ನವದೆಹಲಿ : ಕೊರೋನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಬಡವರು ಎದುರಿಸುತ್ತಿರುವ ಕಷ್ಟವನ್ನು ದೂರಮಾಡುವ ಸಲುವಾಗಿ ಭಾರತ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ಬಡವರ ಪರ ಉಪಕ್ರಮವನ್ನು ಘೋಷಿಸಿದೆ.
ಎಫ್ ಸಿಐ ಗೋದಾಮುಗಳಿಂದ 2021ರ ಮೇ 17ರ ವರೆಗೆ ಎಲ್ಲ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 31.80 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಎತ್ತುವಳಿ ಮಾಡಿವೆ. ಲಕ್ಷದ್ವೀಪ 2021ರ ಮೇ ಮತ್ತು ಜೂನ್ ತಿಂಗಳ ಸಂಪೂರ್ಣ ಹಂಚಿಕೆಯನ್ನು ಎತ್ತುವಳಿ ಮಾಡಿದೆ. 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂದರೆ ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲಪ್ರದೇಶ, ಗೋವಾ, ಛತ್ತೀಸ್ ಗಢ, ಹಿಮಾಚಲಪ್ರದೇಶ, ಕೇರಳ, ಲಡಾಖ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೆರಿ, ತಮಿಳುನಾಡು, ತೆಲಂಗಾಣ ಮತ್ತು ತ್ರಿಪುರ 2021ರ ಮೇ ತಿಂಗಳ ಶೇ.100ರಷ್ಟು ಹಂಚಿಕೆಯನ್ನು ಎತ್ತುವಳಿ ಮಾಡಿವೆ.
ಪಿಎಂಜಿಕೆಎವೈ ಅಡಿಯಲ್ಲಿ ಉಚಿತ ಆಹಾರಧಾನ್ಯ ವಿತರಣೆಗಾಗಿ ಕಾಲಮಿತಿಯಲ್ಲಿ ಆಹಾರ ಧಾನ್ಯ ಎತ್ತುವಳಿ ಮಾಡಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗೃತಿ ಮೂಡಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ ಎನ್ಎಫ್ಎಸ್ಎ ವ್ಯಾಪ್ತಿಯಲ್ಲಿ ಒಳಪಡುವ ಅಂದಾಜು 79.39 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳು ಅಂದರೆ 2021 ಮೇ-ಜೂನ್ ನಲ್ಲಿ ಹೆಚ್ಚುವರಿಯಾಗಿ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ. ಆಹಾರಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು. ಈ ಹಂಚಿಕೆ ಈಗಾಗಲೇ ಎನ್ಎಫ್ಎಸ್ಎ ಅಡಿಯಲ್ಲಿ ನೀಡಲಾಗುತ್ತಿರುವ ಆಹಾರಧಾನ್ಯಗಳ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುವುದು ಮತ್ತು ಈ ಯೋಜನೆಯಡಿ ವಿತರಣೆಗಾಗಿ 79.39 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಹಂಚಿಕೆ ಮಾಡಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ನೆರವಿನ ಭಾಗವಾಗಿ ಆಹಾರಧಾನ್ಯಗಳು, ಅಂತಾರಾಜ್ಯ ಸಾಗಾಣೆ ವೆಚ್ಚ ಇತ್ಯಾದಿ ಸೇರಿ ತಗುಲುವ ಒಟ್ಟು 26,000 ಕೋಟಿ ರೂ. ವೆಚ್ಚವನ್ನು ಭಾರತ ಸರ್ಕಾರ ತಾನೇ ಭರಿಸಲಿದೆ.
ಈ ಮೊದಲು ಭಾರತ ಸರ್ಕಾರ ಎನ್ಎಫ್ಎಸ್ಎ ಫಲಾನುಭವಿಗಳಿಗೆ ಪಿಎಂಜಿಕೆಎವೈ- I (2020ರ ಏಪ್ರಿಲ್-ಜೂನ್) ಮತ್ತು ಪಿಎಂಜಿಕೆಎವೈ- II(2020 ಜುಲೈ-ನವೆಂಬರ್) ಅವಧಿಯಲ್ಲಿ ಉಚಿತ ಆಹಾರಧಾನ್ಯಗಳ ವಿತರಣೆಗಾಗಿ 104 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 201 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸೇರಿ ಒಟ್ಟು 305 ಲಕ್ಷ ಟನ್ ಆಹಾರಧಾನ್ಯಗಳನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಫ್ ಸಿಐನಿಂದ ಯಶಸ್ವಿಯಾಗಿ ಪೂರೈಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.