ತುಮಕೂರು: “ರೈತರ ಪರಿಶ್ರಮದಿಂದ ಇಂದು ಅತ್ಯಂತ ದಾಖಲೆಯ ಮಟ್ಟದಲ್ಲಿ ಭಾರತದಲ್ಲಿ ಆಹಾರ ಉತ್ಪಾದನೆಯಾಗುತ್ತಿದೆ. 130 ಕೋಟಿ ಜನರ ಪರವಾಗಿ ನಾನು ಅನ್ನದಾತರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತುಮಕೂರಿನಲ್ಲಿ ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ಅವರು, ” ದೇಶದ ಕೃಷಿ ಕ್ಷೇತ್ರವನ್ನು ಮುನ್ನಡೆಸುತ್ತಿರುವ ರೈತ ಬಂಧುಗಳು ಮತ್ತು ಅವರ ರಾಜ್ಯಗಳನ್ನು ಸನ್ಮಾನ ಮಾಡುವ ಅವಕಾಶ ನನಗೆ ಸಿಕ್ಕಿದೆ. ಕೃಷಿ ಕರ್ಮಣ್ ಪ್ರಶಸ್ತಿ ಪಡೆದ ಎಲ್ಲಾ ರೈತರಿಗೆ ಧನ್ಯವಾದಗಳು, ಅವರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಫಲಾನುಭವಿ ರೈತರನ್ನು ಕ್ಷಿಪ್ರಗತಿಯಲ್ಲಿ ಗುರುತಿಸಿಕೊಟ್ಟಿದ್ದಕ್ಕಾಗಿ ದೇಶದ ಬೇರೆ ಬೇರೆ ರಾಜ್ಯಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಂದಿದ್ದಾರೆ.
ಇಂದು ತಮಿಳುನಾಡು ಮತ್ತು ಕರ್ನಾಟಕದ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕಾ ದೋಣಿ ಮತ್ತು ಇತರ ಸಲಕರಣೆಗಳನ್ನು ಇಂದು ನೀಡುತ್ತಿದ್ದೇವೆ. ಸಲಕರಣೆ ಪಡೆಯುತ್ತಿರುವ ನಮ್ಮ ಎಲ್ಲಾ ಮೀನುಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನದೊಂದಿಗೆ ಕರ್ನಾಟಕದ ಈ ಐತಿಹಾಸಿಕ ಭೂಮಿ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ. ಅದೇನೆಂದರೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 8 ಕೋಟಿ ಕೃಷಿಕರ ಖಾತೆಗೆ ಏಕ ಕಾಲದಲ್ಲಿ ಹಣವನ್ನು ಜಮೆ ಮಾಡಲಾಗುತ್ತಿದೆ. ಕಡಿಮೆ ಸಮಯದಲ್ಲಿ ಇದನ್ನು ಸಾಧಿಸಿದ್ದು ತುಂಬಾ ದೊಡ್ಡ ಮಾತು. ಅಷ್ಟೇ ಅಲ್ಲದೇ, ಇಂದು ಈ ಕಾರ್ಯಕ್ರಮದಲ್ಲಿ ದೇಶದ 6 ಕೋಟಿ ಕೃಷಿಕರಿಗೆ ರೂ. 12 ಸಾವಿರ ಕೋಟಿಗಳನ್ನು ಜಮೆ ಮಾಡಲಾಗಿದೆ ಎಂದಿದ್ದಾರೆ.
ನಮ್ಮ ಸರ್ಕಾರದ ಪ್ರಯತ್ನಗಳ ಫಲವಾಗಿ, ಭಾರತದಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ. ಮಸಾಲೆ ಪದಾರ್ಥಗಳ ಉತ್ಪಾದನೆಯು 25 ಲಕ್ಷ ಟನ್ ದಾಟಿದೆ, ಮತ್ತು ರಫ್ತು 15,000 ಕೋಟಿ ರೂ.ಗಳಿಂದ 19,000 ಕೋಟಿ ರೂ.ಗೆ ಏರಿದೆ ಎಂದಿದ್ದಾರೆ.
