ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ನೈರ್ಮಲ್ಯ ಯೋಜನೆ ‘ಸ್ವಚ್ಛ ಭಾರತ’ವನ್ನು ಪರಿಷ್ಕರಿಸುತ್ತಿದೆ, ಗುರಿಗಳನ್ನು ನವೀಕರಿಸುತ್ತಿದೆ. ಮುಂದಿನ ಹಂತದ ನೈರ್ಮಲ್ಯ ಯೋಜನೆಯು 2029ರವರೆಗೂ ಮುಂದುವರೆಯುವ ನಿರೀಕ್ಷೆ ಇದೆ ಎಂಬುದನ್ನು ಸರ್ಕಾರದ ಕಾರ್ಯತಂತ್ರಗಳು ತೋರಿಸುತ್ತಿವೆ.
ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಅಂಶ ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವುದಾಗಿತ್ತು. 2019ರ ಅಕ್ಟೋಬರ್ 2ರ ವೇಳೆಗೆ ಪ್ರತಿ ಮನೆಗೂ ಶೌಚಾಲಯವನ್ನು ಒದಗಿಸುವುದಾಗಿತ್ತು. ಆ ಗುರಿಯನ್ನೀಗ ಈಡೇರಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿವಾರಣೆಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ನೈರ್ಮಲ್ಯದತ್ತ ಗಮನಹರಿಸುವುದರ ಜೊತೆಜೊತೆಗೆ ಸ್ವಚ್ಛ ಭಾರತ್ ಮಿಷನ್ ಈಗ ತ್ಯಾಜ್ಯವನ್ನು ಮರುಬಳಕೆ ಮಾಡಲು ಮತ್ತು ನಿರ್ವಹಿಸಲು ಸಜ್ಜಾಗುತ್ತಿದೆ. ಮಾತ್ರವಲ್ಲದೇ, ಏಕ ಬಳಕೆ ಪ್ಲಾಸ್ಟಿಕ್ ಅನ್ನೂ ನಿರ್ಮೂಲನೆ ಮಾಡುವತ್ತ ದಾಪುಗಾಲಿಡುತ್ತಿದೆ. ಬಯಲು ಶೌಚ ಮುಕ್ತಕ್ಕೆ ಅಳವಡಿಸಲಾಗಿರುವ ಕಾರ್ಯತಂತ್ರಗಳನ್ನೇ ಇಲ್ಲೂ ಸರ್ಕಾರ ಅಳವಡಿಸಿಕೊಳ್ಳಲು ಮುಂದಾಗಿದೆ. ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಮೂರು ವರ್ಷಗಳಲ್ಲಿ ಕೊನೆಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15 ರಂದು ಕರೆ ನೀಡಿದ್ದರು.
ಸದ್ಯಕ್ಕೆ, ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಸ್ವಚ್ಛಭಾರತ ಅಡಿಯಲ್ಲಿ, ಪ್ರತಿ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೌಚಾಲಯಗಳು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಸೌಲಭ್ಯಗಳು ಇರುವಂತೆ ನೋಡಿಕೊಳ್ಳುತ್ತಿದೆ.
ಸಾರ್ವಜನಿಕರ ಅಭ್ಯಾಸದಲ್ಲಿ ಬದಲಾವಣೆಯನ್ನು ತರಲು ಗುರಿಯಿಟ್ಟುಕೊಂಡಿರುವ ಸರ್ಕಾರವು ತಳ ಮಟ್ಟದಿಂದಲೇ ಅಭಿಯಾನವನ್ನು ಆರಂಭಿಸಿ ತಳಮಟ್ಟದ ಜನರನ್ನೇ ಪ್ರೇರಣೆಯನ್ನು ನೀಡುವವರನ್ನಾಗಿ ಮಾಡಿಕೊಂಡಿತು. ಸಾವಯವ ವಸ್ತುಗಳನ್ನು ಬಳಸುವಂತೆ ಮತ್ತು ಬಳಸಿದ ಪ್ಲಾಸ್ಟಿಕ್ಗಳಂತಹ ತ್ಯಾಜ್ಯವನ್ನು ಮರುಬಳಕೆ ಮಾಡುವಂತೆ ಮತ್ತು ಘನ, ದ್ರವ ತ್ಯಾಜ್ಯವನ್ನು ವಿಂಗಡನೆಗೊಳಿಸುವಂತೆ ಜನರನ್ನು ಪ್ರೇರೇಪಿಸುವುದು ಸ್ವಚ್ಛಭಾರತ್ನ ನವೀಕರಿಸಿದ ಗುರಿಗಳ ಭಾಗವಾಗಿದೆ.
