ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅತ್ಯಲ್ಪ ಅವಧಿಯಲ್ಲಿಯೇ ಗರಿಷ್ಠ ಸಂಖ್ಯೆಯ ಭಾರತೀಯರಿಗೆ ಲಸಿಕೆ ನೀಡುವುದನ್ನು ಖಾತ್ರಿಪಡಿಸಲು ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಕಠಿಣ ಶ್ರಮಪಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ವಿಶ್ವ ದಾಖಲೆಯ ವೇಗದಲ್ಲಿ ಜನರಿಗೆ ಲಸಿಕೆಯನ್ನು ಹಾಕುತ್ತಿದೆ ಮತ್ತು ಇನ್ನೂ ಹೆಚ್ಚಿನ ವೇಗದೊಂದಿಗೆ ಈ ಲಸಿಕೆ ನೀಡಿಕೆಯನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಭಾರತದ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರವನ್ನು ಮೊದಲಿನಿಂದ ಕೊನೆಯವರೆಗೆ ಅತ್ಯಂತ ವ್ಯವಸ್ಥಿತ ಮತ್ತು ಕಾರ್ಯತಾಂತ್ರಿಕ ವಿಧಾನದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಏಪ್ರಿಲ್ 2020ರಿಂದೀಚೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಆಡಳಿತದಲ್ಲಿ ಸಕ್ರಿಯವಾಗಿ ಸಾಮರ್ಥ್ಯವೃದ್ಧಿ ಮಾಡಲಾಗಿದೆ. ಲಸಿಕೆಯ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಿಸುವ ಮೂಲಕ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ಜಾರಿಗೊಳಿಸಲು ಸುಸ್ಥಿರ ರೀತಿಯಲ್ಲಿ ಅಗತ್ಯ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.
ಭಾರತದ ವಿಧಾನವನ್ನು ವೈಜ್ಞಾನಿಕ ಮತ್ತು ಸಾಂಕ್ರಾಮಿಕಗಳ ಆಧಾರಸ್ತಂಭಗಳ ಮೇಲೆ ರೂಪಿಸಲಾಗಿದ್ದು, ಅದಕ್ಕೆ ಜಾಗತಿಕ ಉತ್ತಮ ಪದ್ಧತಿಗಳು, ವಿಶ್ವ ಆರೋಗ್ಯ ಸಂಸ್ಥೆಯ ಎಸ್ಒಪಿ ಮಾತ್ರವಲ್ಲದೆ, ಭಾರತದ ಕೋವಿಡ್-19 ಲಸಿಕೆ ಆಡಳಿತ ಕುರಿತಾದ ರಾಷ್ಟ್ರೀಯ ತಜ್ಞರ ಸಮಿತಿ(ಎನ್ಇಜಿವಿಎಸಿ)ಯ ತಜ್ಞರ ನೆರವನ್ನು ಆಧರಿಸಿದೆ.
ಭಾರತ ಲಸಿಕೆ ಲಭ್ಯತೆ ಮತ್ತು ವ್ಯಾಪ್ತಿಯನ್ನು ಆಧರಿಸಿದ ಕ್ರಿಯಾಶೀಲ ಗುರುತಿಸುವಿಕೆ ಪದ್ಧತಿಯನ್ನು ಅನುಸರಿಸುತ್ತಿದ್ದು, ಸೂಕ್ಷ್ಮ ವರ್ಗದವರಿಗೆ ಆದ್ಯತೆ ನೀಡುವ ಜೊತೆಗೆ ಇದೀಗ ಇತರೆ ವಯೋಮಾನದವರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡುವ ನಿರ್ಧಾರವನ್ನು ಕೈಗೊಂಡಿದೆ. ಏಪ್ರಿಲ್ 30ರ ವೇಳೆಗೆ ಸೂಕ್ಷ್ಮ ವರ್ಗದ ಬಹುತೇಕ ಮಂದಿ ಲಸಿಕೆ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ.
