ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾರತದ ಒಂದು ಭಾಗವಾಗಿದ್ದು, ಅದರ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಮತ್ತು ಅದು ತನ್ನದೇ ಜನರ ಬಗ್ಗೆ ಗಮನ ಹರಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕೆ ರೆಡ್ಡಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಶನಲ್ ಕನ್ವೆನ್ಷನ್ ಸೆಂಟರ್ನಲ್ಲಿ (ಎಸ್ಕೆಐಸಿಸಿ) ಮೂರನೇ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಪಾಕಿಸ್ತಾನವು ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ ಮತ್ತು ತನ್ನದೇ ಆದ ದುಸ್ಥಿತಿಯತ್ತ ಅದು ಗಮನ ಹರಿಸಬೇಕು ಎಂದು ಹೇಳಿದರು.
”ನಾವು ಏನೇ ಮಾಡಿದರೂ ನಮ್ಮ ಜನರ ಹಿತಕ್ಕಾಗಿ. ಏನು ಬೇಕಾದರೂ ಹೇಳಲು ಪಾಕಿಸ್ತಾನ ಯಾರು? ಅದಕ್ಕೆ ಯಾವ ಹಕ್ಕು ಇದೆ? ಸ್ವಾತಂತ್ರ್ಯ ಬಂದಾಗಿನಿಂದ ಜಮ್ಮು-ಕಾಶ್ಮೀರ ಭಾರತದ ಭಾಗವಾಗಿದೆ. ಇದು ನಮ್ಮ ನಾಡು, ಇವರು ನಮ್ಮ ಜನ, ಅದಕ್ಕಾಗಿ ಸಾವಿರಾರು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಏನನ್ನೂ ಹೇಳಲು ಪಾಕಿಸ್ತಾನ ಯಾರು” ಎಂದು ಪ್ರಶ್ನಿಸಿದ್ದಾರೆ.
“ಪಾಕಿಸ್ತಾನ ತನ್ನತ್ತ ಗಮನ ಹರಿಸಬೇಕು ಮತ್ತು ತನ್ನ ಜನರ ಒಳಿತಿಗಾಗಿ ಏನಾದರೂ ಮಾಡಬೇಕು. ಅವರಿಗೆ ಉದ್ಯೋಗ, ಊಟ ಕೊಡಬೇಕು. ನಮ್ಮ ಬಗ್ಗೆ ಯಾಕೆ ಮಾತನಾಡುತ್ತಿದ್ದೀರಿ? ನಿಮಗೆ ಹಕ್ಕಿಲ್ಲ. ಪಾಕಿಸ್ತಾನವು ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ, ಜನರು ಹಸಿವಿನಿಂದ ಸಾಯುತ್ತಿದ್ದಾರೆ, ಅವರಿಗೆ ಅಕ್ಕಿ ಅಥವಾ ಗ್ಯಾಸ್ ಸಿಗುತ್ತಿಲ್ಲ, ಆದ್ದರಿಂದ ಅದು ತನ್ನತ್ತ ಗಮನಹರಿಸಬೇಕು” ಎಂದು ರೆಡ್ಡಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನರು ಸಂತೋಷವಾಗಿದ್ದಾರೆ. ಕೇಂದ್ರವು ಅವರಿಗಾಗಿ ಎಲ್ಲವನ್ನೂ ಮಾಡುತ್ತಿದೆ ಮತ್ತು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮದಲ್ಲಿ ಕೇಂದ್ರದ ಉಪಕ್ರಮಗಳ ಕುರಿತು ಮಾತನಾಡಿದ ರೆಡ್ಡಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಜನಪ್ರಿಯ ಪ್ರವಾಸಿ ರಾಜ್ಯಗಳಲ್ಲಿ ಹೂಡಿಕೆಗಳನ್ನು ಚರ್ಚಿಸಲು ಭಾರತವು ಪ್ರವಾಸೋದ್ಯಮ ಶೃಂಗಸಭೆಯನ್ನು ನಡೆಸಲಿದೆ ಎಂದು ಹೇಳಿದರು.
”ನಾವು ಭಾರತವನ್ನು ಜಾಗತಿಕವಾಗಿ ನಂಬರ್ ಒನ್ ತಾಣವಾಗಿ ಬಿಂಬಿಸಬೇಕಾಗಿದೆ. ಖಾಸಗಿ ಬಂಡವಾಳ ಹೂಡಿಕೆ ಅಗತ್ಯವಾಗಿದ್ದು, ಅದಿಲ್ಲದಿದ್ದರೆ ಇಷ್ಟು ದೊಡ್ಡ ಜನಸಂಖ್ಯೆ ಮತ್ತು ಲಕ್ಷಗಟ್ಟಲೆ ತಾಣಗಳನ್ನು ಹೊಂದಿರುವ ಭಾರತದಂತಹ ಬೃಹತ್ ದೇಶ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಾಧ್ಯವಿಲ್ಲ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.