ವಂದೇ ಮಾತರಂ – ವಂದೇ ಮಾತರಂ ಎಂಬ ಕೂಗು ಕಿವಿದೆರೆಗಳನ್ನು ತಲುಪುತ್ತಿದ್ದಂತೆಯೇ ಎಲ್ಲರ ನರನರಗಳಲ್ಲಿ ದೇಶಪ್ರೇಮದ ವಿದ್ಯುತ್ ಸಂಚಾರವಾಗುತ್ತಿತ್ತು. ಹೌದು, ಇದು ಪಂಚಾಕ್ಷರೀ ಮಂತ್ರವೇ ಆಗಿತ್ತು. ಪ್ರೇರಣಾದಾಯೀ ತಾರಕಮಂತ್ರವೇ ಆಗಿತ್ತು.
ಅದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾದ್ಯಂತ ಚಟುವಟಿಕೆಗಳು ನಡೆಯುತ್ತಿದ್ದ ಕಾಲ. ಭಾರತೀಯರ ತನುಮನಗಳಲ್ಲಿ ವಂದೇಮಾತರಂ ಎಂಬ ಘೋಷಣೆ ರೋಮಾಂಚನವನ್ನುಂಟು ಮಾಡುತ್ತಿತ್ತು. ಜೊತೆಗೆ ಮಾತೃಭೂಮಿಯ ಋಣವನ್ನು ಸಲ್ಲಿಸಬೇಕೆಂಬ ಅರಿವನ್ನೂ ಬಡಿದೆಬ್ಬಿಸುತ್ತಿತ್ತು. ಸಮಸ್ತ ಭಾರತೀಯರನ್ನು ಒಂದುಗೂಡಿಸುತ್ತ, ಪರಕೀಯರ ದಾಸ್ಯದಿಂದ ತಾಯ್ನೆಲವನ್ನು ಮುಕ್ತಗೊಳಿಸುವ ಕರ್ತವ್ಯಪ್ರಜ್ಞೆಯನ್ನು ಎಚ್ಚರಿಸುತ್ತಿತ್ತು.
ಸ್ವಾತಂತ್ರ್ಯ ಹೋರಾಟಗಾರರು ಇದನ್ನು ಉಚ್ಚರಿಸುತ್ತ ಎಲ್ಲ ಕಡೆ ಸಂಘಟಿತರಾಗುತ್ತ, ಭಾರತಮಾತೆಯ ಸೇವೆಗೆ ಕರೆನೀಡುತ್ತಿದ್ದರು. ವಂದೇಮಾತರಂ ದೇಶವನ್ನು ತಾಯಿ ಎಂದು ಸಂಬೋಧಿಸಿ ನಮಸ್ಕರಿಸುವ ಈ ಚಿಂತನೆಯೇ ಜನರನ್ನು ಪ್ರದೇಶ, ಭಾಷೆ, ವರ್ಗಭೇದವಿಲ್ಲದೆ ಒಂದಾಗಿಸುವ ಅದ್ಭುತ ಶಕ್ತಿಯಾಗಿತ್ತು. ಆಬಾಲವೃದ್ಧರಾದಿಯಾಗಿ ಎಲ್ಲರಲ್ಲಿ ಹೊಸ ಚೈತನ್ಯದೊಂದಿಗೆ ಬ್ರಿಟಿಷರೆಂಬ ಶತ್ರುಗಳನ್ನೆದುರಿಸುವ ಕೆಚ್ಚನ್ನು ತುಂಬುತ್ತಿತ್ತು. ಅಷ್ಟೇ ಅಲ್ಲ, ವಿದೇಶಗಳಲ್ಲಿದ್ದ ಭಾರತೀಯರಲ್ಲಿಯೂ ದೇಶಪ್ರೇಮವನ್ನು ಜಾಗೃತಗೊಳಿಸುವ ಗೀತೆಯಾಗಿತ್ತು, ವಂದೇಮಾತರಂ. ಇದು ದೇಶದೆಲ್ಲೆಡೆ ಮೊಳಗುತ್ತ ಬ್ರಿಟಿಷರನ್ನು ಕಂಗಾಲಾಗಿಸುತ್ತಿತ್ತು.
