ನವದೆಹಲಿ: ಗೂಢಚರ್ಯೆ ಆರೋಪದಡಿ ಬಂಧಿಸಲಾಗಿರುವ ಆಂಧ್ರಪ್ರದೇಶದ ಎಲ್ಲಾ 22 ಮೀನುಗಾರರನ್ನು ಪಾಕಿಸ್ಥಾನ ಜನವರಿ 6 ರಂದು ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜನವರಿ 6 ರಂದು ವಾಘಾ ಗಡಿಯ ಮೂಲಕ ಮೀನುಗಾರರನ್ನು ಭಾರತಕ್ಕೆ ವಾಪಸ್ ಕಳುಹಿಸಲು ಪಾಕಿಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ಥಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ಗೆ ತಿಳಿಸಿದೆ.
ಈ ಮೀನುಗಾರರನ್ನು 2018ರ ನವೆಂಬರ್ ತಿಂಗಳಿನಲ್ಲಿ ಗುಜರಾತ್ ಕರಾವಳಿಯಲ್ಲಿ ಪಾಕಿಸ್ಥಾನದ ಕಡಲ ಭದ್ರತಾ ಸಂಸ್ಥೆ ವಶಪಡಿಸಿಕೊಂಡಿತ್ತು.
ವೈಎಸ್ಆರ್ಸಿಪಿ ಸಂಸದೀಯ ಪಕ್ಷದ ಮುಖಂಡ ವಿ. ವಿಜಯಸಾಯಿ ರೆಡ್ಡಿ ಅವರು ಆಗಸ್ಟ್ 22 ರಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ಆಂಧ್ರಪ್ರದೇಶದ ಶ್ರೀಕಾಕುಲಂ ಮತ್ತು ವಿಜಯನಗರಂ ಜಿಲ್ಲೆಗಳ ಮೀನುಗಾರರನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಕೋರಿದ್ದರು.
ವಶಪಡಿಸಿಕೊಂಡ ಮೀನುಗಾರರ ಕುಟುಂಬ ಸದಸ್ಯರೊಂದಿಗೆ ಅವರು ಅಂದಿನ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದರು ಮತ್ತು ಮೀನುಗಾರರನ್ನು ಬಿಡುಗಡೆ ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸುವುದಾಗಿ ಸುಷ್ಮಾ ಅವರಿಗೆ ಭರವಸೆ ನೀಡಿದ್ದರು.
ಆಂಧ್ರ ಪ್ರದೇಶದ ಮೀನುಗಾರರು ಮೀನುಗಾರಿಕೆಗಾಗಿ ಗುಜರಾತ್ಗೆ ಹೋಗಿದ್ದರು. ಅವರು ಮೂರು ದೋಣಿಗಳಲ್ಲಿ ಸಮುದ್ರಕ್ಕೆ ಪ್ರವೇಶಿಸಿದ್ದಾಗ ಪಾಕಿಸ್ಥಾನದ ಅಧಿಕಾರಿಗಳು ಬಂಧಿಸಿ ಕರಾಚಿಗೆ ಕರೆದೊಯ್ದಿದ್ದರು ಎಂದು ವರದಿಯಾಗಿದೆ.
ಪ್ರತಿ ವರ್ಷ, ಆಂಧ್ರ ಕರಾವಳಿಯ ಮೀನುಗಾರರು ಸೆಪ್ಟೆಂಬರ್ನಲ್ಲಿ ಗುಜರಾತ್ಗೆ ಮೀನುಗಾರಿಕೆಗಾಗಿ ಹೋಗಿ ಮಾರ್ಚ್ನಲ್ಲಿ ಹಿಂದಿರುಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.