ ಗುಜರಾತಿನ ಮುಖ್ಯಮಂತ್ರಿ ಹುದ್ದೆಗೆ ಮೋದಿ ಆಯ್ಕೆಯಾಗಿದ್ದರು. ರಾಜಕೀಯದ ಗಂಧಗಾಳಿಯೂ ಇಲ್ಲದ ಈ ವ್ಯಕ್ತಿ ಗುಜರಾತಿನಂತಹ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲರೆ? ಎಂಬ ಸಂದೇಹ ಇತರರಿಗಿರಲಿ, ಸ್ವತಃ ಬಿಜೆಪಿ ಹೈಕಮ್ಯಾಂಡ್ಗೇ ಇತ್ತು. ಏನಾದರೂ ಯಡವಟ್ಟಾದರೇನು ಗತಿ ಎಂಬ ಚಿಂತೆಯೂ ಕಾಡಿದ್ದಿರಬಹುದು. ಆದರೆ ಅದಾಗಿ ೧೨ ವರ್ಷಗಳಲ್ಲಿ ಉಂಟಾದ ಪರಿವರ್ತನೆ ಅಂತಹ ಎಲ್ಲ ಚಿಂತೆಗಳನ್ನೂ ದೂರಗೊಳಿಸಿತ್ತು. ಈಗಲೂ ಅಷ್ಟೆ, ಮೊದಲ ಬಾರಿಗೆ ಲೋಕಸಭಾ ಸದಸ್ಯರಾದ ನರೇಂದ್ರ ಮೋದಿ ಕೇಂದ್ರದಲ್ಲಿ ಮಂತ್ರಿ ಪದವಿಯನ್ನು ನಿಭಾಯಿಸದೆಯೇ, ಯಾವ ಅನುಭವವೂ ಇಲ್ಲದೆ ನೇರವಾಗಿ ಪ್ರಧಾನಿ ಗಾದಿಗೆ ಏರಿದ್ದಾರೆ. ಆದರೆ ಈ ಬಾರಿ ಬಿಜೆಪಿ ಹೈಕಮ್ಯಾಂಡ್ಗೆ ಆಗಲಿ, ಜನರಿಗಾಗಲಿ ಈ ವ್ಯಕ್ತಿ ಏನಾದರೂ ಯಡವಟ್ಟು ಮಾಡಿಬಿಟ್ಟರೆ ಗತಿಯೇನು ಎಂಬ ಚಿಂತೆ ಅಷ್ಟಾಗಿ ಕಾಡಿಲ್ಲ.. 2002 ರಲ್ಲಿದ್ದ ಆ ಚಿಂತೆ ಈಗಿಲ್ಲ. ಚಿಂತೆಯ ಬದಲು ವಿಶ್ವಾಸ ಮೂಡಿದೆ.
ಆಗ ತಾತ್ಸಾರ
ಖಾಕಿ ಚಡ್ಡಿ ಧರಿಸಿದವರ ಬಗ್ಗೆ ಈಗ ಅದ್ಯಾವ ಪರಿ ಅಭಿಮಾನ ಹೊಮ್ಮಿದೆಯೋ ೩೦-೪೦ ವರ್ಷಗಳ ಹಿಂದೆ ಅದೇ ಪ್ರಮಾಣದ ತಾತ್ಸಾರವೂ ಇತ್ತು ಎನ್ನುವುದು ಈಗಿನ ಹೊಸ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಸ್ವಾತಂತ್ರ್ಯದ ಬಳಿಕ ಗಾಂಧೀಜಿ ಹತ್ಯೆಯಾದ ಮೇಲೆ ಸಂಘದ ಮೇಲೆ ಸರ್ಕಾರ ನಿರ್ಬಂಧ ಹೇರಿದಾಗ ಅನೇಕರ ಮನಸ್ಸಿನಲ್ಲಿ ಸಂಘದ ಬಗ್ಗೆ ಒಂದು ಬಗೆಯ ಸಂಶಯ ಮೂಡಿದ್ದು ನಿಜ. ಗಾಂಧಿ ಕೊಂದಿದ್ದು