ಒಂದನೇ ಹಂತದ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯತಂತ್ರ 2021ರ ಜನವರಿ 16ರಿಂದ ಆರಂಭವಾಯಿತು. ಅದರಲ್ಲಿ ನಮ್ಮ ಆರೋಗ್ಯ ರಕ್ಷಕರಾದ, ಆರೋಗ್ಯ ರಕ್ಷಣಾ ಕಾರ್ಯಕರ್ತರು (ಎಚ್ ಸಿಡಬ್ಲ್ಯೂ) ಮತ್ತು ಮುಂಚೂಣಿ ಕಾರ್ಯಕರ್ತರು(ಎಫ್ ಎಲ್ ಡಬ್ಲ್ಯೂ)ಗಳಿಗೆ ಆದ್ಯತೆ ನೀಡಲಾಗಿತ್ತು. ವ್ಯವಸ್ಥೆ ಮತ್ತು ಪ್ರಕ್ರಿಯೆ ಸ್ಥಿರಗೊಂಡ ಬಳಿಕ 2020ರ ಮಾರ್ಚ್ 1 ರಿಂದ ಎರಡನೇ ಹಂತವನ್ನು ಆರಂಭಿಸಲಾಯಿತು. ಅದರಲ್ಲಿ ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.80ರಷ್ಟು ಮಂದಿ 45 ವರ್ಷ ಮೇಲ್ಪಟ್ಟವರಾಗಿರುವುದರಿಂದ ಆ ಸೂಕ್ಷ್ಮ ವರ್ಗದವರ ರಕ್ಷಣೆಗೆ ಆದ್ಯತೆ ನೀಡಲಾಯಿತು. ಸಾಮರ್ಥ್ಯವೃದ್ಧಿಗೆ ಖಾಸಗಿ ವಲಯವನ್ನೂ ಸಹ ಬಳಸಿಕೊಳ್ಳಲಾಯಿತು.
ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಭಾರತ ಸರ್ಕಾರ, ಸಂಶೋಧನಾ ಸಂಸ್ಥೆಗಳಿಂದ ಹಿಡಿದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉತ್ಪಾದಕರು ಜಾಗತಿಕ ನಿಯಂತ್ರಕರು ಇತ್ಯಾದಿ ಸೇರಿದಂತೆ ಎಲ್ಲ ಪಾಲುದಾರರೊಂದಿಗೆ ಸಕ್ರಿಯವಾಗಿ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದ ಖಾಸಗಿ ವಲಯದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಕಾರ್ಯತಾಂತ್ರಿಕವಾಗಿ ಬಳಸಿಕೊಳ್ಳಲಾಗಿದೆ. ಆ ಮೂಲಕ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಸಂಶೋಧನೆ, ಪ್ರಯೋಗ ಮತ್ತು ಲಸಿಕೆ ಅಭಿವೃದ್ಧಿ, ಸಾರ್ವಜನಿಕ ಅನುದಾನ ಮತ್ತು ಭಾರತೀಯ ನಿಯಂತ್ರಣ ವ್ಯವಸ್ಥೆಯಲ್ಲಿ ದೂರಗಾಮಿ ಆಡಳಿತ ಸುಧಾರಣೆಗಳು ಸೇರಿದಂತೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಭಾರತ ಸರ್ಕಾರ, ಪ್ರತಿಯೊಬ್ಬ ಉತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಉತ್ಪಾದನಾ ಸ್ಥಳಕ್ಕೆ ಹಲವು ಅಂತರ ಸಚಿವರ ತಂಡಗಳನ್ನು ಕಳುಹಿಸುವುದು ಪ್ರತಿಯೊಬ್ಬರ ಅಗತ್ಯತೆಗಳನ್ನು ಅರ್ಥೈಸಿಕೊಳ್ಳುವುದು, ಅನುದಾನ, ಮುಂಗಡ ಪಾವತಿ, ಉತ್ಪಾದನೆಗೆ ಹೆಚ್ಚಿನ ಸ್ಥಳಾವಕಾಶ ನೀಡುವುದು ಸೇರಿದಂತೆ ಇತ್ಯಾದಿ ಹಲವು ಅಗತ್ಯ ಮತ್ತು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಲಸಿಕೆ ಉತ್ಪಾದನೆಯನ್ನು ತೀವ್ರಗೊಳಿಸಲಾಗಿದೆ.
