ನವದೆಹಲಿ : ನೀತಿ ಆಯೋಗ ಜನವರಿ 20 ರಂದು ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಇಂಡಿಯಾ ಇನ್ನೋವೇಷನ್ ಸೂಚ್ಯಂಕ 2020 ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಈ ಸೂಚ್ಯಂಕವನ್ನು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಸಮಕ್ಷಮದಲ್ಲಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ಸೂಚ್ಯಂಕವನ್ನು ಬಿಡುಗಡೆ ಮಾಡಲಿದ್ದಾರೆ.
ಎರಡನೇ ಆವೃತ್ತಿಯ ಈ ಸೂಚ್ಯಂಕವನ್ನು ಇದೀಗ ಬಿಡುಗಡೆ ಮಾಡಲಾಗುತ್ತಿದ್ದು, 2018ರ ಅಕ್ಟೋಬರ್ನಲ್ಲಿ ಮೊದಲ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಇದು ನಾವಿನ್ಯತೆ ಆಧಾರಿತ ಆರ್ಥಿಕತೆಯತ್ತ ದೇಶವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರದ ನಿರಂತರ ಬದ್ಧತೆಯನ್ನು ತೋರುತ್ತದೆ.
ಇಂಡಿಯಾ ಇನೋವೇಷನ್ ಸೂಚ್ಯಂಕ 2020ಯಲ್ಲಿ ರಾಜ್ಯಗಳು ಆವಿಷ್ಕಾರಗಳಿಗೆ ಬೆಂಬಲ ನೀಡಿರುವುದರ ಪ್ರಗತಿ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕವನ್ನು ನಿಗದಿಪಡಿಸಲಾಗುವುದು. ಅದರಲ್ಲಿ ರಾಜ್ಯಗಳ ಸಾಮರ್ಥ್ಯವನ್ನು ಹಾಗೂ ದೌರ್ಬಲ್ಯಗಳನ್ನು ಪ್ರಮುಖವಾಗಿ ಉಲ್ಲೇಖಿಸಿ ಆವಿಷ್ಕಾರಿ ನೀತಿಗಳ ಸುಧಾರಣೆಗೆ ಸಬಲೀಕರಣಗೊಳಿಸಲಾಗುವುದು.
ಈ ಶ್ರೇಯಾಂಕ ಪದ್ಧತಿಯನ್ನು ಆವಿಷ್ಕಾರದಲ್ಲಿ ರಾಷ್ಟ್ರೀಯ ನಾಯಕರಿಂದ ಕಲಿಯುವ ಪಾಠಗಳನ್ನು ಆಧರಿಸಿ ರಾಜ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಆರೋಗ್ಯಕರ ಸ್ಪರ್ಧೆ ಉಂಟಾಗುತ್ತದೆ ಎಂಬ ಭರವಸೆ ಇದೆ. ಜೊತೆಗೆ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ ಬಲವರ್ಧನೆಗೊಳ್ಳಲಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 17 ಪ್ರಮುಖ ರಾಜ್ಯಗಳನ್ನಾಗಿ ಮತ್ತು 10 ಈಶಾನ್ಯ ಹಾಗೂ ಗುಡ್ಡಗಾಡು ರಾಜ್ಯಗಳಾಗಿ ಮತ್ತು 9 ನಗರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿದ್ದು, ಇದು ಅವುಗಳ ಸಾಧನೆಯನ್ನು ಪರಿಣಾಮಕಾರಿಯಾಗಿ ಹೋಲಿಕೆ ಮಾಡಲು ನೆರವಾಗಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎರಡು ವಿಸ್ತೃತ ವಿಭಾಗಗಳಲ್ಲಿ ಶ್ರೇಯಾಂಕ ನಿಗದಿ ಪಡಿಸಲಾಗುವುದು. ಒಂದು ಫಲಿತಾಂಶ ಹಾಗೂ ಇನ್ನೊಂದು ಆಡಳಿತ. ಒಟ್ಟಾರೆ ಇಂಡಿಯಾ ಇನೋವೇಷನ್ ಸೂಚ್ಯಂಕ 2020 ನೀತಿಯಲ್ಲಿ 36 ಮಾನದಂಡಗಳು ಒಳಗೊಂಡಿದ್ದು, ಇದರಲ್ಲಿ ಹಾರ್ಡ್ ಡಾಟಾ (32 ಮಾನದಂಡಗಳು) ಮತ್ತು ನಾಲ್ಕು ಸಂಯೋಜಿತ ಸೂಚಕಗಳು (ಕಾಂಪೋಸಿಟ್ ಇಂಡಿಕೇಟರ್ಸ್) ಒಳಗೊಂಡಿವೆ.
ಇಂಡಿಯಾ ಇನೋವೇಷನ್ 2020 ಅಡಿಯಲ್ಲಿ ಹಿಂದಿನ ವರ್ಷದ ಪದ್ಧತಿಯಲ್ಲಿ ಭಾರತೀಯ ಅನ್ವೇಷಣಾ ಪೂರಕ ವ್ಯವಸ್ಥೆಗೆ ಸಮಗ್ರ ಆಯಾಮ ನೀಡುವ ಹೆಚ್ಚಿನ ಮಾಪನಗಳು ಮತ್ತು ಆವಿಷ್ಕಾರವನ್ನು ಅಳೆಯಲು ಜಾಗತಿಕವಾಗಿ ಪರಿಗಣಿಸಲ್ಪಟ್ಟಿರುವ ಮಾನದಂಡಗಳನ್ನು ಸೇರಿಸಿ ನೀತಿಯನ್ನು ಪರಿಷ್ಕರಿಸಲಾಗಿದೆ.(ಸಂಶೋಧನೆ ಮತ್ತು ಅಭಿವೃದ್ಧಿಗೆ ಒಟ್ಟು ಜಿಡಿಪಿಯ ಶೇಕಡಾವಾರು ಖರ್ಚು ಸೇರಿ) ಜೊತೆಗೆ ಭಾರತೀಯ ಆರ್ಥಿಕತೆಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಮಾನದಂಡಗಳನ್ನೂ ಸಹ ಉಳಿಸಿಕೊಳ್ಳಲಾಗಿದೆ.
ಈ ಸೂಚ್ಯಂಕ ಸಾಗುತ್ತಿರುವ ಹಾದಿಯನ್ನು ಸೂಚಿಸುವ ಜೊತೆಗೆ ದೇಶದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆವಿಷ್ಕಾರ ಆಂದೋಲನಕ್ಕೆ ಕಾರಣವಾಗಿರುವ ನಾನಾ ಅಂಶಗಳ ಕುರಿತು ವಿಸ್ತೃತವಾದ ವಿಶ್ಲೇಷಣೆಯನ್ನು ಒದಗಿಸಲಿದೆ. ಈ ವಿಶ್ಲೇಷಣೆಗಳಿಂದ ನೀತಿ ನಿರೂಪಕರು ನಾವಿನ್ಯತಾ ಪ್ರತಿರೋಧಕಗಳನ್ನು ಗುರುತಿಸಲು ನೆರವಾಗಲಿದೆ ಮತ್ತು ರಾಷ್ಟ್ರೀಯ ಮತ್ತು ಉಪರಾಷ್ಟ್ರೀಯ ಮಟ್ಟದಲ್ಲಿ ಆವಿಷ್ಕಾರಗಳನ್ನು ಮಾಡಲು ಸಹಾಯಕವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.