ಸಂಘದವರು ಎಂಬ ವಿರೋಧಿಗಳ ಅಪಪ್ರಚಾರದ ಪರಿಣಾಮ ಇಂತಹ ಸಂಶಯವನ್ನು ಮೂಡಿಸಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಶಾಖೆಗೆ ಹೋಗುವ ಸ್ವಯಂಸೇವಕರ ಬಗ್ಗೆ ಒಂದು ಬಗೆಯ ತಾತ್ಸಾರವಿದ್ದಿದ್ದು ಹೌದು. ಸಂಘದ ಮೇಲೆ ನಿಷೇಧ ತೊಲಗಿದ ಮೇಲೂ ಈ ತಾತ್ಸಾರ ಮುಂದುವರಿದೇ ಇತ್ತು. 70 ರ ದಶಕದಲ್ಲೂ `ಖಾಕಿ ಚಡ್ಡಿಯ ಕಮಂಗಿಗಳೇ, ಕಪ್ಪು ಟೋಪಿಯ ಕಾಗೆಗಳೇ, ಸಂಘಕೆ ಹೋಗುವ ಮಂಗಗಳೇ’ ಎಂದು ಖಾಕಿ ಚಡ್ಡಿ ಧರಿಸಿದ ಸ್ವಯಂಸೇವಕರನ್ನು ಲೇವಡಿ ಮಾಡುತ್ತಿದ್ದುದುಂಟು. ಹೊಸದಾಗಿ ಶಾಖೆಗೆ ಹೋಗುತ್ತಿದ್ದವರು ಇಂತಹ ಲೇವಡಿಯಿಂದ ನೊಂದಿದ್ದೂ ಇದೆ. ಆದರೆ ಬದ್ಧತೆ ಹಾಗೂ ದೃಢಸಂಕಲ್ಪವಿದ್ದ ಸ್ವಯಂಸೇವಕರ ಮೇಲೆ ಇಂತಹ ಲೇವಡಿಗಳು ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ರಾಜ್ಯದ ಅನೇಕ ಕಡೆ ಶಾಖೆಗಳನ್ನು ಆರಂಭಿಸಿದಾಗ ಕೆಲವು ವಿರೋಧಿಗಳು ಶಾಖೆ ನಡೆಸದಂತೆ ತಡೆದು, ಧ್ವಜ ಮಂಡಲದಲ್ಲಿ ಕಸ, ಗಲೀಜು ಸುರಿದದ್ದೂ ಇದೆ. ಶಾಖೆಗೆ ಬರುತ್ತಿದ್ದ ಸ್ವಯಂಸೇವಕರನ್ನು ಅಟ್ಟಾಡಿಸಿಕೊಂಡು ಹೊಡೆದದ್ದೂ ಇದೆ.
ಶಿವಮೊಗ್ಗದ ಒಂದು ಘಟನೆಯನ್ನು ನಾನು ಈಗಲೂ ಮರೆತಿಲ್ಲ. ಸುಮಾರು 1969-70 ರಲ್ಲಿ ದುರ್ಗಿಗುಡಿಯ ಶಾಲೆಯ ಮೈದಾನದಲ್ಲಿ ಬೆಳಗಿನ ಶಾಖೆ ನಡೆಸಲು ಜಿನರಾಜ್ ಜೈನ್ ಎಂಬ ಒಬ್ಬ ವ್ಯಾಪಾರಸ್ಥರು ಬರುತ್ತಿದ್ದರು. ಧ್ವಜ ಹಾಕಿ ಶಾಖೆ ಆರಂಭಿಸಿ ಒಂದು ಗಂಟೆ ಕಾಲ ಸೂರ್ಯ ನಮಸ್ಕಾರ, ವ್ಯಾಯಾಮ, ಯೋಗಾಸನ, ಹಾಡು, ಪ್ರಾರ್ಥನೆ ಇತ್ಯಾದಿ ಚಟುವಟಿಕೆ ನಡೆಸುತ್ತಿದ್ದರು. ಶಾಖೆಯಲ್ಲಿ ಇರುತ್ತಿದ್ದುದು ಮಾತ್ರ ಅವರೊಬ್ಬರೇ! ಆದರೆ ಒಂದು ಗಂಟೆಯ ಶಾಖೆಗೆ ಇದರಿಂದೇನೂ ಭಂಗ ಬಂದಿರಲಿಲ್ಲ. ಪ್ರತಿನಿತ್ಯ ಬೆಳಿಗ್ಗೆ ತಪ್ಪದೇ ಇದೇ ದೃಶ್ಯದ ಪುನರಾವರ್ತನೆ! ಕೆಲವರು `ಈ ಮಾರ್ವಾಡಿಗೆ ಎಲ್ಲೋ ಬುದ್ಧಿ ಕೆಟ್ಟಿರಬೇಕು. ಅದಕ್ಕೆ ಒಬ್ಬನೇ ಮೈದಾನದಲ್ಲಿ ನಿಂತು ಹೀಗೆಲ್ಲ ಮಾಡುತ್ತಿದ್ದಾನೆ’ ಎಂದು ತಮಾಷೆ ಮಾಡಿದ್ದರು. ಈ ತಮಾಷೆಯ ಮಾತು ಜಿನರಾಜ್ ಅವರ ಕಿವಿಗೆ ಬಿದ್ದಿತ್ತೋ ಇಲ್ಲವೋ ಗೊತ್ತಿಲ್ಲ. ಶಾಖೆಯನ್ನು ಮಾತ್ರ ಅವರು ನಿಲ್ಲಿಸಿರಲಿಲ್ಲ. ಆ ಮೇಲೆ ಆ ಶಾಖೆಯಲ್ಲಿ ಒಂದಿದ್ದ ಸಂಖ್ಯೆ ಹತ್ತಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರು ಬರತೊಡಗಿದರು.
ಚಡ್ಡಿಗಳೆಂದೇ ಸಂಬೋಧನೆ
70-80 ರ ದಶಕದಲ್ಲಿ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪಿ. ಲಂಕೇಶ್ ಆರೆಸ್ಸೆಸ್ ಸಂಘಟನೆಯನ್ನು ಗೌರವದಿಂದ ಕಂಡಿz ಇಲ್ಲ. ಶಾಖೆಗೆ ಹೋಗುವ ಸ್ವಯಂಸೇವಕರನ್ನು ಅವರು ಮನುಷ್ಯರೆಂದೇ ಭಾವಿಸಿರಲಿಲ್ಲ. ತನ್ನ ಪತ್ರಿಕೆಯಲ್ಲಿ `ಚಡ್ಡಿಗಳು’ ಎಂದೇ ಸಂಬೋಧಿಸಿ ಲೇವಡಿ ಮಾಡುತ್ತಿದ್ದರು. ಅನಂತರ ಇತರ ಕೆಲವು ಪೀತ ಪತ್ರಿಕೆಗಳೂ ಅದೇ ಶಬ್ದ ಪ್ರಯೋಗವನ್ನು ಮುಂದುವರಿಸಿ ಸಂಭ್ರಮಪಟ್ಟವು. ಶಾಖೆಗೆ ಹೋಗುವ ಸ್ವಯಂಸೇವಕರಿಗೆ ತಂದೆ-ತಾಯಿ ಒಳ್ಳೊಳ್ಳೆಯ ಹೆಸರಿಟ್ಟಿದ್ದರೂ ಲಂಕೇಶ್ ದೃಷ್ಟಿಯಲ್ಲಿ ಆ ಹೆಸರುಗಳಿಗೆ ಬೆಲೆ ಇರಲಿಲ್ಲ. ಅವರ ದೃಷ್ಟಿಯಲ್ಲಿ ಅವರೆಲ್ಲರಿಗೂ ಬಳಸಬಹುದಾದ ಒಂದೇ ಶಬ್ದ `ಚಡ್ಡಿ’ ಆಗಿತ್ತು!