19-20 ನೇ ಶತಮಾನದ ಸಂಧಿಕಾಲದಲ್ಲಿ ನೆಲವನ್ನು ತಾಯಿ ಎಂದು ನೋಡುವ ದೃಷ್ಟಿಕೋನಕ್ಕೆ ದಾರಿಮಾಡಿಕೊಟ್ಟಿದ್ದು ಬಂಗಾಳದಲ್ಲಿ ಶಕ್ತಿ ಸಂಪ್ರದಾಯದ ಮಾತೃಸ್ವರೂಪದ ಆರಾಧನೆ. ಹೀಗೆ ಶಕ್ತಿಯು ಭಾರತಮಾತೆಯಾಗಿ ಅವತರಿಸಿದ್ದಳು.
ಆ ಕಾಲದಲ್ಲಿ ಬಂಗಾಳದಲ್ಲಿ ಸ್ವಾಭಿಮಾನ, ದೇಶಭಕ್ತಿಗಳನ್ನು ಪ್ರೇರೇಪಿಸುವ ಅನೇಕ ಸಾಹಿತ್ಯಕೃತಿಗಳ ರಚನೆಯಾಗುತ್ತಿತ್ತು. ಸಮಾನಮನಸ್ಕ ಸಾಹಿತಿಗಳು, ದೇಶಭಕ್ತರು ನಿಯತವಾಗಿ ಒಂದೆಡೆ ಸೇರಿ ದೇಶದ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದರು. ಪರಕೀಯರ ಕೈಯಿಂದ ಮಾತೃಭೂಮಿಯನ್ನು ರಕ್ಷಿಸುವ ಹಂಬಲದಿಂದ ಆ ಸ್ನೇಹಕೂಟದಲ್ಲಿ ನಡೆಯುತ್ತಿದ್ದ ಚರ್ಚೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತಿತ್ತು. ಮೊದಲಿಗೆ, ಜನರಲ್ಲಿ ಅದರ ಅರಿವನ್ನು ಮೂಡಿಸಲು ಚಿಂತಿಸಿ ಒಬ್ಬೊಬ್ಬರೂ ಒಂದೊಂದು ಸಾಹಿತ್ಯ ಕೃತಿಯನ್ನು ನಿಗದಿತ ಕಾಲದಲ್ಲಿ ರಚಿಸಬೇಕೆಂದು ನಿಶ್ಚಯಿಸಿದ್ದರು. ಹೀಗೆ ಸೇರುತ್ತಿದ್ದ ಸ್ನೇಹವಲಯದಲ್ಲಿ ಜೋಗೇಂದ್ರನಾಥ ವಿದ್ಯಾಭೂಷಣ್, ಭೂದೇವಿ ಮುಖರ್ಜಿ, ಶಚೀಂದ್ರನಾಥ್, ಬಂಕಿಮಚಂದ್ರ ಚಟ್ಟೋಪಾಧ್ಯಾಯ, ದೀನಬಂಧುಮಿತ್ರ, ಸುರೇಂದ್ರನಾಥ ಬ್ಯಾನರ್ಜಿ, ಈಶ್ವರಚಂದ್ರವಿದ್ಯಾಸಾಗರ ಮೊದಲಾದ ವಿಭಿನ್ನ ಕ್ಷೇತ್ರಗಳಲ್ಲಿ ವೃತ್ತಿಪರರಾಗಿದ್ದ ವಿದ್ವಾಂಸರು ಇರುತ್ತಿದ್ದರು. ಅವರೆಲ್ಲರೂ ಅಪಾರವಾದ ದೇಶ ಪ್ರೇಮವನ್ನು ಹೊಂದಿದವರಾಗಿದ್ದರು.
