ನವದೆಹಲಿ: ದೇಶದ ಯುವ ಸಮುದಾಯ ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ಉತ್ತೇಜಿಸಲು ದೇಶಾದ್ಯಂತ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ವಿಜ್ಞಾನ ಮ್ಯೂಸಿಯಂಗಳ ಸ್ಥಾಪನೆ ಸಂಬಂಧ ದೆಹಲಿಯಲ್ಲಿಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಆಸ್ಐಆರ್) ಮತ್ತು ವಿಜ್ಞಾನ ಮ್ಯೂಸಿಯಂಗಳ ರಾಷ್ಟ್ರೀಯ ಮಂಡಳಿ(ಎನ್ ಸಿಎಸ್ಎಂ) ನಡುವೆ ಏರ್ಪಟ್ಟ ತಿಳಿವಳಿಕೆ ಪತ್ರಕ್ಕೆ ಸಹಿ ನಂತರ ಅವರು ಈ ವಿಷಯ ತಿಳಿಸಿದರು.
ತಿಳಿವಳಿಕೆ ಪತ್ರಕ್ಕೆ ಸಹಿ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.
ಆಯ್ದ ಸಿಎಸ್ಐಆರ್ ಪ್ರಯೋಗಾಲಯಗಳಲ್ಲಿ ವಿಜ್ಞಾನ ಮ್ಯೂಸಿಯಂಗಳನ್ನು ಸ್ಥಾಪಿಸುವುದು ತಿಳಿವಳಿಕೆ ಪತ್ರದ ಗುರಿಯಾಗಿದೆ. ದೇಶದ ಎಲ್ಲ ವರ್ಗದ ಶ್ರೀಸಾಮಾನ್ಯರಲ್ಲಿ ವೈಜ್ಞಾನಿಕ ಕುತೂಹಲ ಉತ್ತೇಜಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ನಂತರ ಮಾತನಾಡಿದ ಸಚಿವ ಡಾ. ಜಿತೇಂದ್ರ ಸಿಂಗ್, 21ನೇ ಶತಮಾನದಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜನರು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇತ್ತೀಚೆಗೆ ದೇಶದಲ್ಲಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ಸೋಂಕು ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆ ಕಡೆಗೆ ಸಮಾಜದ ಅರಿವು ಹೆಚ್ಚಾಗಬೇಕೆಂಬ ಮಹತ್ವವನ್ನು ಒತ್ತಿ ಹೇಳಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್ನಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ 76ನೇ ಭದ್ರತಾ ಮಂಡಳಿ ಸಭೆ ಉದ್ದೇಶಿಸಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಸಚಿವರು, “ಸಕಾರಾತ್ಮಕ ಆಲೋಚನೆಗಳು ಮತ್ತು ಮೂಲಭೂತವಾದದ ಬೆದರಿಕೆಗಳನ್ನು ಇಡೀ ವಿಶ್ವವೇ ಎದುರಿಸುತ್ತಿದೆ” ಎಂಬ ಮೋದಿ ಭಾಷಣವನ್ನು ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ವಿಜ್ಞಾನ ಆಧರಿತ, ತಾರ್ಕಿಕ ಮತ್ತು ಪ್ರಗತಿಪ ಚಿಂತನೆಗಳು ಅಭಿವೃದ್ಧಿಯ ಮೂಲಾಧಾರಗಳಾಗಿವೆ. ವಿಜ್ಞಾನ ಆಧರಿತ ಕಾರ್ಯವಿಧಾನಗಳನ್ನು ಬಲಪಡಿಸುವ ಸಲುವಾಗಿ, ಭಾರತವು ಅನುಭವ ಆಧರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ ಎಂದರು.
ಇಂದು ನಡೆದ ತಿಳಿವಳಿಕೆ ಪತ್ರಕ್ಕೆ ಸಹಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಇಟ್ಟ ಪುಟ್ಟ ಹೆಜ್ಜೆಯಾಗಿದೆ. ವಿಜ್ಞಾನ ಸಂವಹನ ಮತ್ತು ಪ್ರಸರಣದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುತ್ತದೆ. ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬುತ್ತಿರುವ ಕಾಲಘಟ್ಟದಲ್ಲಿ ಆಚರಿಸುತ್ತಿರುವ ಆಜಾ಼ದಿ ಕಾ ಅಮೃತ ಮಹೋತ್ಸವ ಸುಸಂದರ್ಭದಲ್ಲೇ ವಿಜ್ಞಾನ ಮ್ಯೂಸಿಯಂಗಳ ಸ್ಥಾಪನೆಗೆ ಸಹಿ ಬೀಳುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವರು ಹೇಳಿದರು.
