ನವದೆಹಲಿ: ತಮಗೆ ದೊರೆತಿರುವ ನೂತನ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆಯ ಹಿರಿಯ ಜನರಲ್ ಒಬ್ಬರು ಸೈಕಲ್ ಮೂಲಕ ದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸಲಿದ್ದಾರೆ. ಸೇನೆಯ ವಿಮಾನ ಅಥವಾ ಕಾರನ್ನು ಬಳಕೆ ಮಾಡದೆ ಅವರು ಸೈಕಲ್ ಮೂಲಕ ಪ್ರಯಾಣಿಸಲು ನಿರ್ಧರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಲೆಫ್ಟಿನೆಂಟ್ ಜನರಲ್ ಅಲೋಕ್ ಕ್ಲೇರ್ ಅವರು ಸೌತ್ ವೆಸ್ಟರ್ನ್ ಕಮಾಂಡಿನ ಉಸ್ತುವಾರಿಯನ್ನು ತೆಗೆದುಕೊಳ್ಳುವ ಸಲುವಾಗಿ ಶನಿವಾರ ರಾತ್ರಿ ನವದೆಹಲಿಯಿಂದ ಜೈಪುರಕ್ಕೆ 270 ಕಿಮೀಗಳ ಸೈಕಲ್ ಪರ್ಯಟನೆಯನ್ನು ಕೈಗೊಳ್ಳುತ್ತಿದ್ದಾರೆ. ರಾಜಸ್ಥಾನದ ರಾಜಧಾನಿಯನ್ನು ತಲುಪಿದ ಬಳಿಕ ಅಲ್ಲಿ ಹೊಸ ಹುದ್ದೆಯ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಪ್ರಸ್ತುತ ಇವರು ಸೇನೆಯ ಮಿಲಿಟರಿ ತರಬೇತಿ ನಿರ್ದೇಶನಾಲಯದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅಶ್ವದಳದ ಅಧಿಕಾರಿಯಾಗಿರುವ ಲೆ.ಜ ಅಲೋಕ್ ತಮ್ಮ ಸೈಕ್ಲಿಂಗ್ ಸವಾರಿಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿ, “ಸೈಕ್ಲಿಂಗ್ ಕ್ಲಿಷ್ಟಕರವಾದ ಶ್ರಮದಾನ, ಆದರೆ ನನಗೆ ಅದರ ಬಗ್ಗೆ ಅಪಾರ ಆಸಕ್ತಿಯಿದೆ. ಫಿಟ್ನೆಸ್ ವೈಯಕ್ತಿಕ ಉದ್ದೇಶವಾಗಿರಬೇಕು ಮತ್ತು ಸಂಸ್ಥೆಯಿಂದ ಹೇರಲ್ಪಡಬಾರದು ಎಂಬುದು ನನ್ನ ನಂಬಿಕೆ. ನನ್ನ ಕಾರ್ಯವು ನನ್ನ ಅಧೀನದಲ್ಲಿರುವ ಸಿಬ್ಬಂದಿಗಳಿಗೆ ಮತ್ತು ಇತರರಿಗೆ ಫಿಟ್ನೆಸ್ನ ಸಂದೇಶವನ್ನು ಕಳುಹಿಸುತ್ತದೆ ”ಎಂದಿದ್ದಾರೆ.
ಅಲೋಕ್ ಅವರ ಸೈಕ್ಲಿಂಗ್ ಸವಾರಿಯಲ್ಲಿ ಅವರ ಮಕ್ಕಳಾದ ಐಮನ್ ಮತ್ತು ಅರ್ಮಾನ್ ಸಾಥ್ ನೀಡಲಿದ್ದಾರೆ. ತಂದೆಯ ಜೊತೆ ಅವರೂ ಸೈಕ್ಲಿಂಗ್ ಮಾಡಲು ನಿರ್ಧರಿಸಿದ್ದಾರೆ.
“ಸೇನೆಯ ಯಾವುದೇ ಕಮಾಂಡರ್ ತನ್ನ ಹುದ್ದೆಯ ಉಸ್ತುವಾರಿ ವಹಿಸಿಕೊಳ್ಳಲು ಸೈಕಲ್ನಲ್ಲಿ ಪ್ರಯಾಣಿಸಿದ ಬಗ್ಗೆ ನಾನು ಇದುವರೆಗೆ ನೋಡಿಲ್ಲ. ಆದರೆ ಅಲೋಕ್ ಈ ಕೆಲಸ ಮಾಡುತ್ತಿದ್ದಾರೆ. ಇದು ಕಿರಿಯ ಅಧಿಕಾರಿಗಳಿಗೆ ಇದು ಸ್ಪೂರ್ತಿದಾಯಕವಾಗಿದೆ” ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.