ಸ್ವತಃ ಕೆಲವು ಸ್ವಯಂಸೇವಕರ ಮನೆಗಳಲ್ಲೂ ಖಾಕಿ ಚಡ್ಡಿ ಧರಿಸುವ ತಮ್ಮ ಮನೆಯ ಸದಸ್ಯರನ್ನು ಕಂಡರೆ ಅದೇನೋ ಮುಜುಗರ. ಆಗ ತಾನೆ ಮದುವೆಯಾಗಿ ಬಂದ ಕಾರ್ಯಕರ್ತರೊಬ್ಬರು ಬೆಳಿಗ್ಗೆ ಖಾಕಿ ಚಡ್ಡಿ ಧರಿಸಿ ಶಾಖೆಗೆ ಹೋಗಿ ಮನೆಗೆ ಬಂದರು. ಅನಂತರ ಸ್ನಾನ ಮುಗಿಸಿ ಹೊರಗೆ ಬಂದು ನೋಡಿದರೆ ತನ್ನ ಪತ್ನಿ ಸಂಘದ ಚಡ್ಡಿಯನ್ನು ಮೂಲೆಗೆ ಎಸೆದಿದ್ದರು. `ಆ ನಿಕ್ಕರ್ ಮೊದಲು ಎಲ್ಲಿತ್ತೋ ಅಲ್ಲೇ ಇನ್ನು ಐದು ನಿಮಿಷದಲ್ಲಿ ಇಡಬೇಕು’ ಎಂದು ಆ ಕಾರ್ಯಕರ್ತರು ತನ್ನ ಪತ್ನಿಗೆ ತಾಕೀತು ಮಾಡಿದರು. ಭಯದಿಂದ ಪತ್ನಿ ತನ್ನ ಪತಿಯ ಸೂಚನೆಯನ್ನು ಪಾಲಿಸಿದ್ದರು. ಈಗ ಇದನ್ನೆಲ್ಲ ನೆನಪಿಸಿಕೊಂಡರೆ ಅವರಿಬ್ಬರೂ ನಗದೇ ಇರಲಾರರು.
ಹಿಂದೆ ಜನಸಂಘದ ಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹುರಿಯಾಳುಗಳೇ ಇರಲಿಲ್ಲ. ಈಗಿನಂತೆ ಟಿಕೆಟ್ಗಾಗಿ ಕಾತರಿಸುವವರೂ ಇರಲಿಲ್ಲ. ಏಕೆಂದರೆ ಚುನಾವಣೆಗೆ ಸ್ಪರ್ಧಿಸಿದವರಿಗೆ ಠೇವಣಿ ನಷ್ಟ ಆಗುವುದು ಆಗ ಶತಃಸಿದ್ಧವಾದ ಸಂಗತಿ. ಹಾಗಾಗಿ ಪಕ್ಷ ಸೂಚನೆ ನೀಡಿದರೂ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದರು. ಒಮ್ಮೆ ತೀರ್ಥಹಳ್ಳಿಯಲ್ಲಿ ಅಭ್ಯರ್ಥಿಯಾಗಿದ್ದ ವ್ಯಕ್ತಿ ಯಥಾ ಪ್ರಕಾರ ಠೇವಣಿ ಕಳೆದುಕೊಂಡರು. ಅದರ ಮರುದಿನವೇ ಆ ಊರಿನಲ್ಲಿ ಸಂಘದ ಪಥಸಂಚಲನ. ಠೇವಣಿ ಕಳೆದುಕೊಂಡ ಅಭ್ಯರ್ಥಿ ಠಾಕುಠೀಕಾಗಿ ಸಂಘದ ಗಣವೇಷ ಧರಿಸಿ ಪಥಸಂಚಲನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದನ್ನು ನೋಡಿದ ಊರಿನವರಿಗೆ ಆಶ್ಚರ್ಯ. ಚುನಾವಣೆಯಲ್ಲಿ ಸೋತರೂ ಎಷ್ಟೊಂದು ಖುಷಿಯಾಗಿದ್ದಾರಲ್ಲಾ ಎಂದು ವಿಸ್ಮಯ!
ಈಗ ಮಾತ್ರ ಜಯಕಾರ!
