ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ 59ನೇ ‘ಮನ್ ಕೀ ಬಾತ್’ ಅನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಹತ್ತು ಹಲವು ವಿಷಯಗಳ ಕುರಿತ ತಮ್ಮ ಅನಿಸಿಕೆಗಳನ್ನು ದೇಶದ ಜನರ ಮುಂದೆ ಹಂಚಿಕೊಂಡರು.
ಎನ್ಸಿಸಿ ಬಗ್ಗೆ ಮಾತನಾಡಿದ ಅವರು, “ಭಾರತದ NCCಯು ವಿಶ್ವದ ಅತೀದೊಡ್ಡ Uniformed youth organization ಆಗಿದೆ. ಇದು Tri-Services Organization ಆಗಿದ್ದು, ಇದರಲ್ಲಿ ಭೂಸೇನೆ, ನೌಕಾಸೇನೆ, ವಾಯುಸೇನೆ ಸೇರಿವೆ. ನಾಯಕತ್ವ, ದೇಶಭಕ್ತಿ, ನಿಸ್ವಾರ್ಥ ಸೇವೆ, ಶಿಸ್ತು, ಪರಿಶ್ರಮ ಇವುಗಳನ್ನು ತನ್ನ ವ್ಯಕ್ತಿತ್ವದ ಭಾಗವನ್ನಾಗಿಸಿ, ತನ್ನ ಹವ್ಯಾಸವನ್ನಾಗಿ ಮಾಡಿಕೊಂಡು ರೋಮಾಂಚಕ ಯಾತ್ರೆಯ ಅರ್ಥವೇ NCC. ನಾನು ಕೂಡ ಬಾಲ್ಯದಲ್ಲಿ ನನ್ನ ಗ್ರಾಮದ ಶಾಲೆಯಲ್ಲಿ NCC ಕೆಡೆಟ್ ಆಗಿದ್ದೆ ಎನ್ನುವುದು ನನ್ನ ಸೌಭಾಗ್ಯ. ನನಗೆ ಈ ಶಿಸ್ತು, ಈ ಸಮವಸ್ತ್ರದ ಬಗ್ಗೆ ತಿಳಿದಿದೆ, ಇದೇ ಕಾರಣದಿಂದಾಗಿ ಆತ್ಮವಿಶ್ವಾಸದ ಮಟ್ಟವೂ ಹೆಚ್ಚಾಗುತ್ತದೆ. ಇದೆಲ್ಲವನ್ನೂ ಬಾಲ್ಯದಲ್ಲಿ NCC ಕೆಡೆಟ್ ಆಗಿ ಅನುಭವಿಸಲು ನನಗೆ ಅವಕಾಶ ಸಿಕ್ಕಿತು” ಎಂದಿದ್ದಾರೆ.
ಅಯೋಧ್ಯಾ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವೇಳೆ ಶಾಂತಿ ಕಾಪಾಡಿದ ಭಾರತೀಯರನ್ನು ಅತೀವ ಶ್ಲಾಘಿಸಿದ ಅವರು, ” ಅಯೋಧ್ಯಾ ವಿಷಯದಲ್ಲಿ ನ.9ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಈ ವೇಳೆ, 130 ಕೋಟಿ ಭಾರತೀಯರು ತಮಗೆ ದೇಶಭಕ್ತಿಗಿಂತ ಮಿಗಲಾದುದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ದೇಶದಲ್ಲಿ ಶಾಂತಿ, ಏಕತೆ ಮತ್ತು ಸದ್ಭಾವನೆಯ ಮೌಲ್ಯ ಎಲ್ಲದಕ್ಕಿಂತಲೂ ಮಿಗಿಲಾಗಿದೆ. ರಾಮ ಮಂದಿರದ ತೀರ್ಪುನ್ನು ಎಲ್ಲರೂ ಮುಕ್ತ ಮನಸ್ಸಿನೊಂದಿಗೆ ಒಪ್ಪಿಕೊಂಡರು. ಪೂರ್ಣ ಸಹಜತೆ ಮತ್ತು ಶಾಂತಿಯೊಂದಿಗೆ ಅದನ್ನು ಸ್ವೀಕಾರ ಮಾಡಿದರು. ಇಂದು, ‘ಮನ್ ಕೀ ಬಾತ್’ ವೇದಿಕೆಯ ಮೂಲಕ ನಾನು ದೇಶದ ಜನರಿಗೆ ಮನದಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಜನರು ಧೈರ್ಯ, ಸಂಯಮ ಮತ್ತು ಪ್ರಬುದ್ಧತೆಯನ್ನು ವ್ಯಕ್ತಪಡಿಸಿದ ರೀತಿಗೆ ನಾನು ಅಭಾರಿಯಾಗಿದ್ದೇನೆ” ಎಂದಿದ್ದಾರೆ.
