ʼನಾನು ನಿಮ್ಮ ಉಪ್ಪು ತಿಂದಿದ್ದೇನೆ ಒಡೆಯ, ಜೀವನ ಪೂರ್ತಿ ನಿಮಗೆ ಋಣಿಯಾಗಿರುತ್ತೇನೆʼ ಎಂಬ ಡೈಲಾಗ್ ಕೆಲವೊಂದು ಸಿನಿಮಾಗಳಲ್ಲಿ ನಾವು ನೋಡಿಯೇ ಇರುತ್ತೇವೆ. ವಾಸ್ತವವಾಗಿ, ಭಾರತೀಯ ರಾಜಕಾರಣವೂ ಕೂಡ ಒಡೆಯ ಮತ್ತು ಗುಲಾಮನ ರೀತಿಯನ್ನು ಅನುಸರಿಸುತ್ತಿರುವಂತೆ ತೋರುತ್ತಿದೆ. ಹೆಚ್ಚಿನ ಪಕ್ಷಗಳ ಜನಪ್ರಿಯ, ಅನುಭವಿ ಮತ್ತು ಹಿರಿಯ ನಾಯಕರು ಕುಟುಂಬ ರಾಜಕಾರಣದ ಕಪಿಮುಷ್ಟಿಯಲ್ಲಿ ಒದ್ದಾಡುತ್ತಿದ್ದಾರೆ ಅಥವಾ ನಿರ್ದಿಷ್ಟ ರಾಜವಂಶಕ್ಕೆ ಶರಣಾಗತರಾಗುತ್ತಿದ್ದಾರೆ. ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದಾರೆ. ಚಿಕ್ಕವರಾಗಲಿ, ವಯಸ್ಸಾದವರಾಗಲಿ, ಅನುಭವಿ ಅಥವಾ ಅನಾನುಭವಿಗಳಾಗಲಿ, ಹೆಚ್ಚಿನ ನಾಯಕರು ಸ್ಥಾಪಿತ ರಾಜಕೀಯ ಕುಟುಂಬದ ನಿಷ್ಠಾವಂತರಾಗಲು ಹಂಬಲಿಸುತ್ತಾರೆ. ನಿಷ್ಠೆಯನ್ನು ಸಾಬೀತುಪಡಿಸುವ ಯಾವುದೇ ಅವಕಾಶಗಳನ್ನು ಅವರುಗಳು ಕೈಚೆಲ್ಲುವುದಿಲ್ಲ. ಜನರಿಂದ, ಜನರಿಗಾಗಿ ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಕನಸನ್ನು ನಮ್ಮ ಮಹಾಪುರುಷರು ಕಂಡಿದ್ದರು. ಆದರೆ ಪ್ರಜಾಪ್ರಭುತ್ವಕ್ಕಿಂತ ರಾಜ ಪ್ರಭುತ್ವವೇ ಕೆಲ ಪಕ್ಷಗಳಲ್ಲಿ ತಾಂಡವವಾಡುತ್ತಿದೆ. ಅರ್ಹತೆ, ಅನುಭವ ಇಲ್ಲದಿದ್ದವರನ್ನು ಯುವರಾಜ ಎಂದು ಬಿಂಬಿಸುತ್ತಾರೆ. ಮುಂದಿನ ನಮ್ಮ ನಾಯಕ ಇವನೇ ಎಂದು ಘೋಷಿಸಿ ಬಿಡುತ್ತಾರೆ. ಕೇವಲ ಕುಟುಂಬದ ಹಿನ್ನೆಲೆ ಮಾತ್ರ ಆತನ ಮಾನದಂಡ ವಾಗಿರುತ್ತದೆ. ಅನುಭವ, ಹೋರಾಟ, ಪ್ರಾಮಾಣಿಕತೆ, ಅರ್ಹತೆ, ನೈತಿಕತೆ, ಭದ್ರತೆಯಂತಹ ಮೌಲ್ಯಗಳನ್ನು ಕಡೆಗಣಿಸುವ ಮೂಲಕ ಅನರ್ಹತೆ, ಅನೈತಿಕತೆಗಳನ್ನು ಕುಟುಂಬ ರಾಜಕಾರಣ ಪ್ರೋತ್ಸಾಹಿಸುತ್ತಿದೆ.
