ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಆಗಸ್ಟ್ 15 ರ ಸ್ವಾತಂತ್ರ್ಯದ ಹಿಂದಿನ ದಿನವಾದ ಇಂದು ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ 2047 ರ ಸಮೃದ್ಧ ಮತ್ತು ಶಾಂತಿಯುತ ಭಾರತದ ಕಲ್ಪನೆ ನನ್ನ ಮನದಾಳದಲ್ಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಮ್ಮೆಲ್ಲಾ ಕೆಲಸಗಳನ್ನು ದೇಶದ ಹೆಸರಿನಲ್ಲಿ ಮಾಡುತ್ತೇವೆ ಎಂಬ ಸಂಕಲ್ಪವನ್ನು ದೇಶವಾಸಿಗಳು ಮಾಡಿಕೊಳ್ಳಬೇಕು. ಈ ಧ್ಯೇಯವನ್ನು ಮಂತ್ರದ ರೂಪದಲ್ಲಿ ಅಳವಡಿಸಿಕೊಂಡು, ಅದನ್ನು ಸಮರ್ಪಣಾ ಭಾವ ಮತ್ತು ಭಕ್ತಿಯಿಂದ ಮಾಡಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹವಾಮಾನದ ಬಗೆಗೂ ಮಾತನಾಡಿದ ಅವರು, ವಾತಾವರಣವನ್ನು ಆರೋಗ್ಯಪೂರ್ಣವಾಗಿ ರಕ್ಷಿಸುವ ನಿಟ್ಟಿನಲ್ಲಿ ದೇಶದ ಬದ್ಧತೆ ನಮಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ. ಅಂತೆಯೇ ಈ ವಿಶೇಷ ವರ್ಷವನ್ನು ಸ್ಮರಣೀಯವಾಗಿಸಲು ಭಾರತ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿರುವುದಾಗಿಯೂ ಅವರು ತಿಳಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಸಂಸದೀಯ ವ್ಯವಸ್ಥೆಯನ್ನು ಆಧರಿಸಿದೆ. ಸಂಸತ್ ಪ್ರಜಾಪ್ರಭುತ್ವದ ದೇವಾಲಯವಾಗಿದೆ. ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದಲ್ಲಿ ನೂತನ ಸಂಸತ್ ಕಟ್ಟಡ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ನಡೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಅಲ್ಲಿ ಹೊಸ ಜಾಗೃತಿ ಗೋಚರಿಸುತ್ತಿದೆ. ಪ್ರಜಾಪ್ರಭುತ್ವ, ಕಾನೂನಿನ ಮೇಲೆ ನಂಬಿಕೆ ಹೊಂದಿರುವವರ ಜೊತೆ ಸರ್ಕಾರ ನಿರಂತರ ಸಮಾಲೋಚನೆ ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಿದರು. ಜಮ್ಮು ಕಾಶ್ಮೀರದ ಯುವಕರು ಪ್ರಜಾಪ್ರಭುತ್ವದ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸುವಂತೆ ಅವರು ತಿಳಿಸಿದರು.
ರೈತರ ಬಗೆಗೂ ಮಾತನಾಡಿದ ಅವರು, ರೈತರನ್ನು ಸಬಲಗೊಳಿಸುವ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದ್ದು, ಕೃಷಿ ವಹಿವಾಟಿನ ಸುಧಾರಣೆ ಕಂಡುಬರುತ್ತಿದೆ. ರೈತರು ಮತ್ತಷ್ಟು ಸಬಲರಾಗುತ್ತಿದ್ದು, ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ ಪಡೆಯುವಂತಾಗಿದೆ ಎಂದು ಅವರು ಹೇಳಿದರು.
ಕೊರೋನಾ ಸಾಂಕ್ರಾಮಿಕ ಸೋಂಕಿನ ಹಾವಳಿ ಇನ್ನೂ ಮುಗಿದಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸುವಂತೆ ಅವರು ತಿಳಿಸಿದರು. ಕೊರೋನಾ ವಿರುದ್ಧ ನಮಗಿರುವ ದೊಡ್ಡ ರಕ್ಷಣೆ ಎಂದರೆ ಅದು ಲಸಿಕೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧ ನಾವು ಮತ್ತಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಈ ಸಂಕಷ್ಟದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಇವರ ಸೇವೆಯಿಂದಾಗಿ ದೇಶದಲ್ಲಿ ಬದುಕುಳಿದವರ ಸಂಖ್ಯೆ ದೊಡ್ಡದಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಎರಡನೆ ಅಲೆಯಿಂದ ದೇಶ ತತ್ತರಿಸಿದ್ದು, ಈ ಸವಾಲನ್ನು ಜಯಿಸಲು ನಮ್ಮ ಸಾಮೂಹಿಕ ಹೋರಾಟ ಸಹಾಯ ಮಾಡಿರುವುದಾಗಿ ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿಯೂ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ ಎಂದು ಕೋವಿಂದ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.