ಬೆಂಗಳೂರು: “ನಮ್ಮ ದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಕಾರಣ ಯಾರು ಅಂತ ಹುಡುಕುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ಮತ್ತು ಪತ್ರಕರ್ತರು ಕಾರಣ ಎಂದು ಬೆರಳು ತೋರಿಸುತ್ತಾರೆ. ಪತ್ರಕರ್ತರ ಸಮೂಹ ಕೂಡ ಬಹಳ ದೂಷಣೆಗೊಳಗಾಗಿದ್ದಾರೆ. ಈ ರೀತಿಯ ತಲ್ಲಣಗಳ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಪತ್ರಕರ್ತರು ಸದ್ಯದ ಅಗತ್ಯ” ಎಂದು ಪ್ರಜ್ಞಾಪ್ರವಾಹದ ಮಧ್ಯಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ್ ಅವರು ಅಭಿಪ್ರಾಯಿಸಿದರು.
ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವರು ಮಾತನಾಡುತ್ತಾ “ನಾರದರು ಆದ್ಯ ಪತ್ರಕರ್ತರು, ನಾರದರಿಗೆ ಎಲ್ಲ ಲೋಕದಲ್ಲಿ ಗೌರವವಿತ್ತು.ಪತ್ರಕರ್ತರು ಪಕ್ಷಪಾತಿಗಳಾಗಬೇಕು ಆದರೆ ರಾಜಕೀಯವಲ್ಲ,ಬದಲಾಗಿ ಸತ್ಯಪಕ್ಷಪಾತಿಯಾಗಿ ಇರಬೇಕು. ಒಂದೇ ಕಡೆಗೆ ವಾಲಿಕೊಂಡಿದ್ದ ಪತ್ರಿಕಾ ರಂಗ ಈಗ ಎರಡೂ ಕಡೆಗೆ ಸಮವಾಗಿ ಪ್ರಾಮುಖ್ಯತೆ ನೀಡುತ್ತಿದೆ .ರೈಟಿಸ್ಟ್ ಮತ್ತು ಲೆಫ್ಟಿಸ್ಟ್ ಅನ್ನುವುದಕ್ಕಿಂತಲೂ ‘ರೈಟ್ ಆರ್ ರಾಂಗ್’ ರೀತಿಯಲ್ಲಿ ವಿಚಾರಗಳನ್ನು ನೋಡಬೇಕಿದೆ. ಸಾವಿನ ಮೇಲೆ ಪ್ರತಿಕ್ರಿಯೆ ಇರಬೇಕೇ ಹೊರತು, ಯಾರು ಸತ್ತರು ಎಂಬುದರ ಮೇಲೆ ಪ್ರತಿಕ್ರಿಯೆ ನಿರ್ಧಾರವಾಗಬಾರದು” ಎಂದರು.
“ಸಂವಾದ ಪತ್ರಕರ್ತರ ಮೇಲೆ ಹಲ್ಲೆಯಾದಾಗ ಪ್ರತಿಕಾರಂಗ ಎದ್ದು ನಿಲ್ಲಬೇಕಿತ್ತು.ಆದರೆ ಹಾಗಾಗಲಿಲ್ಲ.
ಮಾಧ್ಯಮಗಳು ಸಾಕಷ್ಟು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ಸತ್ಯನಿಷ್ಠೆ ಮತ್ತು ಅಧ್ಯಯನದ ಅಗತ್ಯವೂ ಇದೆ. ನಮ್ಮ ದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಕಾರಣ ಯಾರು ಅಂತ ಹುಡುಕುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ಮತ್ತು ಪತ್ರಕರ್ತರು ಅದಕ್ಕೆ ಕಾರಣ ಎಂದು ಹೇಳುತ್ತಾರೆ. ಈ ರೀತಿ ಪತ್ರಕರ್ತರ ಸಮೂಹ ಕೂಡ ಬಹಳ ದೂಷಣೆಗೊಳಗಾಗಿದ್ದಾರೆ. ಈ ರೀತಿಯ ತಲ್ಲಣಗಳ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಪತ್ರಕರ್ತರು ಸದ್ಯದ ಅಗತ್ಯ” ಎಂದರು.
ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ತಿ.ತಾ.ಶರ್ಮ ಪ್ರಶಸ್ತಿ ಪಡೆದಂತಹ
ಚಿ.ಜ ರಾಜೀವ ಅವರು ಮಾತನಾಡಿ “ತಿ.ತಾ.ಶರ್ಮರವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸವಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದ ಅವರ ವ್ಯಕ್ತಿತ್ವಕ್ಕೆ ಸೋತವನು.ಅವರು ಗಾಂಧೀವಾದಿ,ನಿಷ್ಠುರವಾದಿ ಪತ್ರಕರ್ತರು ಆದುದರಿಂದ ಈ ಪ್ರಶಸ್ತಿ ಹೆಚ್ಚು ತೂಕ ಪಡೆದುಕೊಂಡಿದೆ ” ಎಂದರು.