ಕುಟುಂಬವಾದದ ವಿಷಬೀಜವನ್ನು ಪೋಷಿಸಲು ಉದಯೋನ್ಮುಖ ರಾಜಕೀಯ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ. ಅಧಿಕಾರಕ್ಕಾಗಿ ಸೈದ್ಧಾಂತಿಕ ಬದ್ಧತೆಯನ್ನು ಬಲಿಕೊಡಲಾಗುತ್ತಿದೆ. ಬಾಯಲ್ಲಿ ಬೆಳ್ಳಿಯ ಚಮಚ ಇಟ್ಟುಕೊಂಡು ಜನಿಸಿದ ಯುವಕರಿಗೆ ಅಧಿಕಾರವನ್ನು ಸಲೀಸಾಗಿ ಬಿಟ್ಟುಕೊಡುವುದು ಪ್ರಜಾಪ್ರಭುತ್ವ ವಿರೋಧಿ ಅಭ್ಯಾಸವಾಗಿದೆ. ದೊಡ್ಡ ಸ್ಥಾನಕ್ಕೆ ಏರಲು ಒಬ್ಬ ಮನುಷ್ಯ ಕಷ್ಟಪಟ್ಟು ದುಡಿಯಬೇಕು, ಹಲವು ಸಂಘರ್ಷಗಳನ್ನು ಮಾಡಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಹಂತಹಂತವಾಗಿ ಅನುಭವಗಳನ್ನು ಗಳಿಸುತ್ತಾ ಮುನ್ನಡೆಯಬೇಕು. ಆದರೆ ಕುಟುಂಬ ವಾದವನ್ನು ನೆಚ್ಚಿಕೊಂಡಿರುವ ಪಕ್ಷಗಳು, ಯಾವುದೇ ಅನುಭವ ಇಲ್ಲದ ವ್ಯಕ್ತಿಯನ್ನು ಪಕ್ಷದ ಮುಖ್ಯಸ್ಥ ಎಂದು ಘೋಷಿಸುವುದು ಉತ್ತಮ ಮಾರ್ಗವಲ್ಲ.
ಕುಟುಂಬವಾದವನ್ನು ನೆಚ್ಚಿಕೊಂಡಿರುವ ದೇಶದ ಅತಿ ಹಿರಿಯ ಪಕ್ಷ ಕಾಂಗ್ರೆಸ್ ಈಗ ದಿವಾಳಿಯಾಗುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸೋನಿಯಾ ಗಾಂಧಿ ಬಿಟ್ಟರೆ ರಾಹುಲ್ ಗಾಂಧಿ, ರಾಹುಲ್ ಗಾಂಧಿ ಬಿಟ್ಟರೆ ಸೋನಿಯಾ ಗಾಂಧಿ ಮಾತ್ರವೇ ಆ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ಏರಲು ಸಾಧ್ಯ ಎಂಬ ಪರಿಸ್ಥಿತಿ ಈಗ ಇದೆ. ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಂಬುದು ಸಂಪೂರ್ಣ ಸತ್ತುಹೋಗಿದೆ. ಅದರ ದೊಡ್ಡ ದೊಡ್ಡ ಅನುಭವಿ ನಾಯಕರು ಕೂಡ ಗಾಂಧಿ ಪರಿವಾರದ ವಿರುದ್ಧ ಮಾತನಾಡಲು ಹಿಂಜರಿಯುತ್ತಾರೆ. ಗಾಂಧಿ ಪರಿವಾರವನ್ನು ಓಲೈಸುವುದರಲ್ಲೇ ಅವರುಗಳ ಇಡೀ ಜೀವನ ಕಳೆದು ಹೋಗಿದೆ. ಇಂತಹ ಪಕ್ಷ ಅತಿದೊಡ್ಡ ಪ್ರಜಾಪ್ರಭುತ್ವದ ನಾಗರಿಕರಿಗೆ ನೀಡುತ್ತಿರುವ ಸಂದೇಶವಾದರೂ ಏನು? ಕೇವಲ ಕುಟುಂಬದ ಹಿನ್ನೆಲೆ ಇದ್ದರಷ್ಟೇ ಪಕ್ಷದ ನೇತೃತ್ವ ವಹಿಸಬಹುದು ಎಂಬುದೇ!. ಪಕ್ಷದಲ್ಲಿ ಕಾರ್ಯಕರ್ತನಾಗಿ ದುಡಿದ ವ್ಯಕ್ತಿ ಎಂದಿಗೂ ಪಕ್ಷದ ಮುಖಂಡನಾಗಲಾರ ಎಂಬುದೇ? ಇದು ಅತಿ ಹಿರಿಯ ಪಕ್ಷಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವ ವಿಷಯವಾಗಿದೆ.