ಸಂವಿಧಾನ ದಿನದ ಆಚರಣೆಯ ಬಗ್ಗೆ ಮಾಹಿತಿ ನೀಡಿದ ಅವರು, ” ನ.26 ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನವಾಗಿದೆ. ಅದರಲ್ಲೂ ನಮ್ಮ ಪ್ರಜಾಪ್ರಭುತ್ವಕ್ಕೆ ಮಹತ್ವಪೂರ್ಣ ದಿನವಾಗಿದೆ. ಯಾಕೆಂದರೆ, ಈ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲದೇ, ಈ ಬಾರಿಯ ‘ಸಂವಿಧಾನ ದಿನ’ ಇನ್ನಷ್ಟು ವಿಶೇಷವಾಗಿದೆ, ಯಾಕೆಂದರೆ ಅದು 70 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಸಂಸತ್ತಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗುತ್ತಿದೆ. ಅಲ್ಲದೇ, ವರ್ಷವಿಡೀ ದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬನ್ನಿ, ಈ ಸಂದರ್ಭದಲ್ಲಿ ಸಂವಿಧಾನ ಸಭೆಯ ಪ್ರತಿ ಸದಸ್ಯರಿಗೂ ಆದರಪೂರ್ವಕ ನಮನ ಸಲ್ಲಿಸೋಣ, ನಮ್ಮ ಶ್ರದ್ಧೆಯನ್ನು ಅರ್ಪಿಸೋಣ” ಎಂದಿದ್ದಾರೆ.
ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನದ ಬಗ್ಗೆ ಮಾತನಾಡಿದ ಅವರು, ” ಡಿಸೆಂಬರ್ 7ರಂದು ‘ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನ’ವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ, ನಾವು ನಮ್ಮ ವೀರ ಯೋಧರನ್ನು, ಅವರ ಪರಾಕ್ರಮ, ಬಲಿದಾನವನ್ನು ಸ್ಮರಿಸುತ್ತೇವೆ, ಕೊಡುಗೆಯನ್ನೂ ನೀಡುತ್ತೇವೆ.
ಬನ್ನಿ, ಈ ಸಂದರ್ಭದಲ್ಲಿ ನಮ್ಮ ಶಸ್ತ್ರಾಸ್ತ್ರ ಪಡೆಗಳ ಅದಮ್ಯ ಸಾಹಸ, ಶೌರ್ಯ ಮತ್ತು ಸಮರ್ಪಣಾ ಭಾವಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸೋಣ, ಯೋಧರನ್ನು ಸ್ಮರಿಸೋಣ” ಎಂದಿದ್ದಾರೆ.
ಪ್ಲಾಸ್ಟಿಕ್ ಮುಕ್ತಗೊಳಿಸಲು ಕರೆ ನೀಡಿದ ಅವರು, ” ನಾವು ಕೇವಲ ನಮ್ಮ ಸುತ್ತ ಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಮುಕ್ತಗೊಳಿಸುವ ಸಂಕಲ್ಪ ತೊಟ್ಟರೆ ಸಾಕು ‘ಪ್ಲಾಸ್ಟಿಕ್ ಮುಕ್ತ ಭಾರತ’ವನ್ನು ಇಡೀ ವಿಶ್ವದ ಮುಂದೆ ಪ್ಲಾಸ್ಟಿಕ್ ನಿರ್ಮೂಲನೆಗೆ ಒಂದು ದೊಡ್ಡ ಉದಾಹರಣೆಯಾಗಿ ಪ್ರಸ್ತುತಪಡಿಸಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.