ಬೆ.ಸು.ನಾ ಮಲ್ಯ ಪ್ರಶಸ್ತಿ ಪಡೆದ ಶ್ರೀಗುರುವಪ್ಪ ಬಾಳೆಪುಣಿಯವರು ಮಾತನಾಡುತ್ತಾ “ಅಂಬೇಡ್ಕರ್ ಅವರ ಕಾರಣದಿಂದ ನಾನು ಶಿಕ್ಷಣ ಪಡೆದವನು ನಾನು.ಅವರಿಗೆ ಋಣಿಯಾಗಿರುತ್ತೇನೆ.ಹೊಸದಿಗಂತ ಪತ್ರಿಕೆ ನನಗೆ ಅನ್ನ ಕೊಟ್ಟಿದೆ. ನನ್ನ ಆಲೋಚನೆಗಳಿಗೆ ವೇದಿಕೆ ಕೊಟ್ಟಿದೆ.ನನ್ನ ಕುಟುಂಬದ ಸದಸ್ಯರು,ಮತ್ತು ನನ್ನ ಪ್ರೀತಿಯ ಬಾಳೆಪುಣಿಗೆ ನಾನು ಕೃತಜ್ಞ. ಅಸ್ಪೃಶ್ಯತೆಯ ಎಲ್ಲ ಕೊನೆಗಳನ್ನು ನೋಡಿದ್ದೇನೆ.ನನಗೆ ಸಂಘರ್ಷ ಬೇಡ,ಅವರ ಮೇಲೆ ಅಸೂಯೆಯಿಲ್ಲ,ಪ್ರೀತಿಯಿದೆ. ನಮ್ಮಲ್ಲಿ ವ್ಯತ್ಯಾಸಗಳಿವೆ, ಆದರೆ ವ್ಯತ್ಯಾಸಗಳೇ ಮುಖ್ಯವಾಗಬಾರದು. ಪಾಸಿಟಿವ್ನಿಂದ ನೆಗೆಟಿವ್ಅನ್ನು ತೆಗೆಯಲು ಸಾಧ್ಯವಿದೆ” ಎಂದರು.
ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ ಪಡೆದ ದು.ಗುಲಕ್ಷ್ಮಣ ಅವರು ಮಾತನಾಡಿ “ಸನ್ಮಾನ ಮತ್ತು ಅವಮಾನ ಎರಡನ್ನೂ ಸಮವಾಗಿ ಸ್ವೀಕರಿಸುವ ಭಾವದಿಂದ ನಿಜವಾದ ಪತ್ರಕರ್ತನಾಗಿ ಬೆಳೆಯಲು ಸಾಧ್ಯವಿದೆ.ಕಹಳೆ,ರಣದುಂಧುಬಿ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡುವ ಸಂದರ್ಭದಲ್ಲಿ 3ತಿಂಗಳ ಜೈಲು ವಾಸ,ಅದೇ ದೊಡ್ಡ ಸನ್ಮಾನ ಎನಿಸಿತ್ತು.ಹೊ.ವೆ ಶೇಷಾದ್ರಿಯವರ ಹೆಸರಿನ ಪ್ರಶಸ್ತಿ ಸಿಕ್ಕಿದ್ದು ಸಂತೋಷ ತಂದಿದೆ.ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ಜೊತೆ ಇದ್ದ ಅನುಭವದ ನೆನಪು ಹಾಗೇ ಇದೆ.ಭುಗಿಲು ಎನ್ನುವ ಬೃಹತ್ ಗ್ರಂಥ ರಚನೆಯ ತಂಡ,ಶೇಷಾದ್ರಿಗಳು ಹೆಡ್ಮಾಸ್ಟರ್ ಹಾಗೆ ಬರೆಸುತ್ತಿದ್ದರು.” ಎಂದರು.
ವಿಎಸ್ಕೆ ಮೀಡಿಯಾ ಅವಾರ್ಡ್ ಪುರಸ್ಕೃತರಾದ ಡಾ.ಪ್ರೇಮಾ ಮಾತನಾಡಿ “1990ರಲ್ಲಿ ಆರಂಭಿಸಿದ ಬರಹಗಳಿಂದ ಅನೇಕ ಮಂದಿಗೆ ಉಪಯೋಗವಾಗಿದೆ. ಅದೇ ನಮಗೆ ಪ್ರೇರಣೆಯಾಗಿದೆ. ಮಾಧ್ಯಮದ ಮೂಲಕ ನನಗೆ ಜನಗಳನ್ನು ಮುಟ್ಟೋಕೆ ಸಾಧ್ಯವಾಗಿದೆ. ವೈದ್ಯಕೀಯ ಸಾಹಿತ್ಯ ಅನ್ನೋದು ಸಾಹಿತ್ಯವಾ, ಅಡ್ವರ್ಟೈಸ್ಮೆಂಟ್ ಆ ಗೊತ್ತಾಗದ ರೀತಿಯಲ್ಲಿ ಬರೆಯಲಾಗುತ್ತದೆ. ಆದುದರಿಂದ ಸತ್ಯ ಹೇಳುವುದು ಮುಖ್ಯವಾಗುತ್ತದೆ” ಎಂದರು.
ವಿಜಯ ಕರ್ನಾಟಕದ ಸಂಪಾಕರಾದ ಸುದರ್ಶನ್ ಚೆನ್ನಂಗಿಹಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿಗಳು,ಕಾ.ಶ್ರೀ.ನಾಗರಾಜ,ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕರಾದ ವಿ.ನಾಗರಾಜ,ಪ್ರಾಂತ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ್ ಮೈಸೂರು ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.