ನವದೆಹಲಿ: ದೇಶೀಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ‘ದೇಖೋ ಅಪ್ನಾ ದೇಶ್’ ಎಂಬ ಧ್ಯೇಯದೊಂದಿಗೆ ಐಆರ್ಸಿಟಿಸಿ ವಿಶೇಷ ಸೇವೆಯನ್ನು ಆರಂಭಿಸಿದೆ.
ಶ್ರೀ ರಾಮಾಯಣ ರೈಲು ಯಾತ್ರೆಗೆ ದೊರೆತ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ಐಆರ್ಸಿಟಿಸಿ ಮತ್ತೊಂದು ವಿಶೇಷ ಯೋಜನೆಗೆ ಮುಂದಾಗಿದೆ. ದೇಖೋ ಅಪ್ನಾ ದೇಶ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನ ಮೂಲಕ ಚಾರ್ ಧಾಮ್ ಯಾತ್ರೆಯನ್ನು ಆರಂಭಿಸಿದೆ. ಬದ್ರಿನಾಥ, ಜಗನ್ನಾಥ ಪುರಿ, ರಾಮೇಶ್ವರ ಮತ್ತು ದ್ವಾರಕಾಗಳಿಗೆ ಈ ಯಾತ್ರೆ ನಡೆಸಲು ಸಿದ್ಧವಾಗಿದೆ. ಆ ಮೂಲಕ ಸಾವಿರಾರು ಜನರ ಚಾರ್ಧಾಮ್ ಭೇಟಿಯ ಕನಸನ್ನು ನನಸಾಗಿಸಲು ಭಾರತೀಯ ರೈಲ್ವೆಯು ಈ ಯೋಜನೆ ಹಮ್ಮಿಕೊಂಡಿದೆ.
ಎಲ್ಲಾ ರೀತಿಯ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಈ ಪ್ರವಾಸಿ ರೈಲು ಯಾತ್ರೆ ನಡೆಯಲಿದೆ. ಇದು ಸೆಪ್ಟೆಂಬರ್ 18, 2021 ರಂದು ಆರಂಭವಾಗಲಿದೆ. 16 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ನವದೆಹಲಿಯ ಸಫ್ದರ್ಜಂಗ್ ನಿಲ್ದಾಣದಿಂದ ಈ ವಿಶೇಷ ರೈಲು ಯಾನ ಆರಂಭಗೊಳ್ಳಲಿದೆ. ಚೀನಾ ಗಡಿಯ ಮನ ಗ್ರಾಮ, ಬದ್ರಿನಾಥ, ಜೋಷಿಮಠ ನರಸಿಂಗ ದೇಗುಲ, ಋಷಿಕೇಶ, ಪುರಿಯ ಗೋಲ್ಡನ್ ಬೀಚ್, ಕೊನಾರ್ಕದ ಸೂರ್ಯ ದೇವಾಲಯ, ಚಂದ್ರಭಾಗ ಬೀಚ್, ಧನುಷ್ಕೋಡಿ, ರಾಮೇಶ್ವರ, ನಾಗೇಶ್ವರ ಜ್ಯೋತಿರ್ಲಿಂಗ, ಶಿವರಾಜ್ಪುರ, ದ್ವಾರಕಾಧೀಶ್, ಜಗನ್ನಾಥ ಪುರಿ ಯನ್ನು ಈ ಯಾತ್ರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಇನ್ನು ಯಾತ್ರೆ ನಡೆಸಲಿರುವ ಡಿಲಕ್ಸ್ ರೈಲಿನಲ್ಲಿ ಎರಡು ಉತ್ತಮ ರೆಸ್ಟೋರೆಂಟ್ಗಳು, ಆಧುನಿಕ ಅಡುಗೆ ಮನೆ, ಭೋಗಿಗಳಲ್ಲಿ ಶವರ್ ಕ್ಯುಬಿಕಲ್ಸ್, ಸಂವೇದಕ ಆಧಾರಿತ ವಾಶ್ರೂಂ ಸಿಸ್ಟಮ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಡಿಲಕ್ಸ್ ಹೊಟೇಲ್ಗಳಲ್ಲಿ ವಸತಿ ಸೌಕರ್ಯ ಇರಲಿದೆ. ಸಸ್ಯಹಾರಿ ಆಹಾರಗಳನ್ನು ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ಎಲ್ಲಾ ರೀತಿಯ ಕೊರೋನಾ ಮುಂಜಾಗ್ರತೆಗಳನ್ನು ಅನುಸರಿಸಿ ಈ ಯಾತ್ರೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಸ್ಯಾನಿಟೈಸರ್, ಫೇಸ್ ಮಾಸ್ಕ್, ಗ್ಲೌಸ್ ಮೊದಲಾದವುಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತದೆ. ಪ್ರತಿ ಸ್ಟೇಶನ್ನಲ್ಲೂ ರೈಲಿನ ನೈರ್ಮಲ್ಯಕ್ಕೆ ಒತ್ತು ನೀಡಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.