ಇಂಧೋರ್ ಸ್ವಚ್ಛ ಭಾರತ ಶ್ರೇಯಾಂಕದಡಿಯಲ್ಲಿ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ನಗರ ತ್ಯಾಜ್ಯ ನಿರ್ವಹಣೆಗೆ ಮಾದರಿಯಾಗಿದ್ದು, ಈ ಮಾದರಿಯನ್ನು ದೇಶದಾದ್ಯಂತ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ತಮಿಳುನಾಡಿನ ಗ್ರಾಮ ಮಟ್ಟದ ರಿಸೈಕ್ಲಿಂಗ್ ಮಾಡೆಲ್ ಅನ್ನು ದೇಶವ್ಯಾಪಿಯಾಗಿ ತರಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಇತರರನ್ನು ಸಂಪರ್ಕಿಸಿದ ಬಳಿಕ ಜಲ ಶಕ್ತಿ ಸಚಿವಾಲಯದಡಿಯಲ್ಲಿನ ನೈರ್ಮಲ್ಯ ಸಚಿವಾಲಯವು ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ಹಮ್ಮಿಕೊಂಡಿದೆ.
ಬುಧವಾರ, ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2014 ರ ಅಕ್ಟೋಬರ್ 2 ರಂದು ಪ್ರಾರಂಭಿಸಿದ ಸ್ವಚ್ಛ ಭಾರತ್ ಮಿಷನ್ನ ಪ್ರಮುಖ ಉದ್ದೇಶ ಈಡೇರಿದೆ. ಗ್ರಾಮೀಣ ಭಾರತವು ಬಯಲು ಶೌಚ ಎಂದು ಘೋಷಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್ನ ಮಾಹಿತಿಯ ಪ್ರಕಾರ, 2015 ರಲ್ಲಿ 44% ಭಾರತೀಯರು ತೆರೆದ ಮಲವಿಸರ್ಜನೆ ಮಾಡುತ್ತಿದ್ದರು, ಅವರಲ್ಲಿ ಹೆಚ್ಚಿನವರು ಗ್ರಾಮಾಂತರ ಪ್ರದೇಶಗಳಲ್ಲಿದ್ದರು. ಆದರೀಗ ಗ್ರಾಮೀಣ ಭಾರತ ಬಯಲು ಶೌಚ ಎಂದು ಘೋಷಿಸಲ್ಪಟ್ಟಿದೆ.
ಹೊಸ ಸ್ವಚ್ಛ ಭಾರತ ಕಾರ್ಯತಂತ್ರವು ಈಗ ಸ್ಥಳೀಯ ಸರ್ಕಾರಗಳು, ನೀತಿ ನಿರೂಪಕರು, ಅನುಷ್ಠಾನಕಾರರು ಮತ್ತು ಇತರ ಸಂಬಂಧಿತ ಜನರಿಗೆ ಮಾರ್ಗದರ್ಶನ ನೀಡುವ ಚೌಕಟ್ಟನ್ನು ರೂಪಿಸುತ್ತದೆ.
ಇದು ನೈರ್ಮಲ್ಯದ ಹೊರತಾಗಿ, ಮೂರು ವರ್ಗದ ತ್ಯಾಜ್ಯಗಳ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ: ಪ್ಲಾಸ್ಟಿಕ್ ತ್ಯಾಜ್ಯ, ಸಾವಯವ, ಗ್ರೇ ವಾಟರ್ ಮತ್ತು ಬ್ಲ್ಯಾಕ್ ವಾಟರ್ ಮ್ಯಾನೇಜ್ಮೆಂಟ್ಗಳನ್ನು ಇದು ಒಳಗೊಂಡಿದೆ. ಸ್ನಾನ, ಬಟ್ಟೆ ಒಗೆದ, ಪಾತ್ರೆ ತೊಳೆದ ನೀರನ್ನು ಗ್ರೇ ವಾಟರ್ ಎನ್ನುತ್ತಾರೆ. ಶೌಚಾಲಯ, ಚರಂಡಿಯ ತ್ಯಾಜ್ಯ ನೀರನ್ನು ಬ್ಲ್ಯಾಕ್ ವಾಟರ್ ಎನ್ನುತ್ತೇವೆ. ಸಾವಯವ ತ್ಯಾಜ್ಯವು ಯಾವುದೇ ಜೈವಿಕ ಮೂಲದ ಉಳಿದ ವಸ್ತು ಆಗಿದೆ.
ತಮಿಳುನಾಡಿನಲ್ಲಿ ಗ್ರಾಮ ಪಂಚಾಯಿತಿಗಳು ಪ್ರತಿ ಗ್ರಾಮದಲ್ಲಿ ತ್ಯಾಜ್ಯ ಬೇರ್ಪಡಿಸುವ ಘಟಕಗಳನ್ನು ಸ್ಥಾಪಿಸಿವೆ. ಕೆಲವು ಗ್ರಾಮ ಪಂಚಾಯತಿಗಳು ಈ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ನಡೆಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಹಣವನ್ನು ಬಳಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯವಸ್ಥೆಯನ್ನು ಖಾಸಗಿ ಗುತ್ತಿಗೆದಾರರು ನಿರ್ವಹಿಸುತ್ತಾರೆ. ಅವರಿಗೆ ತ್ಯಾಜ್ಯ ಸಂಗ್ರಹಿಸಲು, ವಿಂಗಡಿಸಲು ಮತ್ತು ರಿಸೈಕಲ್ ಮಾಡಲು ಪಂಚಾಯತ್ ಹಣ ನೀಡುತ್ತದೆ.