ಆ ಸಮಯದಲ್ಲಿಯೇ ನಮ್ಮ ಅದ್ಭುತ ಶಕ್ತಿಯಾದ ವಂದೇಮಾತರಂ ಗೀತೆಯನ್ನು ಒಳಗೊಂಡ ಆನಂದಮಠ ಎಂಬ ಸಾಹಿತ್ಯಕೃತಿ ಬಂಕಿಮಚಂದ್ರರಿಂದ ರಚನೆಯಾಗಿತ್ತು. ಆ ಗೀತೆಯೇ ಕೃತಿಗೆ ಅತ್ಯಂತ ಪ್ರಸಿದ್ಧಿಯನ್ನು ತಂದು ಕೊಟ್ಟಿತ್ತು. ಅದರೊಂದಿಗೆ ದುರ್ಗೇಶನಂದಿನಿ, ದೇವಿ ಚೌಧುರಾಣಿ (ಮೊದಲ ಕೃತಿ) ಮೃಣಾಲಿನಿ, ಕಪಾಲಕಾಂಡಲ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದ್ದರೂ ಆನಂದ ಮಠ ಮಾತ್ರ ಕೇವಲ ಬಂಗಾಳಿ ಸಾಹಿತ್ಯದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿತ್ತು. ೧೮೮೨ರಲ್ಲಿ ಇದು ರಚನೆಗೊಂಡದ್ದು.
ಆನಂದಮಠ ಕಾದಂಬರಿ ಬಂಕಿಮಚಂದ್ರರೇ ನಡೆಸುತ್ತಿದ್ದ ಬಂಗದರ್ಶನ ಎಂಬ ಪತ್ರಿಕೆಯಲ್ಲಿ (ಮಾಸ) ಎರಡು ವರ್ಷಗಳ ಕಾಲ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿತ್ತು. ಕವಿಯಾಗಿ ಕಾದಂಬರಿಕಾರರಾಗಿ, ಸಂಪಾದಕರಾಗಿ, ಪ್ರಬಂಧಕಾರರಾಗಿ, ಪತ್ರಕರ್ತರಾಗಿದ್ದ ಬಂಕಿಮಚಂದ್ರರು ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಬ್ರಿಟಿಷ್ ಸರ್ಕಾರದಲ್ಲಿ ಉದ್ಯೋಗಿಯಾಗಿದ್ದರೂ ಅಂತರಂಗದಲ್ಲಿ ಭಾರತೀಯತೆಯನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದವರು. ಸ್ವತಃ ವಿವೇಕಾನಂದರೂ ಸಹ ಭಾರತ ವಿಮೋಚನೆಗೆ ಬಂಕಿಮರ ಕೃತಿಗಳಿಂದ ಪ್ರಭಾವಿತರಾಗಿ ಸ್ವಾಭಿಮಾನಿ ದೇಶಭಕ್ತರಾಗಲು ಪ್ರೇರಣೆ ಹೊಂದಿದ್ದರು. ಭಾರತ ವಿಮೋಚನೆಗೆ ದುಷ್ಟದಮನಕಾರಿಣಿ ಜಗದಂಬೆ ಕಾಳಿಯನ್ನು ಆವಾಹನೆ ಮಾಡಿ ನಾಡಿಗೆ ನೀಡಿದ ವಂದೇಮಾತರಂ ಗೀತೆ ಇಡೀ ದೇಶದ ಜನತೆಗೆ ನೀಡಿದ್ದ ಮಂತ್ರ ದೀಕ್ಷೆಯಾಗಿತ್ತು. ಇದರ ಜನಪ್ರಿಯತೆ, ಪ್ರಭಾವ ಎಷ್ಟು ಹೆಚ್ಚಿತ್ತೆಂದರೆ ಸಾಮಾನ್ಯ ಜನರೂ ಪರಸ್ಪರ ಸಂಧಿಸಿದಾಗ ವಂದೇಮಾತರಂ ಎಂದು ಅಭಿವಂದಿಸುವುದು ರೂಢಿಯಾಗಿತ್ತು.