ಈಗ ಮಾತ್ರ ರಾಷ್ಟ್ರೀಯ ವಿಚಾರವನ್ನು ಪ್ರತಿಪಾದಿಸುವ ಬಿಜೆಪಿಗೆ ಎಲ್ಲೆಡೆ ಯಶಸ್ಸು ದೊರಕುತ್ತಿರುವಂತೆ ಖಾಕಿ ಚಡ್ಡಿಧಾರಿಗಳಿಗೆ ಇದ್ದಕ್ಕಿದ್ದಂತೆ ಗೌರವ ನೀಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಬಿಜೆಪಿಗೆ ಸೇರಿದ ಅನೇಕ ಹೊಸಬರು (ಅವರಿಗೆ ಸಂಘದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದಿದ್ದರೂ) ಸಂಘದ ಕಾರ್ಯಕ್ರಮಗಳಿಗೆ ಖಾಕಿ ಚಡ್ಡಿ ಧರಿಸಿ ಭಾಗವಹಿಸುವುದುಂಟು. ಚಡ್ಡಿ ಧರಿಸಿ, ಸಂಘದ ಹಿರಿಯರಿಗೆ ಸಾಷ್ಟಾಂಗ ಪ್ರಣಾಮ ಹಾಕುವುದೂ ಉಂಟು (ಆ ಹಿರಿಯರಂತೂ ಅದನ್ನೆಂದೂ ಅಪೇಕ್ಷೆ ಪಟ್ಟವರಲ್ಲ). ಖಾಕಿ ಚಡ್ಡಿ ಧರಿಸಿದರೆ, ಸಂಘದ ಹಿರಿಯರ ಸಂಪರ್ಕವಿಟ್ಟುಕೊಂಡರೆ ಬಿಜೆಪಿಯಲ್ಲಿ ಉತ್ತಮ ಹುದ್ದೆಗಳನ್ನು ಗಿಟ್ಟಿಸಬಹುದು ಎಂಬ ಲೆಕ್ಕಾಚಾರ ಇಂಥವರದು. ಉತ್ತಮ ಹುದ್ದೆಗಳಿಗೇರಲು ಇರಬೇಕಾದ ಅರ್ಹತೆ ಖಂಡಿತ ಅದಲ್ಲ ಎಂಬ ಕನಿಷ್ಠ ಜ್ಞಾನವೂ ಇವರಲ್ಲಿರದಿರುವುದು ಮರುಕದ ಸಂಗತಿ.
ಖಾಕಿ ಚಡ್ಡಿಧಾರಿಗಳು ಮಾತ್ರ ಸಮಾಜದಲ್ಲಿ ತಾತ್ಸಾರ, ಜಯಕಾರ, ಅವಮಾನ, ಸಂಮಾನ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಸಾಮಾಜಿಕ ಪರಿವರ್ತನೆಯಲ್ಲಿ ಎಂದಿನಂತೆ ಮೌನವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯ ನಿರಂತರ ಎಂದು ನಂಬಿ, ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಬೆದರಿಕೆಗೆ ಬಗ್ಗದೆ ಮತ್ತದೇ ಭಾರತ ಮಾತೆಯ ವೈಭವಕ್ಕಾಗಿ ಹಾತೊರೆಯುತ್ತಿದ್ದಾರೆ. ಮೋದಿಯಂತಹ ಇನ್ನಷ್ಟು ಸಮರ್ಥ ವ್ಯಕ್ತಿಗಳನ್ನು ನಿರ್ಮಿಸುವ ಮೌನ ತಪಸ್ಸಿನಲ್ಲಿ ಮುಳುಗಿದ್ದಾರೆ.
ಖಾಕಿ ಚಡ್ಡಿಧಾರಿಗಳು ಮಾತ್ರ ಸಮಾಜದಲ್ಲಿ ತಾತ್ಸಾರ, ಜಯಕಾರ, ಅವಮಾನ, ಸಂಮಾನ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಸಾಮಾಜಿಕ ಪರಿವರ್ತನೆಯಲ್ಲಿ ಎಂದಿನಂತೆ ಮೌನವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯ ನಿರಂತರ ಎಂದು ನಂಬಿ, ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಬೆದರಿಕೆಗೆ ಬಗ್ಗದೆ ಮತ್ತದೇ ಭಾರತ ಮಾತೆಯ ವೈಭವಕ್ಕಾಗಿ ಹಾತೊರೆಯುತ್ತಿದ್ದಾರೆ. ಮೋದಿಯಂತಹ ಇನ್ನಷ್ಟು ಸಮರ್ಥ ವ್ಯಕ್ತಿಗಳನ್ನು ನಿರ್ಮಿಸುವ ಮೌನ ತಪಸ್ಸಿನಲ್ಲಿ ಮುಳುಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.