ನೈರ್ಮಲ್ಯವನ್ನು ಸಾಧಿಸಲು ಕೇಂದ್ರ ಸರ್ಕಾರವು ದೇಶಾದ್ಯಂತ ಶೌಚಾಲಯ-ನಿರ್ಮಾಣ ಕಾರ್ಯ ಮಾಡಿತು. ದೇಶದಲ್ಲಿ 100 ಮಿಲಿಯನ್ ಶೌಚಾಲಯವನ್ನು ಗ್ರಾಮಾಂತರ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಒಟ್ಟು 500,000 ಕ್ಕೂ ಹೆಚ್ಚು ಗ್ರಾಮಗಳನ್ನು ಇದು ಒಳಗೊಂಡಿದೆ. ವಿಶ್ವಬ್ಯಾಂಕ್ ಮೇಲ್ವಿಚಾರಣೆ ನಡೆಸಿದ ನೈರ್ಮಲ್ಯ ಸಮೀಕ್ಷೆಯಲ್ಲಿ 90.4% ಹಳ್ಳಿಗಳು ಈಗ ಬಯಲು ಶೌಚ ಮುಕ್ತವಾಗಿವೆ ಮತ್ತು 93.1% ಗ್ರಾಮೀಣ ಕುಟುಂಬಗಳಿಗೆ ಶೌಚಾಲಯ ಸೌಲಭ್ಯವಿದೆ ಎಂದು ತಿಳಿದು ಬಂದಿದೆ.
ತಜ್ಞರು ಹೇಳುವಂತೆ ಶೌಚಾಲಯಗಳನ್ನು ನಿರ್ಮಿಸುವುದರಿಂದ ಬಯಲು ಶೌಚವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟಿನ ಸಂದರ್ಶಕ ಸಂಶೋಧಕ ಡಯಾನ್ನೆ ಕಾಫರ್ ನೇತೃತ್ವದ ಜನಸಂಖ್ಯಾಶಾಸ್ತ್ರಜ್ಞರ ತಂಡವು ಈ ವರ್ಷ ಪ್ರಕಟಿಸಿದ ಅಧ್ಯಯನದ ಪ್ರಕಾರ, ಉತ್ತರ ಭಾರತದಲ್ಲಿ ಶೌಚಾಲಯಗಳನ್ನು ಒದಗಿಸಿದ ಸುಮಾರು 23% ಜನರು ಇನ್ನೂ ಬಯಲು ಶೌಚ ಮಾಡುತ್ತಿದ್ದಾರೆ.
ಪರಿಸರ ತಜ್ಞರು ಹೇಳುವಂತೆ ತ್ಯಾಜ್ಯ ನಿರ್ವಹಣೆ ಮತ್ತು ಜಾಗೃತಿಯು ಪ್ಲಾಸ್ಟಿಕ್ ಬಳಕೆಯನ್ನು ತಡೆಯುವಲ್ಲಿ ಪ್ರಮುಖವಾಗಿದೆ, ಆದರೆ ಭಾರತವು ಕನಿಷ್ಠ ಪಕ್ಷ ಕೆಲವು ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ಗಳನ್ನಾದರೂ ನಿಷೇಧಿಸಲೇಬೇಕು. “ಶೂನ್ಯ ಮರುಬಳಕೆ ಸಾಮರ್ಥ್ಯವನ್ನು ಹೊಂದಿರುವ ಕೆಲವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸದೇ ಬೇರೆ ಯಾವುದೇ ಮಾರ್ಗವಿಲ್ಲ. ಆದರೆ, ಮರುಬಳಕೆಯ ಮೇಲೆ ಮಾತ್ರ ಅವಲಂಬಿಸುವುದರಿಂದ ತ್ಯಾಜ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲೂ ಆಗುವುದಿಲ್ಲ” ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಸದಸ್ಯ ದಿನೇಶ್ ರಾಜ್ ಬಂಡೆಲ್ಲಾ ಹೇಳುತ್ತಾರೆ.
ಈ ನಿಟ್ಟಿನಲ್ಲಿ ಸ್ವಚ್ಛ ಭಾರತದ ನವೀಕರಿಸಿದ ಗುರಿಗಳು ದೇಶವನ್ನು ಸಂಪೂರ್ಣವಾಗಿ ನೈರ್ಮಲ್ಯದತ್ತ ಮುನ್ನಡೆಯುವಂತೆ ಮಾಡಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.