ಆನಂದಮಠ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದ್ದ ಕಾಲದಲ್ಲಿ ಜನತೆ ಪ್ರತಿ ಸಂಚಿಕೆಗೆ ತುದಿಗಾಲಿನಲ್ಲಿ ನಿಂತು ನಿರೀಕ್ಷಿಸುತ್ತಿದ್ದರು. ಅದು ಅವರ ನರನಾಡಿಗಳಲ್ಲಿ ಉತ್ಸಾಹ, ಆವೇಶಗಳು ಉಕ್ಕಿ ಹರಿಯುವಂತೆ ಮಾಡುತ್ತಿತ್ತು. ಜನರು ಜಾತಕಪಕ್ಷಿಗಳಂತೆ ಕಾಯುತ್ತಿದ್ದರು. ಒಂದೇ ಸಲಕ್ಕೆ ಪ್ರತಿಕಂತನ್ನು ಓದಿ ಮುಗಿಸುತ್ತಿದ್ದ ಓದುಗರು ಬಂಕಿಮಚಂದ್ರರರನ್ನು ಆರಾಧಿಸುವಷ್ಟು ಮೆಚ್ಚಿಕೊಂಡಿದ್ದರು. ವಿದ್ಯಾವಂತರು, ಸುಸಂಸ್ಕೃತರ ಮನೆಗಳಲ್ಲೆಲ್ಲ ಅವರ ಸಾಹಿತ್ಯದ ಕುರಿತು ಚರ್ಚೆ ನಡೆಯುತ್ತಿತ್ತು. ಅವು ಜನರಲ್ಲಿ ತಮ್ಮ ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು, ಶ್ರದ್ಧೆಯನ್ನು ಮೂಡಿಸುತ್ತಿದ್ದವು. ಪ್ರತಿಯೊಬ್ಬರೂ ತಾನು ದೇಶಕ್ಕಾಗಿ ಏನು ಮಾಡಬೇಕೆಂದು ಪ್ರಶ್ನಿಸಿಕೊಳ್ಳುವಂತೆ ಚಿಂತನೆಗೆ ಹಚ್ಚುತ್ತಿದ್ದವು. ಹೀಗೆ ಲಕ್ಷಾಂತರ ಬಂಗಾಳಿಗಳು ಬಂಕಿಮರ ಸಾಹಿತ್ಯದ ಆರಾಧಕರಾದುದಷ್ಟೇ ಅಲ್ಲ, ದೇಶಸೇವೆಗಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಲು ಅಗತ್ಯವಾದ ಮಾನಸಿಕ ಸಿದ್ಧತೆಯನ್ನು ಹೊಂದುವಂತಾಗಿತ್ತು.
ಆನಂದಮಠ ಒಂದು ಕಾಲ್ಪನಿಕ ವಸ್ತು ಕೇಂದ್ರಿತವಾದ ಕಾದಂಬರಿ. 1770 ರಲ್ಲಿ ಬಂಗಾಳದಲ್ಲಿ ಉಂಟಾಗಿದ್ದ ಬರಗಾಲದ ಪರಿಸ್ಥಿತಿಯನ್ನು ಆಧರಿಸಿದ್ದು, ೧೮ನೇ ಶತಮಾನದ ಉತ್ತರಾರ್ಧದ ಕೊನೆಯಲ್ಲಿ ನಡೆದ ಸನ್ಯಾಸಿಗಳ ಕ್ರಾಂತಿಯ ಹಿನ್ನೆಲೆಯಿಂದ ಸ್ಫೂರ್ತಿಗೊಂಡು ರೂಪಿತವಾದದ್ದು.
ಆನಂದಮಠ ಕೇವಲ ಭಾವೋದ್ವೇಗಕ್ಕೆ ಈಡು ಮಾಡುವ ಕಾದಂಬರಿಯಷ್ಟೇ ಆಗಿರಲಿಲ್ಲ. ಸಾಹಿತ್ಯ ಮೌಲ್ಯವೂ ಇದ್ದು, ಜನರಲ್ಲಿ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಬೇಕೆಂಬ ಆದರ್ಶವನ್ನೂ ಹುಟ್ಟುಹಾಕುತ್ತಿತ್ತು. ಸ್ವತಃ ರವೀಂದ್ರನಾಥ ಠಾಕೂರರೂ ಆ ಕಾದಂಬರಿ ಓದಲು ಚಡಪಡಿಸುತ್ತಿದ್ದರು.
