ನವದೆಹಲಿ: 2022ರ ವೇಳೆಗೆ ಹಂತ ಹಂತವಾಗಿ ಏಕ ಬಳಕೆ ಪ್ಲಾಸ್ಟಿಕ್(ಸಿಂಗಲ್ ಯೂಸ್ ಪ್ಲಾಸ್ಟಿಕ್) ಕೊನೆಗಾಣಿಸಬೇಕೆಂಬ ಪ್ರಧಾನಿ ಮೋದಿ ಅವರ ಕರೆಗೆ ಅನುಗುಣವಾಗಿ ಹಾಗೂ ಸಾಗರ ಜೈವಿಕ ವ್ಯವಸ್ಥೆ ಮತ್ತು ಭೌಗೋಳಿಕ ವ್ಯವಸ್ಥೆ ಎರಡರ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ.
ಇದರನ್ವಯ 2022ರ ವೇಳೆಗೆ ಕಡಿಮೆ ಬಳಕೆಯಲ್ಲಿರುವ ಮತ್ತು ಹೆಚ್ಚು ತ್ಯಾಜ್ಯ ಉತ್ಪತ್ತಿ ಸಂಭವನೀಯತೆ ಇರುವ ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಉಂಟು ಮಾಡುತ್ತಿರುವ ಮಾಲಿನ್ಯ ಎಲ್ಲ ದೇಶಗಳಲ್ಲೂ ಅತ್ಯಂತ ಪ್ರಮುಖ ಪರಿಸರಾತ್ಮಕ ಸವಾಲನ್ನು ತಂದೊಡ್ಡಿದೆ. ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಇಂತಹ ಮಹತ್ವದ ಕ್ರಮಕ್ಕೆ ಮುಂದಾಗಿದೆ. 2019ರಲ್ಲಿ ನಡೆದ ವಿಶ್ವ ಸಂಸ್ಥೆಯ ನಾಲ್ಕನೇ ಪರಿಸರ ಅಧಿವೇಶನದಲ್ಲಿ ಭಾರತ ಒಮ್ಮೆಲೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯವನ್ನು ಎದುರಿಸಲು ನಿರ್ಣಯವನ್ನು ಅಂಗೀಕರಿಸಬೇಕೆಂದು ಪ್ರಸ್ತಾವ ಮಂಡಿಸಿತ್ತು ಮತ್ತು ಇದು ಅತ್ಯಂತ ಪ್ರಮುಖ ವಿಷಯವಾಗಿದ್ದು, ಈ ಬಗ್ಗೆ ಜಾಗತಿಕ ಸಮುದಾಯ ಗಮನಹರಿಸುವ ತುರ್ತು ಅಗತ್ಯತೆಯನ್ನು ಪ್ರತಿಪಾದಿಸಿತ್ತು. ಆ ಕುರಿತಂತೆ ಯುಎನ್ಇಎ 4 ನಿರ್ಣಯ ಅಂಗೀಕರಿಸಿದ್ದು, ಮಹತ್ವದ ಹೆಜ್ಜೆಯಾಗಿದೆ.
2022ರ ಜುಲೈ 1 ರಿಂದ ಜಾರಿಗೆ ಬರುವಂತೆ ಪಾಲಿಸ್ಟೈರೀನ್ ಮತ್ತು ಪಾಲಿಸ್ಟೈರೀನ್ ನಿಂದ ತಯಾರಿಸಿದ ಉತ್ಪನ್ನಗಳು ಮತ್ತು ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಏಕ ಬಳಕೆ ಪ್ಲಾಸ್ಟಿಕ್ಗಳಾದ ಪ್ಲಾಸ್ಟಿಕ್ ಕಡ್ಡಿಗಳು ಒಳಗೊಂಡಿರುವ ಕಿವಿಯ ಕೊಳೆ ತೆಗೆಯುವ ಇಯರ್ ಬಡ್ಸ್, ಬಲೂನ್ ಗಳಲ್ಲಿನ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್ಕ್ರೀಮ್ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟೈರೀನ್(ಥರ್ಮಕೋಲ್), ಪ್ಲೇಟ್ ಗಳು, ಕಪ್ ಗಳು, ಗ್ಲಾಸ್ ಗಳು, ಕಟ್ಲರಿ ಚಮಚ, ಚಾಕು, ಸ್ಟ್ರಾ, ಟ್ರೇಗಳು, ಸಿಹಿ ತಿನಿಸುಗಳ ಬಾಕ್ಸ್ ಗಳ ಮೇಲಿನ ಹೊದಿಕೆ, ಆಹ್ವಾನ ಪತ್ರಿಕೆ ಮತ್ತು ಸಿಗರೇಟು ಪ್ಯಾಕೆಟ್, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು, ಸ್ಟಿರ್ರೆಸ್ ಮೊದಲಾದವುಗಳನ್ನು ನಿಷೇಧ ಮಾಡಲು ಸರ್ಕಾರ ಮುಂದಾಗಿದೆ.
