ರಾಯ್ಪುರ: ಛತ್ತೀಸ್ಗಢ ಜಿಲ್ಲಾ ಅರಣ್ಯ ಇಲಾಖೆಯ ಪರಿಸರಸ್ನೇಹಿ ಉಪಕ್ರಮದ ಭಾಗವಾಗಿ, ಅಲ್ಲಿನ ರಾಮಾನುಜ್ಗಂಜ್ ನರ್ಸರಿಯಲ್ಲಿ ಸಸಿಗಳನ್ನು ನೆಡಲು ಮತ್ತು ಬೆಳೆಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಫಲವಾಗಿ ಅಲ್ಲಿನ ಮಹಿಳೆಯರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಈ ನರ್ಸರಿಯಲ್ಲಿ ಮಹಿಳೆಯರ ಸಹಾಯದಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿ ಸಸಿಗಳನ್ನು ನೀಡಲಾಗುತ್ತಿದೆ.
ನರ್ಸರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಲ್ಲಿ ಒಬ್ಬರಾದ ಅಮರ್ಲತಾ ಮಿಂಜ್ ಅವರು ತಮ್ಮ ಕಾರ್ಯವನ್ನು ವಿವರಿಸಿದ್ದು, “ನಾವು ನಗರಗಳಿಂದ ಬಾಟಲಿಗಳನ್ನು ಸಂಗ್ರಹಿಸಿ ಇಲ್ಲಿಗೆ ತರುತ್ತೇವೆ. ನಂತರ ಬಾಟಲಿಗಳನ್ನು ಕತ್ತರಿಸಿ ಫಲವತ್ತಾದ ಮಣ್ಣನ್ನು ಇದರೊಳಗೆ ತುಂಬಿಸುವ ಮೂಲಕ ಸಸಿಗಳನ್ನು ನೆಡುತ್ತೇವೆ. ಬಾಟಲಿಯ ಇತರ ಭಾಗಗಳನ್ನು ಸಹ ಬಳಸಲಾಗುತ್ತದೆ” ಎಂದಿದ್ದಾರೆ.
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ ನಂತರ ಈ ಅಭ್ಯಾಸವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಸಿಗಳನ್ನು ಸಂರಕ್ಷಿಸಲು ಮತ್ತು ಬೆಳೆಸಲು ಬಳಸಿದ ಬಾಟಲಿಗಳನ್ನು ಪ್ಲಾಸ್ಟಿಕ್ ನಿಷೇಧದ ನಂತರವೇ ಪರಿಚಯಿಸಲಾಯಿತು ಎಂದಿದ್ದಾರೆ.
ನರ್ಸರಿ ವ್ಯವಸ್ಥಾಪಕ ಲಾಲನ್ ಸಿನ್ಹಾ ಅವರು ಮಾತನಾಡಿ, “ಆಡಳಿತವು ಪಾಲಿಥಿನ್ ಅನ್ನು ನಿಷೇಧಿಸಿದ ನಂತರ ನಾವು ಈ ಹೊಸ ತಂತ್ರವನ್ನು ಅಳವಡಿಸಿಕೊಂಡಿದ್ದೇವೆ, ವಿವಿಧೆಡೆಯಿಂದ ಬಾಟಲಿಗಳನ್ನು ಸಂಗ್ರಹಿಸಿ ಇಲ್ಲಿಗೆ ತರುತ್ತೇವೆ. ಮಹಿಳೆಯರು ಇದನ್ನು ತಮ್ಮ ಮನೆಗಳಲ್ಲಿ ಅಥವಾ ಇಲ್ಲಿಗೆ ಬಂದು ಸಸಿಗಳನ್ನು ನೆಡುವುದಕ್ಕೆ ಯೋಗ್ಯವಾಗುವಂತೆ ತಯಾರಿಸುತ್ತಾರೆ. ಅವರು ಬಾಟಲಿಯನ್ನು ಕತ್ತರಿಸಿ ತಂತಿಯು ಹಾದುಹೋಗುವಂತೆ ಎರಡು ರಂಧ್ರಗಳನ್ನು ಮಾಡುತ್ತಾರೆ. ಮಣ್ಣು, ಸೆಗಣಿ ಮತ್ತು ಗೊಬ್ಬರವನ್ನು ಬಾಟಲಿಯಲ್ಲಿ ಇಡಲಾಗುತ್ತದೆ, ಸಸಿಯನ್ನು ಅದರಲ್ಲಿ ಹಾಕಲಾಗುತ್ತದೆ ಮತ್ತು ಅದನ್ನು ಚೆನ್ನಾಗಿ ಮುಚ್ಚಲಾಗುತ್ತದೆ” ಎಂದಿದ್ದಾರೆ.
ಸಸ್ಯ ಸಸಿಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ಪರಿಸರ ಸ್ನೇಹಿ ವಿಧಾನವೂ ಈ ಪ್ರದೇಶದ ಮಹಿಳೆಯರಿಗೆ ಆದಾಯದ ಮೂಲವಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಅಧಿಕಾರಿ ಪ್ರಣಯ್ ಮಿಶ್ರಾ ಅವರು ಹೇಳಿದ್ದಾರೆ. ಅವರು ಈ ಉಪಕ್ರಮವನ್ನು ಉತ್ತೇಜಿಸುತ್ತಿದ್ದಾರೆ.
“ನಾವು ಹಳೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯೊಂದಿಗೆ ಸುಮಾರು 3000 ಹೂವಿನ ಮಡಕೆಗಳನ್ನು ತಯಾರಿಸಿದ್ದೇವೆ. ಈ ಕೆಲಸದಲ್ಲಿ ನಿರತರಾಗಿರುವ ಮಹಿಳೆಯರಿಗೆ ಆದಾಯವನ್ನು ತಂದುಕೊಡಲು ಈ ಸಸ್ಯಗಳನ್ನು ಮಾರಾಟ ಮಾಡಲು ನಾವು ಯೋಜಿಸಿದ್ದೇವೆ” ಎಂದಿದ್ದಾರೆ.
“ಇದಕ್ಕೆ ಯಾವುದೇ ನುರಿತ ಕೌಶಲ್ಯದ ಅಗತ್ಯವಿಲ್ಲ ಮತ್ತು ಸ್ಥಳೀಯ ಮಹಿಳೆಯರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರು ಇದರ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ ಮತ್ತು ಸಸಿಗಳಿಗೆ ಬಳಸಲಾಗುವ ಈ ಪ್ಲಾಸ್ಟಿಕ್ ಕಂಟೇನರ್ ಸುಮಾರು ಎರಡು ವರ್ಷಗಳ ಕಾಲ ಇರುತ್ತದೆ ಎಂದು ನಾವು ಅಂದಾಜು ಮಾಡುತ್ತೇವೆ” ಎಂದು ಅವರು ಹೇಳುತ್ತಾರೆ.
ಈ ಉಪಕ್ರಮದ ಭಾಗವಾಗಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿದಿನವೂ ಸಂಬಳ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.