ಇಸ್ಲಾಮಾಬಾದ್: ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿ ಯುವಕರಿಗೆ ಪಾಕಿಸ್ಥಾನದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ ಎಂಬ ಸತ್ಯವನ್ನು ಪಾಕಿಸ್ಥಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ರೀತಿ ತರಬೇತಿ ಪಡೆದ ಕಾಶ್ಮೀರಿಗಳಿಗೆ ಹೀರೋಗಳು ಎಂಬ ಪಟ್ಟವನ್ನು ನೀಡಲಾಗುತ್ತಿತ್ತು ಎಂದಿದ್ದಾರೆ.
ಒಸಾಮಾ ಬಿನ್ ಲಾಡೆನ್ ಮತ್ತು ಜಲಾಲುದ್ದೀನ್ ಹಕ್ಕಾನಿ ಅಂತಹ ಉಗ್ರರನ್ನು ಪಾಕಿಸ್ಥಾನದ ಹೀರೋಗಳು ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿಯೂ ಹೇಳಿದ್ದಾರೆ. ಈ ಮೂಲಕ ಪಾಕಿಸ್ಥಾನದ ನಿಜ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಮುಷರಫ್ ಅವರು ನೀಡಿದ ಸಂದರ್ಶನದ ತುಣುಕೊಂದನ್ನು ಪಾಕಿಸ್ಥಾನದ ರಾಜಕಾರಿಣಿ ಫರಹತ್ತುಲಹ ಬಾಬರ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ಇದರಲ್ಲಿ ಮುಷರಫ್ ಅವರು, “1979ರಲ್ಲಿ, ನಾವು ಪಾಕಿಸ್ಥಾನಕ್ಕೆ ಅನುಕೂಲವಾಗಲಿ ಎಂದು ಮತ್ತು ಸೋವಿಯತ್ ಅನ್ನು ರಾಷ್ಟ್ರದಿಂದ ಹೊರಹಾಕಲು ಅಪಘಾನಿಸ್ತಾನದಲ್ಲಿ ಧಾರ್ಮಿಕ ಉಗ್ರವಾದವನ್ನು ಪರಿಚಯಿಸಿದೆವು. ವಿಶ್ವದಾದ್ಯಂತದಿಂದ ಮುಜಾಹಿದ್ದೀನ್ ಉಗ್ರರನ್ನು ಕರೆತಂದು ಅವರಿಗೆ ತರಬೇತಿಯನ್ನು ನೀಡಿದೆವು, ಶಸ್ತ್ರಾಸ್ತ್ರಗಳನ್ನು ಪೂರೈಸಿದೆವು. ಅವರು ನಮ್ಮ ಹೀರೋಗಳು. ಹಕ್ಕಾನಿ, ಒಸಾಮಾ ಬಿನ್ ಲಾಡೆನ್ ನಮ್ಮ ಹೀರೋ. ಆಗ ಇಡೀ ಸನ್ನಿವೇಶವೇ ಭಿನ್ನವಾಗಿತ್ತು, ಈಗಿನ ಸನ್ನಿವೇಶ ಭಿನ್ನವಾಗಿದೆ. ಈಗ ಹೀರೋಗಳು ವಿಲನ್ಗಳಾಗಿ ಪರಿವರ್ತನೆಯಾಗಿದ್ದಾರೆ” ಎಂದಿದ್ದಾರೆ.
ಕಾಶ್ಮೀರದಲ್ಲಿನ ಅಸ್ಥಿರತೆ ಬಗ್ಗೆ ಮಾತನಾಡಿರುವ ಮುಷರಫ್, “ಪಾಕಿಸ್ಥಾನಕ್ಕೆ ಬರುವ ಕಾಶ್ಮೀರಿಗಳಿಗೆ ನಾವು ಹೀರೋಗಳ ರೀತಿಯ ಸ್ವಾಗತವನ್ನು ನೀಡಿದ್ದೇವೆ. ಅವರಿಗೆ ತರಬೇತಿಯನ್ನು ನೀಡಿದ್ದೇವೆ ಮತ್ತು ಬೆಂಬಲಿಸಿದ್ದೇವೆ. ನಾವು ಅವರನ್ನು ಭಾರತೀಯ ಸೇನೆ ವಿರುದ್ಧ ಹೋರಾಡುವ ಮುಜಾಹಿದ್ದೀನ್ ಗಳೆಂದು ಪರಿಗಣಿಸಿದ್ದೇವೆ. ಈ ಸಂದರ್ಭದಲ್ಲಿ ಲಷ್ಕರ್-ಇ-ತೋಯ್ಬಾದ ಅಂತಹ ಅನೇಕ ಭಯೋತ್ಪಾದನೆ ಸಂಘಟನೆಗಳು ಬೆಳೆದವು” ಎಂದಿದ್ದಾರೆ.
ಕಾಶ್ಮೀರದಲ್ಲಿ ಅಸ್ಥಿರತೆ ಉಂಟಾಗಲು ಪಾಕಿಸ್ಥಾನವೇ ಕಾರಣ ಎಂಬುದನ್ನು ಮುಷರಫ್ ಅವರ ಹೇಳಿಕೆಯೂ ಸ್ಪಷ್ಟಪಡಿಸಿದೆ. ಈ ಮೂಲಕ ಮತ್ತೊಮ್ಮೆ ಜಗತ್ತಿನ ಮುಂದೆ ಪಾಕಿಸ್ಥಾನದ ಕುತಂತ್ರ ಬಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.