ಪ್ರಧಾನ ಮಂತ್ರಿ ಮೋದಿ ಅವರ ಇಚ್ಛೆಯಂತೆ ಶಾಲಾ ವಿದ್ಯಾರ್ಥಿಗಳಿಗಾಗಿ ಐಐಟಿ-ಬಾಂಬೆ ಪಾಲುದಾರಿಕೆಯಲ್ಲಿ ಸಿಎಸ್ಐಆರ್ ವರ್ಚುಯಲ್ ಪ್ರಯೋಗಾಲಯ ಸ್ಥಾಪಿಸುವ ಹೊಸ ಉಪಕ್ರಮವು ಶ್ಲಾಘನೀಯ ಕ್ರಮವಾಗಿದೆ. ಸಿಎಸ್ಐಆರ್ ಕಳೆದ 8 ದಶಕಗಳಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಲು ಎನ್ ಸಿಎಸ್ಎಂ ಜತೆಗೂಡಿ ರಾಷ್ಟ್ರೀಯ ದೈಹಿತ ಪ್ರಯೋಗಾಲಯದಲ್ಲಿ ಮ್ಯೂಸಿಯಂ ಸ್ಥಾಪಿಸುವ ನಡೆ ಸ್ವಾಗತಾರ್ಹವಾಗಿದೆ ಎಂದು ಸಚಿವರು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಪ್ರತಿ ಮೂಲೆಗೂ ತಲುಪಬೇಕು ಮತ್ತು ಅದರ ವಿಸ್ತರಣೆಯ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಮ್ಯೂಸಿಯಂ ಸ್ಥಾಪನೆಯ ಉಪಕ್ರಮ ಸೂಕ್ತವಾಗಿದೆ. ಮ್ಯೂಸಿಯಂಗಳು ವಸ್ತುಸಂಗ್ರಹಾಲಯಗಳು ನಿಂತ ನೀರಾಗಬಾರದು. ಅವು ಕ್ರಿಯಾತ್ಮಕ ಮತ್ತು ಆಕರ್ಷಕ ತಾಣಗಳಾಗಿ, ಹೊಸತನಶೋಧದ ನೆಲೆಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಉತ್ಸಾಹವನ್ನು ನಾವು ಗುರುತಿಸುವಂತಾಗಬೇಕು ಎಂದರು.
ಸಿಎಸ್ಐಆರ್ ಸಂಸ್ಥೆಯು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಮತ್ತು ನೀತಿ ಆಯೋಗದ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಅದು ದೂರದ ಪ್ರದೇಶಗಳು ಮತ್ತು ಶಾಲೆಗಳಿಗೆ ತಲುಪಬೇಕು. ಡಿಜಿಟಲ್ ಸಾಧನಗಳ ಬಳಕೆ, ಸಿಎಸ್ಐಆರ್ನ ವರ್ಚುವಲ್ ಪ್ರಯೋಗಾಲಯಗಳು ಮತ್ತು ಎನ್ಸಿಎಸ್ಎಮ್ ಮೊಬೈಲ್ ವಿಜ್ಞಾನ ವಸ್ತುಸಂಗ್ರಹಾಲಯಗಳು ತುಂಬಾ ಪೂರಕ ಮತ್ತು ಮೌಲ್ಯಯುತವಾಗಿವೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಮಾತನಾಡಿ, ವಿಜ್ಞಾನ ಶಿಕ್ಷಣ ಉತ್ತೇಜಿಸಲು, ಯವ ಸಮುದಾಯ ಸೇರಿದಂತೆ ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸ್ಕೃತಿ ಸೃಜಿಸಲು ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. 21ನೇ ಶತಮಾನದ ವಿನೂತನ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂಬುದು ಇಂದಿನ ವಾಸ್ತವವಾಗಿದ್ದು, ಪ್ರಧಾನಿ ಮೋದಿ ಅವರ ದೃಷ್ಟಿಕೋನವೂ ಇದೇ ಆಗಿದೆ. 21ನೇ ಶತಮಾನದಲ್ಲಿ 5 ಸಿ ಗಳೆಂದರೆ ವಿಮರ್ಶಾತ್ಮಕ ಆಲೋಚನೆ, ಸೃಜನಶೀಲತೆ, ಸಹಭಾಗಿತ್ವ, ಕುತೂಹಲ ಮತ್ತು ಸಂವಹನ ಇವುಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು.
ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿರುವುದು ಎನ್ಸಿಎಸ್ಎಂ ಮತ್ತು ಸಿಎಸ್ಐಆರ್ ನಡುವೆ ಸಂಪರ್ಕ ಕಲ್ಪಿಸಲು, ಅವುಗಳ ಪ್ರಯೋಗಾಲಯಗಳ ಉದ್ದೇಶಗಳನ್ನು ಗಣನೀಯವಾಗಿ ಈಡೇರಿಸಲು ಸಹಾಯಕವಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ಹೆಚ್ಚು ಫಲಪ್ರದ ರೀತಿಯಲ್ಲಿ ಈಡೇರಿಸಲು ಸಾಧ್ಯವಾಗಲಿದೆ. ಈ ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಂಸ್ಕೃತಿ ಸಚಿವಾಲಯ ಎಲ್ಲ ಸಹಾಯ ಮತ್ತು ನೆರವು ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
ಭಾರತ ಸರ್ಕಾರದ ಇತರೆ ಇಲಾಖೆಗಳ ಜತೆ ಸಹಭಾಗಿತ್ವ ಹೊಂದುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದ ಅವರು, ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸತನ ಶೋಧ ಸಂಸ್ಕೃತಿಯನ್ನು ಉತ್ತೇಜಿಸುವುದೇ ಈ ಎಲ್ಲಾ ಇಲಾಖೆಗಳ ಉದ್ದೇಶವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.