ಸುಬ್ರಹ್ಮಣ್ಯ:ಗುತ್ತಿಗಾರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮ ಸ್ನೇಹಿ ಜನಸ್ಪಂದನ ಕಾರ್ಯಕ್ರಮ ಶನಿವಾರ ಗುತ್ತಿಗಾರು ಗ್ರಾಮ ಪಂಚಾಯತ್ ಬಳಿಯ ಪರಿಶಿಷ್ಟ ಪಂಗಡ ಸಭಾಭವನದಲ್ಲಿ ನಡೆಯಿತು.
ಸಭೆಗೆ ತಡವಾಗಿ ಆಗಮಿಸಿದ ನೋಡಲ್ ಅಧಿಕಾರಿಯನ್ನು ಗ್ರಾಮ ಪಂಚಾಯತ್ ಸದಸ್ಯರು ತರಾಟೆಗೆ ತೆಗೆದುಕೊಂಡರು.ಬಳಿಕ ವಿವಿಧ ವಿಚಾರಗಳ ವಿಚಾರ ವಿನಿಮಯ , ಅರ್ಜಿ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮ ಸ್ನೇಹಿ ಜನಸ್ಪಂದನ ಕಾರ್ಯಕ್ರಮ ಗ್ರಾಮಮಟ್ಟದಲ್ಲಿ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದೆ.ಈ ಸಭೆಯಲ್ಲಿ ಗ್ರಾಮಸ್ಥರು ವೈಯಕ್ತಿಕ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅರ್ಜಿಯನ್ನು ನೋಡಲ್ ಅಧಿಕಾರಿ ಮೂಲಕ ನೀಡುವ ಅವಕಾಶ ಇರುತ್ತದೆ. ಈ ಅರ್ಜಿಗಳನ್ನು ಸಂಬಂಧಿತ ಇಲಾಖೆಗೆ ವರ್ಗಾಯಿಸಿ ಉತ್ತರ ಹಾಗೂ ಸಮಸ್ಯೆ ಪರಿಹಾರ ಮಾಡುವ ಯೋಜನೆ ಇದಾಗಿದೆ.ಗುತ್ತಿಗಾರಿನಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ವ್ಯಾಪ್ತಿ ವಿವಿಧ ಗ್ರಾಮ ಪಂಚಾಯತ್ ಜನರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನೋಡಲ್ ಅಧಿಕಾರಿಯಾಗಿ ಜಿಲ್ಲಾ ಸಹಕಾರಿ ಸಂಘಗಗಳ ಉಪನಿಬಂಧಕ ಎಂ.ಕೆ.ಸಲೀಂ ಆಗಮಿಸಿದ್ದರು.ಸಭೆ ಬೆಳಗ್ಗೆ 10.3೦ ರಿಂದ 3ಗಂಟೆಯವರೆಗೆ ಎಂದು ನಿಗದಿಯಾಗಿತ್ತು, ಆದರೆ ನೋಡಲ್ ಅಧಿಕಾರಿ ಸಭೆಗೆ ಆಗಮಿಸುವಾಗಲೇ ಗಂಟೆ 12 ಆಗಿತ್ತು.ಹೀಗಾಗಿ ಆಗಮಿಸಿದ ಗ್ರಾಮ ಪಂಚಾಯತ್ ಸದಸ್ಯರು ತರಾಟೆಗೆ ತೆಗೆದುಕೊಂಡರು, ಈ ಸಂದರ್ಭದಲ್ಲಿ ಮಾತನಾಡಿದ ನೋಡಲ್ ಅಧಿಕಾರಿ ಸಲೀಂ, ಕಲ್ಲಡ್ಕದಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬ್ಲಾಕ್ ಆಗಿದ್ದರಿಂದ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.
ಬಳಿಕ ನಡೆದ ಸಭೆಯ ಅಧ್ಯಕ್ಷತೆನ್ನು ಗ್ರಾಮಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ವಹಿಸಿದ್ದರು.ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಪಿಡಿಒ ಶ್ಯಾಂ ಪ್ರಸಾದ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದರು.
ಪ್ರಮುಖವಾಗಿ ಗುತ್ತಿಗಾರು ಪೇಟೆಯಲ್ಲಿ ಒಂದು ಬದಿ ಮಾತ್ರವೇ ಚರಂಡಿ ವ್ಯವಸ್ಥೆ ಮಾಡಿದ್ದು ಲೋಕೋಪಯೋಗಿ ಇಲಾಖೆ ಈ ಬಗ್ಗ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ,ಗುತ್ತಿಗಾರು ಕೆಳಗಿನ ಪೇಡೆಯಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆದಿಲ್ಲ,ಗುತ್ತಿಗಾರು ಗ್ರಾಮದ ಕಮಿಲ ಗುರುವ ಎಂಬವರಿಗೆ ಅಂಗವಿಕಲ ಸೌಲಭ್ಯ ನೀಡುವ ಬಗ್ಗೆ,ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನ ಜಾಗವನ್ನು ಗುರುತು ಮಾಡುವ ಬಗ್ಗೆ ಹಾಗೂ ನಾಲ್ಕೂರು ಗ್ರಾಮದ ಗ್ರಾಮಕರಣಿಕರ ಸ್ಥಳ ನಿಗದಿ,94 ಸಿ ಅಡಿಯಲ್ಲಿ ಅರ್ಜಿದಾರರಿಗೆ ಶೀಘ್ರ ಕಡತ ವಿಲೇವಾರಿ, ಉತ್ರಂಬೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಕಾಯ್ದಿರಿಸಿದ ನಿವೇಶನ ಗಡಿಗುರುತು,ಗುತ್ತಿಗಾರು ಗ್ರಾಮದ ಗ್ರಂಥಾಲಯಕ್ಕೆ ಸೂಕ್ತ ವ್ಯವಸ್ಥೆ, ಗ್ರಂಥಾಲಯ ನಿವೇಶನ ಮಂಜೂರು, ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆ ಮೊದಲಾದ ವಿಚಾರಗಳಿಗೆ ಮನವಿ ನೀಡಲಾಯಿತು.
ಗುತ್ತಿಗಾರು ಪಿಡಿಒ ಶ್ಯಾಮ ಪ್ರಸಾದ್ ಸ್ವಾಗತಿಸಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.