ಕಡಿಮೆ ತೂಕದ ಪ್ಲಾಸ್ಟಿಕ್ ಕೈಚೀಲಗಳಿಂದ ಆಗುತ್ತಿರುವ ತ್ಯಾಜ್ಯವನ್ನು ತಡೆಯುವ ಉದ್ದೇಶದಿಂದ 2021ರ ಸೆಪ್ಟೆಂಬರ್ 30ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್ ಕೈಚೀಲಗಳ ದಪ್ಪ (ಥಿಕ್ ನೆಸ್) ಅನ್ನು 50 ಮೈಕ್ರಾನ್ ನಿಂದ 75 ಮೈಕ್ರಾನ್ ಗೆ ಹಾಗೂ 2022ರ ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ 120 ಮೈಕ್ರಾನ್ ಗೆ ಹೆಚ್ಚಿಸಲಾಗುವುದು. ಇದರಿಂದಾಗಿ ಪ್ಲಾಸ್ಟಿಕ್ ಕೈಚೀಲಗಳು ದಪ್ಪ ಇರುವುದರಿಂದ ಅವುಗಳನ್ನು ಮರುಬಳಕೆ ಮಾಡಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.
ಹಂತ ಹಂತವಾಗಿ ಕೊನೆಗಾಣಿಸಲು ನಿರ್ಧರಿಸಿರುವ ಗುರುತಿಸಲಾದ ಬಿಡಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ವ್ಯಾಪ್ತಿಯಲ್ಲಿ ಸೇರದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯವನ್ನು ಸಂಗ್ರಹ ಮಾಡಿ, ಅದನ್ನು ಪರಿಸರಾತ್ಮಕವಾಗಿ ಸುಸ್ಥಿರ ರೀತಿಯಲ್ಲಿ ವಿಸ್ತೃತ ಉತ್ಪಾದಕರ ಹೊಣೆಗಾರಿಕೆ, ಆಮದುದಾರರು ಮತ್ತು ಬ್ರಾಂಡ್ ಓನರ್(ಪಿಐಬಿಒ), ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016 ಅಡಿ ಮಾಡಬೇಕಾಗಿದೆ. ವಿಸ್ತರಿತ ಉತ್ಪಾದಕ ಹೊಣೆಗಾರಿಕೆಯ ಮಾರ್ಗಸೂಚಿಗಳ ಪರಿಣಾಮಕಾರಿ ಜಾರಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮ 2021 ನಲ್ಲಿ ಕಾನೂನಿನ ಶಕ್ತಿಯನ್ನು ತುಂಬಲಾಗಿದೆ.
ಸ್ವಚ್ಛಭಾರತ್ ಮಿಷನ್ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸಲಾಗಿದೆ. 2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಜಾರಿ ಬಲವರ್ಧನೆಗೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಇದು ಗುರುತಿಸಲಾದ ಬಿಡಿ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತಗ್ಗಿಸಲಿದೆ. (i) 2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪರಿಣಾಮಕಾರಿ ಜಾರಿಗೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ವಿಶೇಷ ಕಾರ್ಯಪಡೆಗಳನ್ನು ರಚಿಸಲು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ. ಸಚಿವಾಲಯ ರಾಷ್ಟ್ರ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ಬಿಡಿ ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ಸಮನ್ವಯದ ಪ್ರಯತ್ನಗಳನ್ನು ನಡೆಸುತ್ತಿದೆ ಮತ್ತು 2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಂಡಿದೆ.
2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಅದನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ಮತ್ತು ಬಿಡಿ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಸಮಗ್ರ ಕ್ರಿಯಾ ಯೋಜನಗಳನ್ನು ರೂಪಿಸುವಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಸರ್ಕಾರಗಳು ಮತ್ತು ಸಂಬಂಧಿಸಿದ ಎಲ್ಲ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಮನವಿ ಮಾಡಲಾಗಿದೆ. 1986ರ ಪರಿಸರ(ಸಂರಕ್ಷಣೆ) ಕಾಯ್ದೆ ಸೆಕ್ಷನ್ 5ರ ಪ್ರಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ(ಪಿಡಬ್ಲ್ಯೂಎಂ) ನಿಯಮ ಜಾರಿ ಬಲವರ್ಧನೆಗೆ ಸಾಂಸ್ಥಿಕ ಕಾರ್ಯತಂತ್ರವನ್ನು ರೂಪಿಸುವಂತೆ ನಿರ್ದೇಶನ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.