ಬಂಗಾಳದ ದಿನಾಜ್ಪುರದ ಸುತ್ತ ನಡೆಯುವ ಕಥೆ ಇದು. ಬರಗಾಲದ ಪರಿಣಾಮವಾಗಿ ಊರಿನ ಜನರೆಲ್ಲ ಆಶ್ರಯವನ್ನು ಅರಸುತ್ತ ದೂರ ದೂರದ ಪ್ರದೇಶಗಳಿಗೆ ವಲಸೆ ಹೊರಡುತ್ತಾರೆ. ಅಲ್ಲಿನ ಶ್ರೀಮಂತ ಜಮೀನ್ದಾರ ಮಹೇಂದ್ರ ಕೂಡ ತನ್ನ ಪತ್ನಿ ಕಲ್ಯಾಣಿ ಮತ್ತು ಪುತ್ರಿಯೊಡನೆ ದೂರದ ಪಟ್ಟಣಕ್ಕೆ ಹೊರಡುತ್ತಾನೆ. ದಾರಿಯಲ್ಲಿ ಕಾರಣಾಂತರಗಳಿಂದ ಪತ್ನಿ ಪುತ್ರಿಯರಿಂದ ಬೇರೆಯಾಗಿಬಿಡುತ್ತಾನೆ. ದರೋಡೆಕೋರರ ಕೈಗೆ ಸಿಕ್ಕಿಬಿದ್ದ ಕಲ್ಯಾಣಿ ಹೇಗೋ ತಪ್ಪಿಸಿಕೊಂಡು ಪುತ್ರಿಯೊಡನೆ ಕಾಡಿನಲ್ಲಿ ಅಲೆಯುತ್ತ ಪ್ರಜ್ಞಾಶೂನ್ಯಳಾಗುತ್ತಾಳೆ.
ಆನಂದಮಠ ಸತ್ಯಾನಂದ ಸ್ವಾಮಿಯ ನೆಲೆಮನೆಯಾಗಿದ್ದು ಮಾತೃಭೂಮಿಯ ಸೇವೆಗಾಗಿ ಕಂಕಣಬದ್ಧರಾಗಿದ್ದ ಯುವ ಜನರು ಕಾರ್ಯಶೀಲರಾಗಿರುತ್ತಾರೆ. ಸತ್ಯಾನಂದಸ್ವಾಮಿಯ ಆ ಯುವತಂಡ ತರಬೇತಿಯಿಲ್ಲದ ಆದರೆ ಶಿಸ್ತಿನ ಸಿಪಾಯಿಗಳಾಗಿದ್ದರು. ದೇಶಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿ ಮನೆಬಿಟ್ಟು ಹೊರಬಂದ ದೇಶಭಕ್ತರಾಗಿದ್ದರು. ಕ್ರಮಬದ್ಧವಾದ ಹೋರಾಟವನ್ನು ಕಲಿಯದಿದ್ದರೂ ಮಾತೃಭೂಮಿಯನ್ನು ರಕ್ಷಿಸಲು ಸಿದ್ಧರಾಗಿದ್ದರು. ಕಾದಂಬರಿಯ ಮುಖ್ಯಪಾತ್ರಗಳು ಸನ್ಯಾಸಿ ಸತ್ಯಾನಂದ, ಅವರ ಆಪ್ತ ಶಿಷ್ಯರೆಂದು ಭವಾನಂದ, ಜೀವಾನಂದರಿರುತ್ತಾರೆ. ಸತ್ಯಾನಂದ ಮಾತೃಭೂಮಿ ದೇವಿಯ ರೂಪವೆಂದು ಮೂರು ರೂಪಗಳನ್ನು ಮಠದ ದೇಗುಲದಲ್ಲಿ ಆರಾಧಿಸುತ್ತಿರುತ್ತಾರೆ. ಭವಾನಿ, ದುರ್ಗಾ, ರುಂಡಮಾಲ ಎಂಬ ಮೂರು ರೂಪಗಳು ಆಕೆ ಪರಕೀಯರನ್ನು ತನ್ನ ನೆಲದಿಂದ ಓಡಿಸಲು ರುಂಡಮಾಲಾಧಾರಿಯಾಗಿ ವಿಜೃಂಭಿಸುತ್ತಾಳೆ ಎಂಬ ಸಂಕೇತ ಅಲ್ಲಿರುತ್ತದೆ. ಸತ್ಯಾನಂದರು ಅನುಚರರು ಬರಗಾಲದ ಪರಿಣಾಮವಾಗಿ ಬಡತನದಿಂದ ಕಂಗೆಟ್ಟಿದ್ದ ಸುತ್ತಲಿನ ಗ್ರಾಮಸ್ಥರಿಗೆ ಬ್ರಿಟಿಷ್ ಅಧಿಕಾರಿಗಳು ಹೆದರಿಸಿ, ಬೆದರಿಸಿ ವಸೂಲು ಮಾಡಿದ್ದ ಕಂದಾಯದ ಹಣವನ್ನು, ದವಸ ಧಾನ್ಯಗಳನ್ನು ಕೇಂದ್ರ ಕಛೇರಿಗೆ ಸಾಗಾಣಿಕೆ ಮಾಡುವಾಗ ಅಡ್ಡಗಟ್ಟಿ, ಹೋರಾಡಿ ಲೂಟಿ ಮಾಡಿ ತಂದು ಆ ಬಡವರಿಗೆ ತಲುಪಿಸುತ್ತಿರುತ್ತಾರೆ. ಬ್ರಿಟಿಷರಿಗೆ ಆ ರೀತಿಯಲ್ಲಿ ಆನಂದಮಠದ ವೀರರು ಚಳ್ಳೆಹಣ್ಣು ತಿನ್ನಿಸುತ್ತಿರುತ್ತಾರೆ.
