ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಮಂಗಳವಾರ ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸೇನಾ ಸಿಬ್ಬಂದಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ನರವಾಣೆ ಅವರು ಜನರಲ್ ಬಿಪಿನ್ ರಾವತ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ರಾವತ್ ಸೇನಾ ಮುಖ್ಯಸ್ಥರಾಗಿ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ಇಂದು ನಿವೃತ್ತರಾಗುತ್ತಿದ್ದಾರೆ.
ನರವಾಣೆ, ವಾಯುಪಡೆಯ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಈ ಮೂರು ಪಡೆಗಳ ಸೇವಾ ಮುಖ್ಯಸ್ಥರುಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 56 ನೇ ಕೋರ್ಸ್ನಿಂದ ಬಂದವರಾಗಿದ್ದಾರೆ.
ಲೆಫ್ಟಿನೆಂಟ್ ಜನರಲ್ ನರವಾಣೆ ಅವರು 1980ರ ಜೂನ್ನಲ್ಲಿ ದಿ ಸಿಖ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ 7 ನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟರು. ಅವರು ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ ಭಾರಿ ಅನುಭವವನ್ನು ಹೊಂದಿದ್ದಾರೆ. ಸುಮಾರು ನಾಲ್ಕು ದಶಕಗಳಷ್ಟು ವಿಸ್ತಾರವಾದ ಮಿಲಿಟರಿ ವೃತ್ತಿಜೀವನದಲ್ಲಿ, ಅವರು ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯ ಬಂಡಾಯ ವಿರೋಧಿ ಕಾರ್ಯಾಚರಣೆಯ ಪರಿಸರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆಪರೇಷನ್ ಪವಣ್ ಸಮಯದಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನೆಯ ಭಾಗವಾಗಿದ್ದರು. ಅವರು ಮೂರು ವರ್ಷಗಳ ಕಾಲ ಮ್ಯಾನ್ಮಾರ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ಡಿಫೆನ್ಸ್ ಅಟ್ಯಾಚ್ ಆಗಿ ಸೇವೆ ಸಲ್ಲಿಸಿದ್ದರು.
ಲೆಫ್ಟಿನೆಂಟ್ ಜನರಲ್ ನರವಾಣೆ ಅವರು ಅತ್ಯಂತ ಜನಪ್ರಿಯ ಅಧಿಕಾರಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ತಮ್ಮ ಬೆಟಾಲಿಯನ್ನ ಕಮಾಂಡಿಗಾಗಿ ‘ಸೇನಾ ಪದಕ’ (ವಿಶೇಷ) ಪಡೆದಿದ್ದಾರೆ. ನಾಗಾಲ್ಯಾಂಡ್ನ ಇನ್ಸ್ಪೆಕ್ಟರ್ ಜನರಲ್ ಅಸ್ಸಾಂ ರೈಫಲ್ಸ್ (ಉತ್ತರ) ಸೇವೆಗಾಗಿ “ವಿಶಿಷ್ಟ ಸೇವಾ ಪದಕ’ ಮತ್ತು ಪ್ರತಿಷ್ಠಿತ ಸ್ಟ್ರೈಕ್ ಕಾರ್ಪ್ಸ್ ಕಮಾಂಡಿಗಾಗಿ ‘ಅತೀ ವಿಶಿಷ್ಠ ಸೇವಾ ಪದಕ’ವನ್ನು ಪಡೆದುಕೊಂಡಿದ್ದಾರೆ. ಸೇನಾ ತರಬೇತಿ ಕಮಾಂಡ್ನ ಜಿಒಸಿ-ಇನ್-ಸಿ ಆಗಿ ವಿಶೇಷ ಸೇವೆ ಸಲ್ಲಿಸಿದ್ದಕ್ಕಾಗಿ ಲೆಫ್ಟಿನೆಂಟ್ ಜನರಲ್ ನರವಾಣೆ ಅವರಿಗೆ ‘ಪರಮ್ ವಿಶಿಷ್ಠ ಸೇವಾ ಪದಕ’ ನೀಡಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.