News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ವಿಶ್ವ ದಾದಿಯರ ದಿನ

ನವದೆಹಲಿ: ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ದಾದಿಯರ ಪಾತ್ರ ಅನನ್ಯ. ಜಗತ್ತಿನಾದ್ಯಂತ ಸೋಂಕಿನ ವಿರುದ್ದದ ಹೋರಾಟದಲ್ಲಿ ದಾದಿಯರು ಸಲ್ಲಿಸಿರುವ ನಿಸ್ವಾರ್ಥ ಸೇವೆಗೆ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್  ಜನ್ಮದಿನವಾದ ಮೇ 12ರಂದು ಜಗತ್ತಿನಾದ್ಯಂತ ಇವರ ಸೇವೆಯನ್ನು  ಸ್ಮರಿಸಲಾಗುತ್ತದೆ. ದಾದಿಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರು ಸ್ಮರಿಸಿಕೊಳ್ಳುತ್ತಿದ್ದಾರೆ. ಗಣ್ಯರೂ ಶುಭ  ಹಾರೈಸಿದ್ದಾರೆ.

ಪ್ರಧಾನಿ ಮೋದಿ ಟ್ವಿಟ್‌ ಮಾಡಿ, “ಕೋವಿಡ್-19 ರ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ಪರಿಶ್ರಮಿ ನರ್ಸಿಂಗ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಅಂತರಾಷ್ಟ್ರೀಯ ದಾದಿಯರ ದಿನವಾಗಿದೆ. ಆರೋಗ್ಯವಂತ ಭಾರತದೆಡೆಗೆ ಅವರ ಕರ್ತವ್ಯ, ಸಹಾನುಭೂತಿ ಮತ್ತು ಬದ್ಧತೆಯು ಅನುಕರಣೀಯವಾಗಿದೆ” ಎಂದಿದ್ದಾರೆ.

ರೋಗಿ ಗುಣಮುಖವಾಗಲು ಕೇವಲ ಔಷಧಗಳಷ್ಟೇ ಸಾಲದು, ಜೊತೆಗೊಂದಿಷ್ಟು ಸಾಂತ್ವನ, ಧೈರ್ಯ, ಕಾಳಜಿಯ ಅಗತ್ಯವೂ ಇರುತ್ತದೆ. ರೋಗದಿಂದ ಗುಣಮುಖರಾಗಲು ವೈದ್ಯರ ಪಾತ್ರ ಪ್ರಮುಖ. ಅದೇ ರೀತಿ ಶುಶ್ರೂಷೆ ಮಾಡುವ ದಾದಿಯರ ಪಾತ್ರವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ.

ಯಾವುದೇ ಅಸಹನೆಯಿಲ್ಲದೆ, ಮಾನವೀಯ ಸೇವೆ ಸಲ್ಲಿಸುವ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಅವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಟ್ವೀಟ್ ಸಂದೇಶದಲ್ಲಿ, ದಾದಿಯರ ಸೇವಾ ಮನೋಭಾವ ಆರೋಗ್ಯ ಕ್ಷೇತ್ರದ ಆಧಾರವಾಗಿದೆ. ವಿಶೇಷವಾಗಿ ಈ ಸಾಂಕ್ರಾಮಿಕದ ಸವಾಲಿನ ಸಂದರ್ಭದಲ್ಲಿ ನಮ್ಮೆಲ್ಲರ ಕರ್ತವ್ಯನಿಷ್ಠೆ, ತ್ಯಾಗ, ಸೇವಾ ಭಾವಗಳಿಗೆ ಸಮಸ್ತೆ ನಾಗರಿಕರ ಪರವಾಗಿ ಕೃತಜ್ಞತಾ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ದಾದಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ದಾದಿಯರು ಜಗತ್ತಿನಲ್ಲಿ ಇನ್ನೂ ದೀರ್ಘ ಕಾಲ ಸಂಚರಿಸಬೇಕಾಗಿದೆ. ನಿಮ್ಮ ಬದ್ಧತೆ, ಸಮರ್ಥತೆ, ಪರಿಣಾಮಕಾರಿ ಆರೈಕೆ, ವೃತ್ತಿಪರತೆ, ಕೌಶಲ್ಯ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ದಾದಿಯರ ದಿನದ ಅಂಗವಾಗಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಇಂದು ದಾದಿಯರ ಜೊತೆ ಸಮಾಲೋಚನೆ ನಡೆಸಿದರು.

ಸೋಂಕು ನಿಯಂತ್ರಣದಲ್ಲಿ ದಾದಿಯರ ಪಾತ್ರ ಅತ್ಯಂತ ಪ್ರಮುಖವಾದದ್ದು. ನರ್ಸಿಂಗ್ ಸಹೋದರಿಯರು ಮತ್ತು ಸಹೋದರರಿಗೆ ಅಭಿನಂದನೆ.

ದಾದಿಯರು ನಮ್ಮ ಕುಟುಂಬದ ಸದಸ್ಯರಾಗಿದ್ದು, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ನಿಮ್ಮ ಸುರಕ್ಷತೆಯೂ ನಮ್ಮ ಜವಾಬ್ದಾರಿಯಾಗಿದೆ. ಆರೋಗ್ಯ ಸಿಬ್ಬಂದಿಯ ಹಿತರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಸಮಸ್ಯೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೋವಿಡ್ ಸೋಂಕಿತರಿಗೆ ರಾಜ್ಯದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಸೋಂಕಿನ ರೂಪಾಂತರದ ಗುಣಲಕ್ಷಣಗಳು, ಪರಿಣಾಮ ಮತ್ತಿತರ ವಿಚಾರಗಳ ಬಗ್ಗೆ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗಿದೆ. ದೇಶದ ಪ್ರತಿಷ್ಠಿತ ಸಂಸ್ಥೆಗಳೂ ಸಹ ಪ್ರತ್ಯೇಕ ಅಧ್ಯಯನದಲ್ಲಿ ತೊಡಗಿವೆ.  ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರಿಗೆ ಬ್ಲಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಕಣ್ಣು ಹಾಗೂ ಮೇಲ್ದವಡೆಗೆ ಆಪತ್ತು ತರುತ್ತಿರುವ ವಿಚಾರದ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು  ಸಚಿವ ಸುಧಾಕರ್ ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top