ಅಂತಹ ಒಂದು ಸಂದರ್ಭದಲ್ಲಿಯೇ ಪತ್ನಿ, ಪುತ್ರಿಯರನ್ನು ಹುಡುಕುತ್ತ ಹೊರಟಿದ್ದ ಮಹೇಂದ್ರನಿಗೆ ಭವಾನಂದರ ಭೇಟಿಯಾಗಿ ಮೊದಲಿಗೆ ಲೂಟಿಕೋರರೆಂಬ ಭ್ರಮೆಯುಂಟಾದರೂ ನಂತರದಲ್ಲಿ ಅವರೆಲ್ಲ ಮಾತೃಭೂಮಿಯ ರಕ್ಷಣೆಗೆ ನಿಂತವರೆಂಬ ಸತ್ಯದ ಅರಿವಾಗುತ್ತದೆ. ವೈಯಕ್ತಿಕ ಸುಖ, ಸಂತೋಷವನ್ನು ತ್ಯಾಗಮಾಡಿ ಬಂದವರೆಂಬುದನ್ನೂ ತಿಳಿಯುತ್ತಾನೆ. ತಾನೂ ಅವರೊಂದಿಗೆ ಸೇರಲು ನಿರ್ಧರಿಸುತ್ತಾನೆ. ತನ್ನ ಪತ್ನಿ, ಪುತ್ರಿ ಇಬ್ಬರೂ ಆನಂದಮಠದ ರಕ್ಷಣೆಯಲ್ಲಿರುವ ವಿಷಯವೂ ತಿಳಿಯುತ್ತದೆ. ಅವರನ್ನು ಭೇಟಿಮಾಡಲು ಹೋಗಿ, ಸತ್ಯಾನಂದರನ್ನು ಕಂಡು, ಅವರ ಆಶೀರ್ವಾದ ಪಡೆದು ತನ್ನ ನಿರ್ಧಾರವನ್ನು ತಿಳಿಸುತ್ತಾನೆ.
