ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಅನ್ನು ಆಯೋಜಿಸುತ್ತಿದೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಯಂತಹ ಫಿಟ್ನೆಸ್ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು ಮತ್ತು ಸ್ಥೂಲಕಾಯತೆ, ಸೋಮಾರಿತನ, ಒತ್ತಡ ಮತ್ತು ರೋಗಗಳಿಂದ ಮುಕ್ತರಾಗುವಂತೆ ಮಾಡಲು ಪ್ರೇರೇಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಚಳುವಳಿಯನ್ನಾಗಿ ಮಾಡಲು ರಾಷ್ಟ್ರವ್ಯಾಪಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಅವರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿರುವ ಯುವ ವ್ಯವಹಾರಗಳು ಮತ್ತು ಕ್ರೀಡೆ ಸಚಿವಾಲಯದ ಕಾರ್ಯದರ್ಶಿ ಉಷಾ ಶರ್ಮಾ ಅವರು, ಈ ಅಭಿಯಾನದ ಮೂಲಕ ನಾಗರಿಕರು ತಮ್ಮ ಜೀವನದಲ್ಲಿ ನಿತ್ಯ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ನಡೆಸುವಂತೆ ಪ್ರೇರೇಪಿಸಲಾಗುತ್ತದೆ. ಇದಕ್ಕಾಗಿ ‘ಫಿಟ್ನೆಸ್ ಕಿ ಡೋಸ್- ಆಧಾ ಘಂಟಾ’ ಸಂಕಲ್ಪವನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ದೇಶಾದ್ಯಂತ 744 ಜಿಲ್ಲೆಗಳು ಮತ್ತು 30 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಉಪಕ್ರಮದ ಮೂಲಕ 7 ಕೋಟಿಗೂ ಅಧಿಕ ಯುವಕರು ಮತ್ತು ನಾಗರಿಕರು ಓಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮಗಳು ಅಕ್ಟೋಬರ್ 2 ರವರೆಗೆ ಪ್ರತಿ ವಾರ 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಗ್ರಾಮಗಳಲ್ಲಿ ನಡೆಯಲಿದೆ. ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ ಸ್ವೀಕಾರ, ರಾಷ್ಟ್ರಗೀತೆ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಗವಹಿಸುವಂತೆ ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ತಮ್ಮ ಗ್ರಾಮಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯ ಓಟಗಳನ್ನು ಆಯೋಜಿಸುವಂತೆ ಪ್ರೇರೇಪಿಸುವುದು ಸೇರಿವೆ. ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15 ರಿಂದ ಅಕ್ಟೋಬರ್ 2 ರವರೆಗೆ ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.