ಮಂಗಳೂರು : ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಪ್ರತಿಮೆಯನ್ನು ನಗರ ಕೇಂದ್ರ ಮೈದಾನದಲ್ಲಿ ಸ್ಥಾಪಿಸಲು ನಾವು ಮಹಾನಗರಪಾಲಿಕೆಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿಲ್ಲವೆನ್ನುವ ಕಾಂಗ್ರೆಸ್ಸ್ ನವರ ಹೇಳಿಕೆ ಅಪ್ಪಟ ಸುಳ್ಳಾಗಿದ್ದು, ಚರ್ಚೆಯ ಸಂದರ್ಭಗಳಲ್ಲಿ ನಿದ್ದೆಗೆ ಜಾರುವ ಚಾಳಿಯುಳ್ಳ ಕಾಂಗ್ರೆಸ್ಸಿಗರು ನಮ್ಮ ವಿರೋಧ ವ್ಯಕ್ತಪಡಿಸಿರುವುದನ್ನು ಪಾಲಿಕೆಯ ಸಭೆಯ ಕಾರ್ಯಸೂಚಿಯನ್ನು ಪರಿಶೀಲಿಸಿ ಬಳಿಕ ಹೇಳಿಕೆ ನೀಡುವುದು ಒಳಿತು.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಬಗ್ಗೆ ನಮಗೆ ಗೌರವವಿದೆ. ಆದರೆ ದುರಾಭಿಮಾನವಿಲ್ಲ. ರಾಜಕೀಯ ಕಾರಣದಿಂದ ರಾಷ್ಟ್ರ ನಾಯಕರ ಪ್ರತಿಮೆಗಳ ಸ್ಥಾಪನೆಯಲ್ಲಿ ಸ್ಪರ್ಧೆಯ ವಾತಾವರಣ ನಡೆಯುತ್ತಿರುವುದು ದುರದೃಷ್ಟಕರ. ಕೇಂದ್ರ ಮೈದಾನದ ಕೂಗಳತೆಯ ದೂರದಲ್ಲಿ ಎರಡೂ ಬದಿಗಳಲ್ಲಿ 2 ನೆಹರು ಪ್ರತಿಮೆಗಳಿದ್ದು, ಇದೀಗ ಈ ಮೈದಾನದಲ್ಲಿ ಒಬ್ಬರೇ ನಾಯಕರ 3 ನೇ ಪ್ರತಿಮೆ ಸ್ಥಾಪಿಸುವುದು ಎಷ್ಟು ಸಮಂಜಸವೆಂಬುದು ನಮ್ಮ ಪ್ರಶ್ನೆ? ಸಭೆಯಲ್ಲಿ ನಮ್ಮ ಅಭಿಪ್ರಾಯವನ್ನೇ ಅಸಹಿಷ್ಣುತೆ ಎಂದು ಬಣ್ಣ ಕಟ್ಟಿ ರಾಜಕೀಯ ಬೇಳೆ ಬೇಯಿಸುತ್ತಿರುವ ಕಾಂಗ್ರೆಸ್ಸಿಗರು ಈ ಸ್ಥಳದಲ್ಲಿ ಲೋಕಮಾನ್ಯ ತಿಲಕ್, ಸುಭಾಸ್ ಚಂದ್ರ ಭೋಸ್ರಂತಹ ಇನ್ನುಳಿದ ರಾಷ್ಟ್ರ ನಾಯಕರ, ದೇಶಕ್ಕಾಗಿ ಹದಿಹರೆಯದಲ್ಲೇ ಬಲಿದಾನ ಮಾಡಿದ ಭಗತ್ ಸಿಂಗ್ರಂತಹ ಸ್ವಾತಂತ್ರ್ಯ ಸೇನಾನಿಗಳ ಪ್ರತಿಮೆ, ಮಂಗಳೂರಿನ ವೀರ ರಾಣಿ ಅಬ್ಬಕ್ಕ, ಕರ್ನಾಟಕದ ವೀರಕಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪಿಸುವುದಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ.