ಈ ಮಧ್ಯೆ ಬ್ರಿಟಿಷ್ ಸೈನ್ಯದ ತುಕಡಿಯೊಂದಿಗೆ ಹೋರಾಡುವ ಸಂದರ್ಭದಲ್ಲಿ ಭವಾನಂದ, ಜೀವಾನಂದರಿಬ್ಬರೂ ಸಾಯುತ್ತಾರೆ. ಮಹೇಂದ್ರ ಕುಟುಂಬವನ್ನು ಸುರಕ್ಷಿತ ತಾಣವಾಗಿದ್ದ ತನ್ನ ಊರಿನಲ್ಲಿ ನೆಲೆಗೊಳಿಸಿ ತಾನು ಸತ್ಯಾನಂದರೊಂದಿಗೆ ಸೇರಿಕೊಳ್ಳುತ್ತಾನೆ. ಮುಂದೆ ಸನ್ಯಾಸಿಗಳ ಹೋರಾಟಕ್ಕೆ ಅಪಜಯವಾದರೂ ಭವಿಷ್ಯದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಕಿದಂತಾಗುತ್ತದೆ. ಪಾತ್ರಗಳೆಲ್ಲ ಸಾಮಾನ್ಯರೇ, ಆದರೆ ಆ ದಿನಗಳಲ್ಲಿ ಆನಂದಮಠವನ್ನು ಓದಿದವರೆಲ್ಲ ತಾವೂ ಸನ್ಯಾಸಿಯ ಪಾತ್ರದೊಂದಿಗೆ ಇದ್ದಂತೆ ಕಲ್ಪಿಸಿಕೊಳ್ಳುತ್ತಿದ್ದರು. ಭವಾನಂದ, ಜೀವಾನಂದರಂತೆ ದೇಶಸೇವೆಗೆ ಮನೆಬಿಟ್ಟು ಹೊರಡುವ ಸಂಕಲ್ಪಕ್ಕೆ ಮುಂದಾಗುತ್ತಿದ್ದರು. ಆನಂದಮಠ ಓದಿದಷ್ಟೂ ಮತ್ತೆ ಮತ್ತೆ ಓದಬೇಕೆಂಬ ಆಸೆ ಮೂಡಿಸುವ ಮಾಂತ್ರಿಕ ಶಕ್ತಿ ಹೊಂದಿತ್ತು. ರಾಷ್ಟ್ರವೆಂದರೇನು? ಮಾತೃಭೂಮಿ ಎಂದರೇನು? ಅದೊಂದು ಮಹಾಶಕ್ತಿ ಎಂಬ ಭಾವನೆಗಳು ಮನಸ್ಸಿನಲ್ಲಿ ಉಂಟಾಗುತ್ತ ಅವೆಲ್ಲದರ ಬಗ್ಗೆ ಚಿಂತನೆ ಮಾಡುವಂತೆ ಪ್ರೇರಣೆ ನೀಡುತ್ತಿತ್ತು.
ಆನಂದಮಠ ಕಾದಂಬರಿಯನ್ನು ಕನ್ನಡಕ್ಕೆ ಬಿ.ವೆಂಕಟಾಚಾರ್ಯರು ಅನುವಾದಿಸಿದರು. ಅಷ್ಟೇ ಅಲ್ಲ ಬಂಕಿಮರ ಎಲ್ಲ ಕಾದಂಬರಿಗಳನ್ನೂ ಅವರು ಕನ್ನಡಕ್ಕೆ ತಂದರು. ಇದರ ಇಂಗ್ಲಿಷ್ ಅವತರಣಿಕೆಯೂ The Abbey of Bliss ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಅಷ್ಟೇ ಅಲ್ಲ ಭಾರತದ ಬಹುತೇಕ ವಂದೇಮಾತರಂ ಗೀತೆಯು ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡಿತು, 1920 ರವರೆಗೂ ರಾಷ್ಟ್ರಗೀತೆಯ ಗೌರವವನ್ನು ಪಡೆದಿತ್ತು. ಲಾಲಾಲಜಪತರಾಯ್ ಲಾಹೋರ್ನಿಂದ ಹೊರಡಿಸುತ್ತಿದ್ದ ಪತ್ರಿಕೆಗೆ ವಂದೇಮಾತರಂ ಎಂದು ಹೆಸರು ನೀಡಿದ್ದರು. ಅದಕ್ಕೆ ಪ್ರೇರಣೆ ಆನಂದಮಠದ ವಂದೇಮಾತರಂ ಗೀತೆ. 1907 ರಲ್ಲಿ ಮೇಡಂ ಕಾಮ ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ಸ್ವತಂತ್ರ ಭಾರತದ ಮೊದಲ ಧ್ವಜದ ಅನಾವರಣ ಮಾಡುವಾಗ ಅದರ ಮಧ್ಯೆ ವಂದೇಮಾತರಂ ಎಂಬ ಘೋಷಣೆಯಿತ್ತು. ಸ್ವಾತಂತ್ರ್ಯ ಹೋರಾಟಗಾರರು ಎಲ್ಲ ಕಡೆ ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಹೋರಾಟಗಳಲ್ಲಿ ಅವರ ಪ್ರಮುಖ ಘೋಷಣೆ ವಂದೇಮಾತರಂ ಆಗಿತ್ತು. ಗುಂಡೇಟಿನಿಂದ ಸಾಯುವ ಘಳಿಗೆಯಲ್ಲಿ ಕೂಡ ಆ ದೇಶಭಕ್ತರು ಹೇಳುತ್ತಿದ್ದ ಅಂತಿಮ ಮಂತ್ರವೇ ವಂದೇಮಾತರಂ ಆಗಿರುತ್ತಿತ್ತು.
