ನವದೆಹಲಿ : ಚಂಡಮಾರುತ ಫನಿ ತೀವ್ರ ವಿಕೋಪಕ್ಕೆ ತಿರುಗಿದ್ದು ಆವಾಂತರಗಳನ್ನು ಸೃಷ್ಟಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 4 ರಾಜ್ಯಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ 1086 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ನಿರ್ಧಾರದ ಮೇರೆಗೆ ರಾಜ್ಯಗಳ ವಿಪತ್ತು ಸ್ಪಂದನಾ ನಿಧಿಗೆ ಹಣವನ್ನು ಬಿಡುಗಡೆಗೊಳಿಸಲಾಗಿದೆ. 200 ಕೋಟಿ ರೂಪಾಯಿಗಳನ್ನು ಆಂಧ್ರಪ್ರದೇಶ, 340 ಕೋಟಿ ರೂಪಾಯಿಗಳನ್ನು ಒರಿಸ್ಸಾ, 309 ಕೋಟಿ ರೂಪಾಯಿಗಳನ್ನು ತಮಿಳುನಾಡು, 235 ಕೋಟಿಗಳನ್ನು ಪಶ್ಚಿಮಬಂಗಾಳಕ್ಕೆ ಬಿಡುಗಡೆಗೊಳಿಸಲಾಗಿದೆ.
ಮುಂದಿನ 24ಗಂಟೆಗಳಲ್ಲಿ ಕೇರಳ ತಮಿಳುನಾಡು, ಆಂಧ್ರಪ್ರದೇಶದ ದಕ್ಷಿಣ ಭಾಗಗಳಲ್ಲಿ ತೀವ್ರ ಸ್ವರೂಪದ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಒರಿಸ್ಸಾದಲ್ಲಿ ಮೇ 2 ರಂದು ತೀವ್ರ ಮಳೆಯಾಗುವ, ಪಶ್ಚಿಮ ಬಂಗಾಳದಲ್ಲಿ ಮೇ 3 ಮತ್ತು 4ರಂದು ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ತೀವ್ರ ಸ್ವರೂಪದ ಸುಂಟರಗಾಳಿ ಸಂಭವಿಸುವ ಎಚ್ಚರಿಕೆಯನ್ನು ನೀಡಲಾಗಿದ್ದು, ಆಗ್ನೇಯ ಮತ್ತು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 125 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ನೀಡಲಾಗಿದೆ. ತಮಿಳುನಾಡು, ಪುದುಚೇರಿ ಆಂಧ್ರದ ಕರಾವಳಿ ಭಾಗದಲ್ಲಿ ತೀವ್ರ ಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ಸಮುದ್ರದ ಸ್ಥಿತಿಗತಿಯೂ ಚಂಡಮಾರುತದ ಪ್ರಭಾವದಿಂದ ಭೀಕರವಾಗಿರಲಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಈಗಾಗಲೇ ಸಮುದ್ರಕ್ಕಿಳಿದಿರುವ ಮೀನುಗಾರರು ತಕ್ಷಣವೇ ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ.
ಇನ್ನೊಂದೆಡೆ, ಭಾರತೀಯ ನೌಕಾಪಡೆಯು ಚಂಡಮಾರುತ ಫನಿ ರಕ್ಷಣಾ ಕಾರ್ಯಾಚರಣೆಗೆ ಸರ್ವಸನ್ನದ್ಧವಾಗಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.