ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಖಾತೆಯನ್ನೂ ತೆರೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್ನ ಸರ್ವತೋಮುಖ ಅಭಿವೃದ್ಧಿ ಮತ್ತು ಶೂನ್ಯ ತುಷ್ಟೀಕರಣ ನೀತಿಯ ಅನುಷ್ಠಾನವು ಜನರು ಬಿಜೆಪಿಯಲ್ಲಿ ಪದೇ ಪದೇ ನಂಬಿಕೆ ಇಡಲು ಪ್ರಮುಖ ಕಾರಣ ಎಂದು ಶಾ ವಿವರಿಸಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಲಿದೆ. ಜನರು ನಮ್ಮ ಪಕ್ಷ ಮತ್ತು ನಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ” ಎಂದು ಶಾ ಹೇಳಿದ್ದಾರೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದ ಚುನಾವಣೆಗೆ ಪೂರ್ವಭಾವಿಯಾಗಿ ಮೋದಿ ದಿನಕ್ಕೆ ಐದು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಎಎಪಿ ಗುಜರಾತ್ ವಿಧಾನಸಭಾ ಚುನಾವಣೆಗೆ ಪ್ರವೇಶಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಅವರು, “ಪ್ರತಿಯೊಂದು ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ, ಆದರೆ ಜನರು ಪಕ್ಷವನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಜನರಿಗೆ ಬಿಟ್ಟದ್ದು. ಗುಜರಾತ್ ಜನರ ಮನಸ್ಸಿನಲ್ಲಿ ಎಎಪಿ ಎಲ್ಲಿಯೂ ಇಲ್ಲ. ಚುನಾವಣಾ ಫಲಿತಾಂಶಗಳಲ್ಲಿ ಬಹುಶಃ ಎಎಪಿಯ ಹೆಸರು ವಿಜಯಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಂಡುಬರುವುದಿಲ್ಲ” ಎಂದು ಅವರು ಹೇಳಿದರು.
ಗುಜರಾತ್ನಲ್ಲಿ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಆಗಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಪಿಪಿ) ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರವನ್ನು ಕೈಗೊಂಡಿದೆ.
ಕಾಂಗ್ರೆಸ್ ಕುರಿತು ಮಾತನಾಡಿದ ಶಾ, “ಅದು ಇನ್ನೂ ಪ್ರಮುಖ ವಿರೋಧ ಪಕ್ಷವಾಗಿದೆ, ಆದರೆ ಪಕ್ಷವು ಬಿಕ್ಕಟ್ಟಿನ ಮೂಲಕ ಹಾದು ಹೋಗುತ್ತಿದೆ ಮತ್ತು ಅದರ ಪರಿಣಾಮ ಗುಜರಾತ್ನಲ್ಲಿಯೂ ಗೋಚರಿಸುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಅತ್ಯಗತ್ಯ ಎಂದು ಶಾ ಹೇಳಿದರು.
“ರಾಜಕಾರಣಿಗಳು ಕಷ್ಟಪಟ್ಟು ದುಡಿಯಬೇಕು ಮತ್ತು ಯಾರಾದರೂ ಕಷ್ಟಪಟ್ಟು ಕೆಲಸ ಮಾಡಿದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯವಾಗಿದೆ. ಆದರೆ ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಮಾತ್ರ ಫಲಿತಾಂಶವನ್ನು ತೋರಿಸುತ್ತವೆ. ಆದ್ದರಿಂದ, ಕಾದು ನೋಡೋಣ” ಎಂದು ಅವರು ಹೇಳಿದರು.
“ಗುಜರಾತಿನ ಭದ್ರತೆಯು ರಾಷ್ಟ್ರೀಯ ಭದ್ರತೆಯೊಂದಿಗೆ ಸಂಬಂಧ ಹೊಂದಿದೆ. ಗುಜರಾತ್ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆ ಬೇರೆ ಬೇರೆ ವಿಷಯಗಳಲ್ಲ ಮತ್ತು ದೇಶವು ಸುರಕ್ಷಿತವಾಗಿಲ್ಲದಿದ್ದರೆ, ಗುಜರಾತ್ ಹೇಗೆ ಸುರಕ್ಷಿತವಾಗಿರುತ್ತದೆ? ಆದ್ದರಿಂದ, ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ಭದ್ರತೆಯು ಪ್ರಮುಖ ವಿಷಯವಾಗಿದೆ. ಗಡಿ ರಾಜ್ಯವಾಗಿರುವುದರಿಂದ ಗುಜರಾತ್ನ ಜನರು ರಾಷ್ಟ್ರೀಯ ಭದ್ರತೆಯ ಬಗ್ಗೆ ಸಂವೇದನಾಶೀಲರಾಗಿದ್ದಾರೆ. ದೇಶದ ಯಾವುದೇ ಒಂದು ಸ್ಥಳದಲ್ಲಿ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವುದನ್ನು ನಾವು ಸಹೊಸಲಾಗುವುದಿಲ್ಲ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.