ನವದೆಹಲಿ : ಅಪಘಾತಗಳನ್ನು ತಗ್ಗಿಸಲು ರಸ್ತೆ ಅಭಿವೃದ್ಧಿಯ ಎಲ್ಲಾ ಹಂತಗಳಲ್ಲಿ ಸುರಕ್ಷತೆ ಕುರಿತ ಲೆಕ್ಕ ಪರಿಶೋಧನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ, ಎಂ.ಎಸ್.ಎಂ.ಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಪಘಾತಗಳಿಂದ ಸುರಕ್ಷತೆ ಕುರಿತ ವಿಚಾರ ಸಂಕಿರಣವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಮತ್ತು ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳ ದರ ಇರುವುದನ್ನು ನಾವು ನೋಡುತ್ತಿದ್ದೇವೆ. ಪ್ರತಿ ವರ್ಷ 1.5 ಲಕ್ಷ ಮಂದಿ ಅಪಘಾತಗಳಿಂದ ಮೃತಪಡುತ್ತಿದ್ದು, ಇವು ಕೋವಿಡ್ ಸಾವುಗಳಿಗಿಂತ ಅಧಿಕ ಎಂದರು.
ಬರುವ 2030 ರ ವೇಳೆಗೆ ಅಪಘಾತಗಳು ಮತ್ತು ಸಾವುಗಳನ್ನು ಶೂನ್ಯಕ್ಕೆ ಇಳಿಸುವ ಗುರಿ ಇದ್ದು, ಇದರಲ್ಲಿ ಶೇ 50 ಅಪಘಾತಗಳನ್ನು ತಗ್ಗಿಸಬೇಕಾಗಿದೆ. ಅಪಘಾತಗಳ ಸಾವಿನಲ್ಲಿ ದ್ವಿಚಕ್ರ ವಾಹನಗಳ ಪಾಲು ಶೇ 50 ರಷ್ಟಿದೆ. ಈಗಿನ ಸಮಯದಲ್ಲಿ ಮೋಟಾರು ವಾಹನ ಸುರಕ್ಷತೆ ಮತ್ತು ರಕ್ಷಣೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಜಾಗತಿಕ ವಾಹನ ತಾಂತ್ರಿಕ ನಿಪುಣತೆಯ ತಂತ್ರಜ್ಞಾನ ಸಾಕಷ್ಟು ಪ್ರಬುದ್ಧತೆಯಿಂದ ಕೂಡಿದೆ ಮತ್ತು ಅಪಘಾತ ಸಂದರ್ಭದಲ್ಲಿ ಸಾವುಗಳನ್ನು ತಗ್ಗಿಸುವ ತಾಂತ್ರಿಕತೆಯಲ್ಲಿ ಸುಧಾರಣೆ ತರಬೇಕಾಗಿದೆ ಎಂದ ಸಚಿವರು, ಚಾಲಕರ ತರಬೇತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಅತ್ಯಾಧುನಿಕ ತರಬೇತಿ ಸಂಸ್ಥೆಗಳು ಮತ್ತು ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದರು.
ಉತ್ತಮ ರಸ್ತೆಗಳನ್ನು ನಿರ್ಮಿಸುವುದು ಮತ್ತು ರಸ್ತೆ ಮೂಲ ಸೌಕರ್ಯ ಸುಧಾರಣೆ ಮಾಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ನಮ್ಮ ಗುರಿ ಸಾಧನೆ ಮತ್ತು ಜಾಗೃತಿ ಮೂಡಿಸಲು ಎಲ್ಲಾ ಪಾಲುದಾರರ ಸಹಕಾರ, ಸಂಪರ್ಕ ಮತ್ತು ಸಮನ್ವಯತೆ ಅಗತ್ಯವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.