ಇದರ ಪರಿಣಾಮ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಎರಡು ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ (ಸೆರಮ್ ಇನ್ಸ್ ಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್) ಹಾಗೂ ಮೂರನೇ ಲಸಿಕೆ(ಸ್ಪೂಟ್ನಿಕ್)ಗೆ ಸದ್ಯ ವಿದೇಶದಲ್ಲಿ ಉತ್ಪಾದನೆಯಾಗುತ್ತಿರುವ ಈ ಲಸಿಕೆಯನ್ನು ಭಾರತದಲ್ಲೂ ಸಹ ಉತ್ಪಾದಿಸಲಾಗುವುದು.
ಭಾರತ ಸರ್ಕಾರ ಆರಂಭದಿಂದಲೂ ಲಸಿಕೀಕರಣ ಅಭಿಯಾನದಲ್ಲಿ ಖಾಸಗಿ ವಲಯವನ್ನು ತೊಡಗಿಸಿಕೊಂಡಿದೆ. ಇದೀಗ ಸಾಮರ್ಥ್ಯಗಳು ಮತ್ತು ಪ್ರಕ್ರಿಯೆ ಸ್ಥಿರೀಕರಣಗೊಂಡಿರುವುದರಿಂದ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಅನುಭವವಾಗಿದೆ ಮತ್ತು ವಿಶ್ವಾಸ ಕ್ಷಿಪ್ರವಾಗಿ ಹೆಚ್ಚಾಗುತ್ತಿದೆ.
ಮೂರನೇ ಹಂತದ ರಾಷ್ಟ್ರೀಯ ಲಸಿಕಾ ಕಾರ್ಯತಂತ್ರದಲ್ಲಿ ಉದಾರವಾಗಿ ಲಸಿಕೆ ದರ ನಿಗದಿ ಮತ್ತು ಲಸಿಕೆ ನೀಡಿಕೆ ವ್ಯಾಪ್ತಿಯನ್ನು ವೃದ್ಧಿಸುವ ಗುರಿ ಹೊಂದಲಾಗಿದೆ. ಇದರಿಂದ ಲಸಿಕೆ ಉತ್ಪಾದನೆ ವೃದ್ಧಿಯಾಗುವ ಜೊತೆಗೆ ಅದರ ಲಭ್ಯತೆ ಹೆಚ್ಚಾಗಲಿದೆ. ಲಸಿಕೆ ಉತ್ಪಾದಕರಿಗೆ ಕ್ಷಿಪ್ರವಾಗಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ಸಿಗಲಿದೆ. ಜೊತೆಗೆ ಹೊಸದಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲಸಿಕೆ ಉತ್ಪಾದಕರನ್ನು ಆಕರ್ಷಿಸಲು ಸಾಧ್ಯವಾಗಲಿದೆ. ಇದರಿಂದಾಗಿ ಲಸಿಕೆ ಬೆಲೆ ನಿಗದಿ, ಖರೀದಿ, ಅರ್ಹತೆ ಮತ್ತು ಆಡಳಿತ ಮುಕ್ತ ಹಾಗೂ ಸರಳೀಕರಣಗೊಳ್ಳಲಿದ್ದು, ಎಲ್ಲಾ ಭಾಗೀದಾರರು ಉದಾರವಾಗಿ ಸ್ಥಳೀಯ ಅಗತ್ಯತೆಗಳು ಮತ್ತು ಕ್ರಿಯೆಗೆ ಅನುಗುಣವಾಗಿ ನಡೆದುಕೊಳ್ಳಲಿದ್ದಾರೆ.
2021ರ ಮೇ 1 ರಿಂದ ಜಾರಿಗೆ ಬರಲಿರುವ ಉದಾರವಾದ ಮತ್ತು ವೇಗದ ಮೂರನೇ ಹಂತದ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಮುಖಾಂಶಗಳು ಈ ಕೆಳಗಿನಂತಿವೆ:
💠 ಲಸಿಕಾ ಉತ್ಪಾದಕರು ಕೇಂದ್ರೀಯ ಔಷಧ ಪ್ರಯೋಗಾಲಯ(ಸಿಡಿಎಲ್) ಬಿಡುಗಡೆ ಮಾಡಲಾದ ತಮ್ಮ ತಿಂಗಳ ಉತ್ಪಾದನೆಯ ಶೇ.50ರಷ್ಟು ಡೋಸ್ ಗಳನ್ನು ಭಾರತ ಸರ್ಕಾರಕ್ಕೆ ಪೂರೈಸಬೇಕು ಮತ್ತು ಉಳಿದ ಶೇ.50ರಷ್ಟು ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಲು ಸ್ವತಂತ್ರರು (ಇದನ್ನು ಮುಂದೆ ಭಾರತ ಸರ್ಕಾರದ ಮುಖಾಂತರವಲ್ಲದ ಎಂದು ಉಲ್ಲೇಖಿಸಲಾಗುವುದು)
💠 ಲಸಿಕೆ ಉತ್ಪಾದಕರು 2021ರ ಮೇ 1ಕ್ಕೂ ಮುನ್ನ ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗಳಿಗೆ ಪೂರೈಕೆ ಮಾಡಲಿರುವ ಶೇ.50ರಷ್ಟು ಡೋಸ್ ಗಳ ಬೆಲೆಯನ್ನು ಪಾರದರ್ಶಕವಾಗಿ ಮುಂಚಿತವಾಗಿಯೇ ಘೋಷಿಸಬೇಕು. ಈ ಬೆಲೆಗಳನ್ನು ಆಧರಿಸಿ ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇತ್ಯಾದಿ ಉತ್ಪಾದಕರಿಂದ ಲಸಿಕೆ ಡೋಸ್ ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಖಾಸಗಿ ಆಸ್ಪತ್ರೆಗಳು ಭಾರತ ಸರ್ಕಾರದ ಮಾರ್ಗ ಹೊರತುಪಡಿಸಿ, ಶೇ.50ರಷ್ಟು ಪೂರೈಕೆಯಲ್ಲಿ ವಿಶೇಷವಾಗಿ ಕೋವಿಡ್-19 ಲಸಿಕೆಯನ್ನು ಖರೀದಿಸಬಹುದು. ಖಾಸಗಿ ಲಸಿಕೆ ಪೂರೈಕೆದಾರರು ಸ್ವಯಂ ಲಸಿಕೆ ಬೆಲೆಯನ್ನು ಘೋಷಿಸಬೇಕು. ಈ ಮಾರ್ಗದ ಮೂಲಕ ಅರ್ಹತೆಗೆ ಎಲ್ಲ ವಯಸ್ಕರಿಗೂ ಲಸಿಕೆಗೆ ತೆರೆಯಲಾಗುವುದು ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹರು.
💠 ಲಸಿಕೆ ನೀಡಿಕೆ ಈ ಮೊದಲೇ ವ್ಯಾಖ್ಯಾನಿಸಿರುವಂತೆ ಆರೋಗ್ಯ ರಕ್ಷಣಾ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ), ಮುಂಚೂಣಿ ಕಾರ್ಯಕರ್ತರು(ಎಫ್ ಎಲ್ ಡಬ್ಲ್ಯೂ) ಮತ್ತು 45 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಜನಸಂಖ್ಯೆಗೆ ಉಚಿತ ಲಸಿಕೆ ನೀಡುವುದು ಭಾರತ ಸರ್ಕಾರದ ಲಸಿಕೆ ಕೇಂದ್ರಗಳಲ್ಲಿ ಮುಂದುವರಿಯಲಿದೆ.
💠 ಎಲ್ಲ ಲಸಿಕೀಕರಣ ಪ್ರಕ್ರಿಯೆ(ಭಾರತ ಸರ್ಕಾರದ ಮೂಲಕ ಮತ್ತು ಭಾರತ ಸರ್ಕಾರವನ್ನು ಹೊರತುಪಡಿಸಿದಂತೆ) ರಾಷ್ಟ್ರೀಯ ಲಸಿಕೆ ನೀಡಿಕೆ ಪ್ರಕ್ರಿಯೆಯ ಭಾಗವಾಗಿರಲಿದೆ ಮತ್ತು ಕೋವಿನ್ ವೇದಿಕೆಯಲ್ಲಿ ಮಾಹಿತಿ ಒದಗಿಸುವುದು, ಎಇಎಫ್ಐ ವರದಿ ಸಂಯೋಜನೆ ಮತ್ತು ಇತರೆ ಎಲ್ಲಾ ನಿರ್ದಿಷ್ಟ ನಿಯಮ ಮತ್ತು ಶಿಷ್ಟಾಚಾರಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಪ್ರತಿ ಲಸಿಕೆಯ ಬೆಲೆ ಮತ್ತು ಲಭ್ಯವಿರುವ ಲಸಿಕೆ ಸಂಗ್ರಹದ ಬಗ್ಗೆ ಕಾಲಕಾಲಕ್ಕೆ ನೈಜ ಮಾಹಿತಿಯನ್ನು ಒದಗಿಸಬೇಕು.
💠 ಭಾರತ ಸರ್ಕಾರಕ್ಕೆ ಶೇ.50ರಷ್ಟು ಲಸಿಕೆ ಪೂರೈಕೆ ಮತ್ತು ಭಾರತ ಸರ್ಕಾರ ಹೊರತುಪಡಿಸಿ ಇತರೆಯವರಿಗೆ ಶೇ.50ರಷ್ಟು ಲಸಿಕೆ ಪೂರೈಕೆ ನಿಯಮ ದೇಶಾದ್ಯಂತ ಎಲ್ಲಾ ಲಸಿಕಾ ಉತ್ಪಾದಕರಿಗೆ ಏಕರೂಪವಾಗಿ ಅನ್ವಯವಾಗಲಿದೆ. ಆದರೆ ಭಾರತ ಸರ್ಕಾರ ಬಳಕೆಗೆ ಸಿದ್ಧವಾಗಿರುವ ಆಮದು ಮಾಡಿಕೊಂಡ ಲಸಿಕೆಯನ್ನು ಭಾರತ ಸರ್ಕಾರದ ಮಾರ್ಗದ ಹೊರತುಪಡಿಸಿ ಇತರೆ ಬಳಕೆಗೆ ಅವಕಾಶವಿದೆ.
💠 ಭಾರತ ಸರ್ಕಾರ ತನ್ನ ಪಾಲಿನಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಸೋಂಕಿನ ತೀವ್ರತೆ (ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ) ಮತ್ತು ಸಾಧನೆ(ಲಸಿಕ ಆಡಳಿತದ ವೇಗ) ಆಧರಿಸಿ ಲಸಿಕೆಯನ್ನು ಹಂಚಿಕೆ ಮಾಡಲಿದೆ. ನಷ್ಟವಾಗುವ ಲಸಿಕೆಗಳನ್ನೂ ಸಹ ಮಾನದಂಡಕ್ಕೆ ಪರಿಗಣಿಸಲಾಗುವುದು ಮತ್ತು ಅದು ಮಾನದಂಡಕ್ಕೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಮೇಲಿನ ಮಾನದಂಡದೊಂದಿಗೆ ರಾಜ್ಯವಾರು ಕೋಟಾ ನಿಗದಿಪಡಿಸಲಾಗುವುದು ಮತ್ತು ರಾಜ್ಯಗಳಿಗೆ ಮುಂಚಿತವಾಗಿಯೇ ಅದರ ಮಾಹಿತಿ ನೀಡಲಾಗುವುದು.
💠 ಎಲ್ಲಾ ಹಾಲಿ ಆದ್ಯತಾ ಗುಂಪುಗಳು ಅಂದರೆ ಎಚ್ ಸಿಡಬ್ಲ್ಯೂ, ಎಫ್ಎಲ್ ಡಬ್ಲ್ಯೂ ಮತ್ತು 45 ವರ್ಷ ಮೇಲ್ಪಟ್ಟ ಜನಸಂಖ್ಯೆ ಯಾರು ಎರಡನೇ ಡೋಸ್ ಪಡೆಯುವುದು ಬಾಕಿ ಇದೆಯೋ ಅಂತಹವರಿಗೆ ಆದ್ಯತೆ ನೀಡಲಾಗುವುದು. ಅದಕ್ಕೆ ನಿರ್ದಿಷ್ಟ ಮತ್ತು ಕಾರ್ಯತಾಂತ್ರಿಕ ವಿಧಾನವನ್ನು ಎಲ್ಲಾ ಸಂಬಂಧಿಸಿದವರಿಗೆ ತಿಳಿಸಲಾಗುವುದು.
💠 ಈ ನೀತಿ 2021ರ ಮೇ 1 ರಿಂದ ಜಾರಿಗೆ ಬರಲಿದೆ ಹಾಗೂ ಅದನ್ನು ಕಾಲ ಕಾಲಕ್ಕೆ ಪುನರ್ ಪರಿಶೀಲನೆ ಮಾಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.