ನೆಹರೂರವರ 125ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರತಿಮೆಗಳ ಮಧ್ಯೆ ಪ್ರತಿಮೆಯನ್ನು ಸ್ಥಾಪಿಸುವುದರ ಬದಲಾಗಿ ಜಿಲ್ಲಾಡಳಿತ ರಚನಾತ್ಮಕ ಕಾರ್ಯಕ್ರಮಗಳನ್ನು, ಶಾಲಾ ಕಾಲೇಜುಗಳಲ್ಲಿ ಅವರ ಆದರ್ಶಗಳನ್ನು, ಚಿಂತನೆಗಳನ್ನು ನೆನಪಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಸಾರ್ಥಕವಾದೀತು. ಇಷ್ಟೊಂದು ತರಾತುರಿಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲು ತೋರಿಸಿರುವ ಆಸಕ್ತಿಯನ್ನು ನಗರದ ಅಭಿವೃದ್ಧಿ ಕೆಲಸದಲ್ಲಿ ತೋರಿಸಿದರೆ ಹಿಂದಿನ ನಮ್ಮ ಎಲ್ಲಾ ರಾಷ್ಟ್ರ ನಾಯಕರಿಗೂ ಗೌರವ ನೀಡಿದಂತೆ ಆಗುತ್ತದೆ. ಆದರೆ ನೆಹರು ಮೈದಾನವನ್ನು ಕೇಂದ್ರ ಮೈದಾನವೆಂದು ಕರೆಯಬಾರದು ಎಂದು ಅಲ್ಲಿ ನೆಹರು ಪ್ರತಿಮೆಯನ್ನು ನಿರ್ಮಾಣ ಮಾಡಲು ಹೊರಟಿರುವುದಾದರೆ ನಗರದ ಅಂಬೇಡ್ಕರ್ ವೃತ್ತವನ್ನು ಡಾ.ಅಂಬೇಡ್ಕರ್ರವರ ಪ್ರತಿಮೆಯಿಲ್ಲದೆ ಈಗಲೂ ಎಲ್ಲರೂ ಜ್ಯೋತಿ ವೃತ್ತವೆಂದು ಕರೆಯುತ್ತಿದ್ದಾರೆ. ಪ್ರತಿಮೆಯನ್ನು ನಿರ್ಮಾಣ ಮಾಡುವ ಕಾಳಜಿಯಿದ್ದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ರವರ ಪ್ರತಿಮೆಯನ್ನು ನಿರ್ಮಾಣ ಮಾಡುವಂತೆ ಅವರು ವಿನಂತಿಸಿದ್ದಾರೆ.
ನೆಹರು ಮೈದಾನ ಮೊದಲು ಕೇಂದ್ರ ಮೈದಾನವೆಂದು ಕರೆಯಲ್ಪಡುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ನೆಹರೂರವರು ಇಲ್ಲಿ ಸಾರ್ವಜನಿಕ ಸಭೆ ನಡೆಸಿದ ಬಳಿಕ ಇದಕ್ಕೆ ನೆಹರು ಮೈದಾನವೆಂದು ಹೆಸರಾಯಿತು. ಹೀಗೆ ಭೇಟಿ ನೀಡಿದ ನಾಯಕರೆಲ್ಲರ ಹೆಸರುಗಳನ್ನೆಲ್ಲ ಇಡುತ್ತಾ ಹೋದರೇ ಮತ್ತು ಅವರ ಪ್ರತಿಮೆಗಳನ್ನು ಸ್ಥಾಪಿಸುತ್ತಾ ಹೋದರೆ ನಮ್ಮ ನಗರ ಪ್ರತಿಮೆಗಳ ನಗರವಾದೀತು. ನಗರದಲ್ಲಿ ಈ ಹಿಂದೆ ಅನೇಕ ಬಾರಿ ಸಮಾಜಪರ ಸಂಘಟನೆಗಳ ರಾಜಕೀಯ ಪ್ರೇರಿತ ಗಲಭೆಗಳು ಸೃಷ್ಟಿಯಾಗಿ ನಗರದಲ್ಲಿರುವ ಬೇರೆ ಬೇರೆ ಪ್ರತಿಮೆಗಳಿಗೆ ಚಪ್ಪಲಿ ಹಾರ ಹಾಕಿ ಕಲ್ಲೆಸೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿರುತ್ತದೆ. ಪ್ರತಿಮೆಯ ಪಕ್ಕ ಮಧ್ಯಪಾನ ಮಾಡಿ ಕುಡಿದು ಮಲಗುವ ಬಾಟಲಿಗಳನ್ನು ಬಿಸಾಡುವ ದು:ಸ್ಥಿತಿಯು ಇದೆ. ಆದ್ದರಿಂದ ರಾಷ್ಟ್ರ ನಾಯಕರುಗಳಿಗೆ ಈ ಮೂಲಕ ಅಗೌರವ ತೋರಿಸುವ ಅವಕಾಶ ನೀಡಬೇಡಿ ಎಂದು ಅವರು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪರಿಹರಿಸಲು ಹಲವಾರು ಜ್ವಲಂತ ಸಮಸ್ಯೆಗಳಿವೆ. ಕುಡಿಯುವ ನೀರಿನ ನಿರ್ವಹಣೆಯಲ್ಲಿ ಹಾಗೂ ವಿತರಣೆಯಲ್ಲಿ ಪಾಲಿಕೆಯ ಆಡಳಿತವು ವಿಫಲವಾದುದರ ಪರಿಣಾಮವಾಗಿ ಇಂದು ಜನಸಾಮಾನ್ಯರು ನೀರಿನ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಮಳೆಗಾಲ ಸಂಭವಿಸುತ್ತಿದ್ದರೂ, ಹೂಳು ತೆಗೆಯುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಅಭಿವೃದ್ಧಿ ಕಾಮಗಾರಿಗಳು ನೆಲಕಚ್ಚಿವೆ. ಇಷ್ಟೆಲ್ಲ ಆಡಳಿತ ವೈಫಲ್ಯದ ನಡುವೆಯೂ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಕೇಂದ್ರ ಮೈದಾನದಲ್ಲಿ ನೆಹರೂ ಪ್ರತಿಮೆ ಸ್ಥಾಪಿಸಲು ಮುಂದಾಗಿರುವುದು, ಇದು ಮುಂದೆ ಪಾಲಿಕೆ ಚುನಾವಣೆಯಲ್ಲಿ ಖಂಡಿತವಾಗಿಯೂ ಸೋಲುತ್ತೇವೆ ಎಂಬ ಭೀತಿಯಲ್ಲಿ ಈಗಲೇ ತಮ್ಮ ಅವಧಿಯಲ್ಲೇ ಪಕ್ಷದ ಋಣ ಸಂದಾಯ ಮಾಡಲು ನೆಹರೂ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿದ್ದಾರೆಯೇ ವಿನಃ ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಶಕ್ತಿ ಕಂಡು ಬರುವುದಿಲ್ಲ.
ಮಾನ್ಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮೇ 24ರಂದು ನಡೆದ ಸಭೆಯಲ್ಲಿ ಅಪೇಕ್ಷಿತರಲ್ಲದ, ಸಭೆಯ ನೋಟಿಸಿನಲ್ಲಿ ಹೆಸರಿಲ್ಲದ ವ್ಯಕ್ತಿಗಳು ಹಾಜರಿದ್ದು, ಗಲಭೆಯ ವಾತಾವರಣ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರನನ್ನು ಸಮಾಜ ಸೇವಕನೆಂದು ಬಿಂಬಿಸಿ, ಸಭೆಯನ್ನು ಕಾಂಗ್ರೆಸ್ ಸಭೆಯನ್ನಾಗಿ ಮಾಡಿರುವುದು ಮ.ನ.ಪಾ ವಿಪಕ್ಷ ನಾಯಕಿ ಅವರು ಖಂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.