ಮಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ) ಅಡಿಯಲ್ಲಿ ಔಷಧಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ವಿಚಾರದಲ್ಲಿ ಆರೋಗ್ಯ ಸಚಿವರಾದ ಶ್ರೀ.ಯು.ಟಿ.ಖಾದರ್ ಮತ್ತು ಅವರ ಇಲಾಖೆಯ ಇತರೆ ಪ್ರಮುಖರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಮಾನ್ಯ ಆರೋಗ್ಯ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಒತ್ತಾಯಿಸಿದ್ದಾರೆ .
2015-16ನೇ ಸಾಲಿನಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಕ್ಕೆ ನೀಡಿದ ಒಟ್ಟು ಮೊತ್ತ ರೂ.1462 ಕೋಟಿ ರೂಪಾಯಿಗಳ ಸದ್ಬಳಕೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಸಮಿತಿಯನ್ನು ರಚಿಸಿದ್ದರೂ ಮೊತ್ತದ 25%ವೂ ಸದ್ಬಳಕೆಯಾಗಿಲ್ಲ ಎಂದಾದಲ್ಲಿ ಇದಕ್ಕೆ ಹೊಣೆಯಾರು? ಕೇಂದ್ರ ಸರಕಾರದಿಂದ ಬಂದಿದ್ದಂತಹ ಅನುದಾನವನ್ನು ದುರ್ಬಳಕೆ ಮಾಡಿ ಅಕ್ರಮವೆಸಗಿದುದ್ದರಲ್ಲಿ ಆರೋಗ್ಯ ಸಚಿವರು ಪಾಲುದಾರರೋ? ಎಂಬ ಸಂಶಯ ರಾಜ್ಯದ ಜನರಲ್ಲಿ ಮೂಡುವಂತಾಗಿದೆ.
ಬಡವರಿಗೆ ಉಚಿತ ಔಷಧ ನೀಡುವ ಸಲುವಾಗಿ ಕೇಂದ್ರ ಸರಕಾರವು ಬಿಡುಗಡೆ ಮಾಡಿದ ಅನುದಾನವನ್ನು ಸರಿಯಾಗಿ ಬಳಸದೆ ದುರ್ಬಳಕೆ ಮಾಡಿರುವುದಲ್ಲದೇ ಔಷಧಿಯ ಗುಣಮಟ್ಟದಲ್ಲೂ ಲೋಪ ಮಾಡಿ ನಕಲಿ ಕಂಪೆನಿಗಳಿಂದ ಹೆಚ್ಚು ಕ್ರಯಕ್ಕೆ ಖರೀದಿ ಮಾಡಿ ಔಷಧಿ ಸರಬರಾಜು ಮಾಡುವ ಮೂಲಕ ಮಾನ್ಯ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಜನರ ಆರೋಗ್ಯದ ಬಗ್ಗೆ ಚೆಲ್ಲಾಟವಾಡುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದೇ ಜನತೆಗೆ ಮಾಡಿದ ದ್ರೋಹ, ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಅವಮಾನ. ಸಚಿವರ ಈ ನಡೆಯು ಹೊಲವನ್ನು ಕಾಯಲು ಹಾಕಿದ ಬೇಲಿಯೇ ಎದ್ದು ಹೊಲವನ್ನೇ ಮೇದಂತಾಗಿದೆ.
ಆರೋಗ್ಯ ಇಲಾಖೆಯ ಈ ಬೃಹತ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪವನ್ನು ಎದುರಿಸುತ್ತಿರುವ ಆರೋಗ್ಯ ಸಚಿವರಾದ ಯು.ಟಿ.ಖಾದರ್ ತಮ್ಮ ಸ್ಥಾನದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ. ಅಲ್ಲದೇ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ತನಿಖೆಯನ್ನು ಎದುರಿಸಬೇಕೆಂದು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.