ನವದೆಹಲಿ: ಗಡಿಯಾಚೆಯಿಂದ ದೇಶವನ್ನು ಗುರಿಯಾಗಿಸುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಹಿಂಜರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
1971 ರ ಭಾರತ-ಪಾಕಿಸ್ಥಾನ ಯುದ್ಧದ ಅಸ್ಸಾಂ ಮೂಲದ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ಸರ್ಕಾರವು ದೇಶದಿಂದ ಭಯೋತ್ಪಾದನೆಯನ್ನು ತೊಡೆದುಹಾಕಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಭಯೋತ್ಪಾದನೆಯನ್ನು ಬಲವಾಗಿ ಎದುರಿಸಲಾಗುವುದು ಎಂಬ ಸಂದೇಶವನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಹೊರಗಿನಿಂದ ದೇಶವನ್ನು ಗುರಿಯಾಗಿಸಿಕೊಂಡರೆ ನಾವು ಗಡಿ ದಾಟಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ಚೀನಾದೊಂದಿಗಿನ ಇತ್ತೀಚಿನ ಸಂಘರ್ಷದಲ್ಲಿ ಭಾರತೀಯ ಸೈನಿಕರು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ ಅವರು, “ಭಾರತ ಮಾತೆಯ ತಲೆ ತಗ್ಗಿಸಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಹೇಳಿದರು.
ಈ ವಿಷಯದಲ್ಲಿ ಸೇನೆಯ ಪಾತ್ರವನ್ನು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕರನ್ನು ಕೆಣಕಿದ ಸಿಂಗ್, ಇಂತಹ ಟೀಕೆಗಳು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಮತ್ತು ಜನರ ಭಾವನೆಗಳನ್ನು ನೋಯಿಸುತ್ತದೆ ಎಂದು ಹೇಳಿದರು.
“ನಮ್ಮ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ನಾನು ನಿಯಮಿತವಾಗಿ ಸಂಪರ್ಕದಲ್ಲಿರುತ್ತೇನೆ. ನಾನು ಅವರಿಗೆ ಏನು ಮಾಡಬೇಕೋ ಅದನ್ನು ಹೇಳಿದ್ದೇನೆ ಮತ್ತು ಅವರು ಮಾಡಬೇಕಾಗಿದ್ದನ್ನು ಅವರು ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಗಡಿಗೆ ಹೋಲಿಸಿದರೆ ದೇಶದ ಪೂರ್ವ ಗಡಿಯು ಪ್ರಸ್ತುತ ಹೆಚ್ಚು ಶಾಂತಿ ಮತ್ತು ಸ್ಥಿರತೆಯನ್ನು ಅನುಭವಿಸುತ್ತಿದೆ ಎಂದು ಸಿಂಗ್ ಹೇಳಿದರು. ಬಾಂಗ್ಲಾದೇಶವು ಸ್ನೇಹಪರ ನೆರೆಯ ರಾಷ್ಟ್ರವಾಗಿದೆ ಎಂದಿದ್ದಾರೆ.
“ಒಳನುಸುಳುವಿಕೆ ಸಮಸ್ಯೆ ಬಹುತೇಕ ಅಂತ್ಯಗೊಂಡಿದೆ. ಈಗ ಗಡಿಯಲ್ಲಿ (ಪೂರ್ವ ಗಡಿಯಲ್ಲಿ) ಶಾಂತಿ ಮತ್ತು ಸ್ಥಿರತೆ ಇದೆ” ಎಂದು ಸಚಿವರು ಹೇಳಿದರು. ರಕ್ಷಣಾ ಸನ್ನದ್ಧತೆಗೆ ಅಗತ್ಯವಾದ ಬಲವಾದ ಗಡಿ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿನ ಪ್ರಯತ್ನಗಳಿಗಾಗಿ ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಅನ್ನು ರಕ್ಷಣಾ ಸಚಿವರು ಪ್ರಶಂಸಿಸಿದರು.
“ನಾವು ಈಗ ಬಲವಾದ ಗಡಿ ಮೂಲಸೌಕರ್ಯವನ್ನು ಹೊಂದಿದ್ದೇವೆ, ಆದರೆ ಹೆಚ್ಚಿನದನ್ನು ಮಾಡಬೇಕಾಗಿದೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.