ದಶಕಗಳಿಂದ ಸ್ಥಗಿತಗೊಂಡಿದ್ದ ನೀರಾವರಿ ಯೋಜನೆಗಳು , ಮಣ್ಣಿನ ಆರೋಗ್ಯ ಕಾರ್ಡ್ಗಳು ಮತ್ತು ಇತರ ಎಲ್ಲ ಯೋಜನೆಗಳನ್ನು ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾರಂಭಿಸಿದ್ದೇವೆ ಎಂದಿದ್ದಾರೆ.
ನಮ್ಮ ಸರ್ಕಾರ ಜನರ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ಮಾತ್ರವಲ್ಲದೇ, ಜನರ ಉತ್ತಮ ಭವಿಷ್ಯಕ್ಕೂ ಸಹಾಯ ಮಾಡುತ್ತಿದೆ. ರೈತರು ತಮ್ಮ ಉತ್ಪನ್ನಗಳನ್ನು ಇ-ನ್ಯಾಮ್ ನೆಟ್ವರ್ಕ್ ಮೂಲಕ ದೇಶದಾದ್ಯಂತದ ಯಾವುದೇ ಇ-ಮಂಡಿಯಲ್ಲಿ ಮಾರಾಟ ಮಾಡಬಹುದಾದ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಟ್ಟಿದ್ದೇವೆ. ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸಹ ಮಾಡಿದ್ದೇವೆ ಎಂದಿದ್ದಾರೆ.
ಸರ್ಕಾರ 1 ರೂಪಾಯಿ ಕೊಟ್ಟರೆ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ, 85 ಪೈಸೆ ಮಧ್ಯವರ್ತಿಗಳ ಪಾಲಾಗುತ್ತದೆ ಎಂಬ ಕಾಲವೊಂದಿತ್ತು. ಆದರೆ ಈಗ ದೆಹಲಿಯಲ್ಲಿ ಹಾಕಿದ ಹಣ ಜನರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ನಾನು ಕರ್ನಾಟಕ ಸಹಿತ ಬೇರೆ ಬೇರೆ ರಾಜ್ಯಗಳು ಈ ಯೋಜನೆಗೆ ಜೋಡಿಸಲ್ಪಡುತ್ತದೆ ಎಂಬ ಭರವಸೆ ಹೊಂದಿದ್ದೇನೆ. ಈ ಯೋಜನೆ ಆ ಪಕ್ಷದ್ದು, ಈ ಪಕ್ಷದ್ದು, ಇದರಿಂದ ಅವರಿಗೆ ಲಾಭ ಇವರಿಗೆ ಲಾಭ ಎಂಬ ಭಾವನೆ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ.
ಕಾಫಿ ಕರ್ನಾಟಕದ ಹೆಮ್ಮೆ. ಕಾಫಿ ಮೌಲ್ಯವರ್ಧನೆ ಮಾಡುವುದು ನಮ್ಮ ಸರ್ಕಾರದ ಪ್ರಯತ್ನ. ಈ ಕಾರ್ಯವನ್ನು ಇಂಟಿಗ್ರೇಟೆಡ್ ಕಾಪಿ ಡೆವಲ್ಮಪೆಂಟ್ ಪ್ರೋಗ್ರಾಂ ಮೂಲಕ ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕಾಫಿ ಉತ್ಪಾದನೆಯಿಂದ ಹಿಡಿದು ಅದರ ಪ್ಯಾಕೇಜ್ ವರೆಗೂ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಮೀನುಗಾರಿಕೆಯ ಬಲವರ್ಧನೆಗೆ ನಮ್ಮ ಸರ್ಕಾರ ಮೂರು ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.1.ಗ್ರಾಮಗಳಲ್ಲಿ ಮೀನುಗಾರಿಕೆಗೆ ಉತ್ತೇಜನ, ಮೀನುಗಾರ ಸಹೋದರ-ಸಹೋದರಿಯರಿಗೆ ಆರ್ಥಿಕ ಸಹಾಯ, 2. ಬ್ಲೂ ರೆವಲ್ಯೂಷನ್ ಯೋಜನೆಯ ಮೂಲಕ ದೋಣಿಗಳ ಆಧುನೀಕರಣ,3. ಮೀನು ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣ ಮಾಡುತ್ತಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.