ಎಲ್ಲ ರಾಜಕೀಯ ಪಕ್ಷಗಳು ಸೈದಾಂತಿಕ ನಿಷ್ಠೆಯನ್ನು ಬೆಂಬಲಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಕುಟುಂಬವಾದದಂತಹ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ವಿರೋಧಿಸಬೇಕು. ಕುಟುಂಬವಾದವು ನಿರಂಕುಶಾಧಿಕಾರ, ಸರ್ವಾಧಿಕಾರ ಮುಂತಾದ ಅಪಾಯಕಾರಿ ಮನಸ್ಥಿತಿಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಭಾವಿ ಕುಟುಂಬದ ಹಿನ್ನೆಲೆಯಿಂದ ಬಂದ ವ್ಯಕ್ತಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಕೆಟ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ. ಕುಟುಂಬವಾದದ, ಸ್ವಜನಪಕ್ಷಪಾತದ ಮೂಲಕ ಹೊರಹೊಮ್ಮಿದ ನಾಯಕ ಸಮಾಜದ ಹಿತಾಸಕ್ತಿಗಳನ್ನು ಕಡೆಗಣಿಸುತ್ತಾನೆ. ತನ್ನ ನಿರ್ಧಾರಗಳನ್ನು ಯಾರೂ ಪ್ರಶ್ನಿಸಬಾರದು ಎಂದು ಬಯಸುತ್ತಾನೆ. ಹೀಗಾದಾಗ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಮತ್ತು ದೇಶದ ಪ್ರಜಾಪ್ರಭುತ್ವ ನಲುಗಿ ಹೋಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಯುವಕರು ಹಿಮ್ಮುಖರಾಗಲು ಆ ಪಕ್ಷದ ಕುಟುಂಬವಾದವೇ ಕಾರಣ ಎಂಬುದು ಹಲವರ ಅಭಿಪ್ರಾಯ. ಆದರೆ ಆ ಪಕ್ಷದೊಳಗಿನ ನಾಯಕರು ಕುಟುಂಬ ವಾದವನ್ನು ಪ್ರಶ್ನಿಸುವ ಧೈರ್ಯವನ್ನು ಮಾಡುತ್ತಿಲ್ಲ. ಮಾಡಿದವರು ಪಕ್ಷದ ಶಿಕ್ಷೆಗೆ ಗುರಿಯಾಗಿದ್ದಾರೆ. ತನ್ನ ಮನಸ್ಥಿತಿಯ ಪರಿಣಾಮದಿಂದಲೇ ಕಾಂಗ್ರೆಸ್ ಪಕ್ಷ ಇಂದು ಜನರ ಮನಸ್ಸಿನಿಂದ ದೂರವಾಗುತ್ತಿದೆ.
ಪ್ರಜಾಪ್ರಭುತ್ವ ಮತ್ತು ಯುವ ಭಾರತದ ಪ್ರಗತಿಗೆ ಮತ್ತು ಸಮೃದ್ಧಿಗಾಗಿ ಕುಟುಂಬ ರಾಜಕಾರಣವನ್ನು ಬುಡದಿಂದ ಕಿತ್ತೆಸೆಯುವ ಅಗತ್ಯವಿದೆ. ಭಾರತದ ಒಳಿತಿಗಾಗಿ ದಕ್ಷತೆ, ಪ್ರಾಮಾಣಿಕತೆ, ಅನುಭವಗಳ ಆಧಾರದ ಮೇಲೆ ನಾಯಕನನ್ನು ಆಯ್ಕೆಮಾಡುವ ಅನಿವಾರ್ಯತೆ ಇದೆ.
✍️ ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.