ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅವೆಂದರೆ ಮಹಿಳಾ ಮೀಸಲಾತಿ ಮಸೂದೆ ಮತ್ತು ಮತಾಂತರ ನಿಷೇಧ ಮಸೂದೆ.
ಉತ್ತರಾಖಂಡ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ 2022 ರ ಅಂಗೀಕಾರ ಆ ರಾಜ್ಯದಲ್ಲಿ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನಿನ ಜಾರಿಗೆ ಅವಕಾಶ ಕಲ್ಪಿಸಲಿದೆ. ಇದಲ್ಲದೆ, ಉತ್ತರಾಖಂಡ ಸಾರ್ವಜನಿಕ ಸೇವಾ ಮಸೂದೆ 2022 ಮತ್ತೊಮ್ಮೆ ರಾಜ್ಯದಲ್ಲಿ ಮಹಿಳೆಯರಿಗೆ 30 ಪ್ರತಿಶತದಷ್ಟು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಿದೆ.
ಬಲವಂತದ ಮತಾಂತರವನ್ನು ಅಪರಾಧ ಎಂದು ಘೋಷಿಸಿ 10 ವರ್ಷಗಳ ಜೈಲು ಶಿಕ್ಷೆಯನ್ನು ಒದಗಿಸುವ ಮತಾಂತರ ವಿರೋಧಿ ಕಾನೂನನ್ನು ಬಲಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.ಅದರಂತೆ ಬುಧವಾರ ವಿಧಾನಸಭೆಯಲ್ಲಿ ಈ ವಿಧೇಯಕಗಳು ಅಂಗೀಕಾರಗೊಂಡಿದ್ದು, ರಾಜ್ಯದಲ್ಲಿ ಇವುಗಳನ್ನು ಜಾರಿಗೊಳಿಸಲು ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, “ಉತ್ತರಾಖಂಡವು ದೇವಭೂಮಿ, ಮತಾಂತರದಂತಹ ವಿಷಯಗಳು ನಮಗೆ ಮಾರಕವಾಗಿವೆ, ಆದ್ದರಿಂದ ರಾಜ್ಯದಲ್ಲಿ ಧಾರ್ಮಿಕ ಮತಾಂತರವನ್ನು ನಿಷೇಧಿಸಲು ಕಠಿಣ ಕಾನೂನುಗಳನ್ನು ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ” ಎಂದು ಹೇಳಿದರು. ರಾಜ್ಯದಲ್ಲಿ ಈ ಕಾನೂನನ್ನು ಸಂಪೂರ್ಣ ಸಂಕಲ್ಪದಿಂದ ಜಾರಿಗೊಳಿಸುವುದು ರಾಜ್ಯ ಸರ್ಕಾರದ ಪ್ರಯತ್ನವಾಗಿದೆ ಎಂದರು.
ಉತ್ತರಾಖಂಡದ ಮಹಿಳೆಯರಿಗೆ ಮೀಸಲಾತಿ ಮಸೂದೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಧಾಮಿ ಅವರು, “ಉತ್ತರಾಖಂಡ ರಚನೆಯಲ್ಲಿ ರಾಜ್ಯದ ಮಹಿಳೆಯರು ದೊಡ್ಡ ಕೊಡುಗೆಯನ್ನು ಹೊಂದಿದ್ದು, ತಾಯಂದಿರನ್ನು ಗೌರವಿಸಿ ಅವರಿಗೆ ಮೀಸಲಾತಿಯ ಲಾಭವನ್ನು ನೀಡಬೇಕೆಂದು ಸರ್ಕಾರ ಈಗಾಗಲೇ ನಿರ್ಧರಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.