1947, ಆಗಸ್ಟ್ 15 ಪ್ರಾತಃಕಾಲ 6-30 ಕ್ಕೆ ಆಕಾಶವಾಣಿಯಿಂದ ಪಂ.ಓಂಕಾರನಾಥಠಾಕೂರರು ರಾಗ ದೇಶ್ನಲ್ಲಿ ಹಾಡಿದ ವಂದೇಮಾತರಂ ಪ್ರಸಾರವಾಗಿತ್ತು. ಆನಂದಮಠ ಕಾದಂಬರಿಯಲ್ಲಿ ಭವಾನಂದ ಹಾಡುವ ವಂದೇಮಾತರಂ ನಮ್ಮ ದೇಶದ ಭೌಗೋಳಿಕ ಸಂಪತ್ತನ್ನು ವರ್ಣಿಸುತ್ತ ಆ ಮಾತೆಗೆ ನಮಸ್ಕರಿಸುವ ಗೀತೆಯಾಗಿದೆ. ಸಂಸ್ಕೃತ ಭಾಷೆಯಲ್ಲಿ ರಚನೆಗೊಂಡಿರುವ ಈ ಗೀತೆ ದೇಶದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ನಾಲ್ಕೂ ದಿಕ್ಕುಗಳಲ್ಲಿ ಎಲ್ಲರ ಕಂಠಗಳಲ್ಲಿ ಮೊಳಗುತ್ತ ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಕೋಟ್ಯಂತರ ಭಾರತೀಯರಲ್ಲಿ ದೇಶಪ್ರೇಮದ ತರಂಗಗಳನ್ನೆಬ್ಬಿಸಿ, ವೀರಯೋಧರನ್ನಾಗಿಸಿದ್ದ ವಂದೇಮಾತರಂ ಗೀತೆ, ಆಕಾಶವಾಣಿಯಲ್ಲಿ ಪ್ರಾತಃಕಾಲದಲ್ಲಿ ಪ್ರಸಾರ ಮಾಡುತ್ತಿದ್ದ, ಈಗಲೂ ಮಾಡುತ್ತಿರುವ ವಂದೇಮಾತರಂ ಗೀತೆ ಜನರ ತಾಯ್ನಾಡಿಗೆ ಭಕ್ತಿಯಿಂದ ನಮಸ್ಕರಿಸಿ ದಿನವನ್ನು ಪ್ರಾರಂಭಿಸುವ ಅದ್ಭುತ ಪರಿಣಾಮವನ್ನು ಬೀರುತ್ತಿರುವ ಗೀತೆ. ಇಂದಿಗೂ ಭಾರತದ ನ್ಯಾಷನಲ್ ಸಾಂಗ್ ಎಂಬ ಗೌರವ ಹೊಂದಿರುವ ಗೀತೆ. ಇಂತಹ ವಿಶಿಷ್ಟ ಶಕ್ತಿಹೊಂದಿದ ಗೀತೆಯಿಂದ ಸಂಪನ್ನವಾದ ಕೃತಿ ಆನಂದಮಠ.
ಇಂದಿನ ಯುವ ಜನಾಂಗಕ್ಕೆ ಇಂತಹ ಪುಸ್ತಕಗಳ ಪರಿಚಯವಾಗಬೇಕಾದುದು ಅತ್ಯವಶ್ಯಕವಾಗಿದೆ. ಅವರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸಲು ಸಹಕಾರಿಯಾಗುತ್ತದೆ.
✍️ ನಂ. ನಾಗಲಕ್ಷ್ಮಿ
ನಿವೃತ್ತ ಕನ್ನಡ ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.