ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5.30 ಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಯಲಿರುವ ಕಡಲ ಭದ್ರತೆ ಹೆಚ್ಚಿಸುವ: ಅಂತಾರಾಷ್ಟ್ರೀಯ ಸಹಕಾರ ಕುರಿತ ಯು.ಎನ್.ಎಸ್.ಸಿಯ ಉನ್ನತ ಮಟ್ಟದ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಲಿದ್ದಾರೆ. 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇದರ ಅಧ್ಯಕ್ಷತೆ ವಹಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಹಾಗೂ ಹಲವು ದೇಶಗಳ ಮುಖ್ಯಸ್ಥರು, ಪ್ರಮುಖ ಪ್ರಾದೇಶಿಕ ಸಂಘಟನೆಗಳು, ವಿಶ್ವಸಂಸ್ಥೆಯ ಉನ್ನತ ಮಟ್ಟದ ಮಾಹಿತಿದಾರರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಡಲ ವಲಯದ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ಹಾಗೂ ಕಡಲ ಭಾಗದಲ್ಲಿ ಅಭದ್ರತೆಯನ್ನು ನಿವಾರಿಸುವ ಮತ್ತು ಸಹಕಾರವನ್ನು ಬಲಗೊಳಿಸುವ ಬಗ್ಗೆ ಮುಕ್ತ ಚರ್ಚೆಯನ್ನು ಕೇಂದ್ರೀಕರಿಸಲಾಗಿದೆ.
ಸಾಗರ ವಲಯದ ಭದ್ರತೆ ಮತ್ತು ಕಡಲ ಭಾಗದ ಅಪರಾಧ ನಿಯಂತ್ರಣ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚರ್ಚೆ ನಡೆಸಿದೆ ಮತ್ತು ವಿವಿಧ ಆಯಾಮಗಳ ಬಗ್ಗೆ ಈಗಾಗಲೇ ನಿರ್ಣಯಗಳನ್ನು ಅನುಮೋದಿಸಿದೆ. ಆದಾಗ್ಯೂ ಬಾಹ್ಯ ಕಾರ್ಯಸೂಚಿ ಮೂಲಕ ಸಾಗರ ವಲಯದ ಭದ್ರತೆ ಕುರಿತಂತೆ ಸಮಗ್ರವಾಗಿ ಉನ್ನತ ಮಟ್ಟದ ಮುಕ್ತ ಚರ್ಚೆ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಯಾವುದೇ ರಾಷ್ಟ್ರ ಏಕಾಂಗಿಯಾಗಿ ಸಾಗರ ವಲಯದ ಭದ್ರತೆಯನ್ನು ವೈವಿಧ್ಯಮಯ ಆಯಾಮಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ವಿಷಯವನ್ನು ಸಮಗ್ರವಾಗಿ ಮಹತ್ವದ ಸ್ವರೂಪದಲ್ಲಿ ಚರ್ಚಿಸಲಾಗುತ್ತಿದೆ. ಸಾಗರ ಕ್ಷೇತ್ರದ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಬೆದರಿಕೆಗಳು ಹಾಗೂ ಕಾನೂನುಬದ್ಧ ಸಾಗರ ಚಟುವಟಿಕೆಗಳನ್ನು ಬೆಂಬಲಿಸುವ ಜೊತೆಗೆ ಸಮಗ್ರ ಭದ್ರತೆಯ ದೃಷ್ಟಿಯನ್ನು ಈ ಸಭೆ ಹೊಂದಿದೆ.
ಸಿಂಧೂ ನದಿ ಕಣಿವೆಯ ನಾಗರೀಕತೆಯಿಂದ ಈವರೆಗೆ ಭಾರತದ ಇತಿಹಾಸದಲ್ಲಿ ಸಾಗರ ಪ್ರದೇಶ ಮಹತ್ವದ ಭಾಗವಾಗಿದೆ. ನಮ್ಮ ನಾಗರಿಕತೆಯು ನೈತಿಕತೆಯ ಪರಸ್ಪರ ಶಾಂತಿ ಮತ್ತು ಸಮೃದ್ಧತೆಯ ತಳಹದಿ ಮೇಲಿದೆ. ಈ ಹಿನ್ನೆಲೆಯಲ್ಲಿ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ಮೋದಿ ಅವರು 2015 ರಲ್ಲಿ ಸಾಗರ್ ದೃಷ್ಟಿಕೋನ ಮಂಡಿಸಿದ್ದು, ಈ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ ಎಂಬುದು ಇದರ ಸಂಕ್ಷಿಪ್ತ ರೂಪವಾಗಿದೆ. ಕಡಲು ಭಾಗವನ್ನು ಸುಸ್ಥಿರ ಕ್ರಮಗಳ ಮೂಲಕ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರ ದೃಷ್ಟಿಕೋನವನ್ನು ಇದು ಒಳಗೊಂಡಿದೆ ಮತ್ತು ಈ ಭಾಗದಲ್ಲಿ ಸುರಕ್ಷಿತ, ಸುಭದ್ರ ಮತ್ತು ಸ್ಥಿರ ಕಡಲು ವಲಯದ ಚೌಕಟ್ಟನ್ನು ಒದಗಿಸುತ್ತದೆ. 2019 ರಲ್ಲಿ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಈ ಉಪಕ್ರಮವನ್ನು ಭಾರತ – ಫೆಸಿಫಿಕ್ ಸಾಗರ [ಐ.ಪಿ.ಒ.ಪಿ] ಕ್ರಮಗಳ ಮೂಲಕ ಮತ್ತಷ್ಟು ವಿವರಿಸಲಾಗಿದ್ದು, ಇದು ಕಡಲಿನ ಪರಿಸರ, ಕಡಲಿನ ಸಂಪನ್ಮೂಲಗಳು, ಸಾಮರ್ಥ್ಯ ನಿರ್ಮಾಣ ಮತ್ತು ಸಂಪನ್ಮೂಲ ಹಂಚಿಕೆ, ವಿಪತ್ತು ಅಪಾಯ ತಗ್ಗಿಸುವ ಹಾಗೂ ನಿರ್ವಹಣೆ, ವಿಜ್ಞಾನ – ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಹಕಾರ, ವ್ಯಾಪಾರ ಸಂಪರ್ಕ ಮತ್ತು ಕಡಲ ಸಾರಿಗೆ ವ್ಯವಸ್ಥೆಯಂತಹ ಏಳು ಆಧಾರ ಸ್ಥಂಭಗಳನ್ನು ಇದು ಕೇಂದ್ರೀಕರಿಸಿದೆ.
Courtesy : pib.gov.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.