ಮಂಗಳೂರು : ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ಜನಹಿತವನ್ನು ಮರೆತಿದೆ. ಚುನಾವಣೆಯ ಸಂದರ್ಭದಲ್ಲಿ ಬಡವರಿಗೆ ಬಿಪಿಎಲ್ ಕಾರ್ಡನ್ನು ಕೊಟ್ಟು ಪ್ರಕೃತ ಅದನ್ನು ರದ್ದು ಮಾಡುತ್ತಿದೆ. ರಾಜ್ಯ ಸರಕಾರ ತಹಶೀಲ್ದಾರರುಗಳಿಗೆ ದಿನ ಒಂದಕ್ಕೆ ಕನಿಷ್ಟ 10 ಬಿಪಿಎಲ್ ಕಾರ್ಡನ್ನು ರದ್ದುಮಾಡುವಂತೆ ಆದೇಶ ನೀಡಿದೆ. ವಿದ್ಯುತ್ ಬಿಲ್ಲು ರೂ.480/-ಕಟ್ಟುವವರು, ದ್ವಿಚಕ್ರ ವಾಹನ ಹೊಂದಿರುವವರು, ರಿಕ್ಷಾ ಚಾಲಕರುಗಳ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿದ್ದು, ಬಡವರಿಗೆ ದ್ರೋಹ ಎಸಗುತ್ತಿದೆ.
94ಸಿ ಮತ್ತು 94ಸಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಲು ವಿಳಂಬಗೊಳಿಸುತ್ತಿದ್ದು, ಸದ್ರಿ ನಿವೇಶನಕ್ಕೆ ದಂಡನೆ ಮೌಲ್ಯವನ್ನು ಸಾವಿರಾರು ರೂಪಾಯಿಗಳಲ್ಲಿ ಹಾಕುತ್ತಿದ್ದು, ಬಡವರಿಗೆ ಹೊರೆಯಾಗುತ್ತಿದೆ. ಈ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಕನಿಷ್ಠ ಮೌಲ್ಯ ಮಾಡಬೇಕೆಂದು ಒತ್ತಾಯಪಡಿಸಿದ್ದರೂ ಸರಕಾರ ಗಣನೆಗೆ ತೆಗೆದುಕೊಂಡಿರುವುದಿಲ್ಲ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆಗೆ ಸರಿ ಹೊಂದಿಸಿಕೊಂಡು ಖರೀದಿಸುವಲ್ಲಿ ವಿಫಲವಾದ ಕಾರಣ ರಾಜ್ಯದ ಜನತೆಗೆ ಕತ್ತಲೆ ಭಾಗ್ಯ ದೊರೆತಿದೆ.
ಗ್ರಾಮೀಣ ಪ್ರದೇಶದಲ್ಲಿ ಕಳೆದ 24 ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದ್ದು, ಬಿಜೆಪಿ ಸರಕಾರ ಇರುವಾಗ ಪ್ರತೀ ಕ್ಷೇತ್ರಕ್ಕೆ ವರ್ಷಕ್ಕೆ 30 ಕಿ.ಮೀ. ರಸ್ತೆಯನ್ನು ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯಡಿಯಲ್ಲಿ ನಡೆಯುತ್ತಿತ್ತು. ಪ್ರಕೃತ ನಡೆಯುತ್ತಿಲ್ಲ. ಬಡವರಿಗೆ ನೀಡುವ ಮನೆಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಾಯತಿಗೆ 100 ಮನೆಗಳನ್ನು ನೀಡುತ್ತಿದ್ದರೆ ಈಗ ಪ್ರತೀ ಗ್ರಾಮ ಪಂಚಾಯತ್ಗೆ 12 ರಿಂದ 15 ಮನೆಗಳು ನೀಡಲಾಗುತ್ತಿದೆ.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದ್ದು, ಬಿಜೆಪಿ ಜಿ.ಪಂ., ತಾ.ಪಂ., ಚುನಾವಣೆಯಲ್ಲಿ ಇದರ ಲಾಭವನ್ನು ಮಾಡಿಕೊಳ್ಳಬೇಕು. ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ಯಂತ್ರ ಕಾಂಗ್ರೆಸ್ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದು, ಜನಹಿತವನ್ನು ಮರೆತಿದೆ. ಸರಕಾರದ ಈ ಎಲ್ಲಾ ವೈಫಲ್ಯಗಳನ್ನು ಪಕ್ಷದ ಕಾರ್ಯಕರ್ತರು ಕರಪತ್ರ, ಪ್ರತಿಭಟನೆ, ಜನಾಭಿಪ್ರಾಯವನ್ನು ರೂಪಿಸುವ ಮೂಲಕ ಜನರಿಗೆ ತಲುಪಿಸಬೇಕು. ಆ ಮೂಲಕ ತಾಲೂಕು, ಜಿಲ್ಲಾ ಪಂಚಾಯತಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಜಯಭೇರಿ ಭಾರಿಸುವಲ್ಲಿ ಯಶಸ್ವಿಯಾಗಲು ಕಾರ್ಯಕರ್ತರು ಇಂದಿನಿಂದಲೇ ತೊಡಗಿಸಿಕೊಳ್ಳಬೇಕೆಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷರು, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಶ್ರೀ ವಿ.ಸುನೀಲ್ ಕುಮಾರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಜಿಲ್ಲೆಯಿಂದ ಪ್ರತೀ ವಿಧಾನ ಸಭೆಯ ಕ್ಷೇತ್ರಕ್ಕೆ ಪ್ರಮುಖರನ್ನು ನೇಮಿಸಿ, ಅವರು ವಿಧಾನ ಸಭಾ ಕ್ಷೇತ್ರದ ತಂಡದ ಜೊತೆಗೆ ಪಂಚಾಯತ್ ಮಟ್ಟದವರೆಗೆ ಸಭೆಗಳನ್ನು ನಡೆಸಿ ತಯಾರಿ ನಡೆಸಬೇಕೆಂದೂ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕ್ಷೇತ್ರದಲ್ಲಿ ಜನವರಿ 8 ರ ಒಳಗೆ ಪಡೆದುಕೊಳ್ಳಬೇಕೆಂದು ಸೂಚನೆಯನ್ನು ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ರವರು ನೀಡಿದರು.
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಚುನಾವಣೆಯಲ್ಲಿ ದುಡಿದ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು. ರಾಜ್ಯ ಕಾರ್ಯದರ್ಶಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ದೇವದಾಸ್ ಶೆಟ್ಟಿ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಸಂಜೀವ ಮಠಂದೂರು ಜಿಲ್ಲಾ ಕಾರ್ಯಕ್ರಮಗಳ ವರದಿ ಮಂಡಿಸಿದರು. ಕಾರ್ಯದರ್ಶಿ ಡಾ|ಭರತ್ ಶೆಟ್ಟಿ ಸ್ವಾಗತಿಸಿದರು. ಸಭೆಯಲ್ಲಿ ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಜಯರಾಮ ಶೆಟ್ಟಿ, ಎನ್.ಯೋಗೀಶ್ ಭಟ್, ಕೆ.ಬಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ಸತೀಶ್ ಪ್ರಭು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.