
ತಲೆಮಾರುಗಳಿಂದ ನಮ್ಮ ಪಠ್ಯಪುಸ್ತಕಗಳಲ್ಲಿ ಅಕ್ಬರ್ನನ್ನು “ಅಕ್ಬರ್ ಗ್ರೇಟ್” ಎಂದು ವೈಭವೀಕರಿಸಲಾಗುತ್ತಿದೆ. ಸಹಿಷ್ಣುತೆಯ ಪ್ರತೀಕ, ಪ್ರಬುದ್ಧ ಚಕ್ರವರ್ತಿ ಎಂದು ಆತನನ್ನು ಚಿತ್ರಿಸಲಾಗುತ್ತದೆ. ಆದರೆ ಇತಿಹಾಸಕಾರರಿಂದ ಶಬ್ಬಾಸ್ಗಿರಿ ಪಡೆದ ಈ ಚಕ್ರವರ್ತಿಯ ಹಿಂದೆ ಇರುವುದು ಹತ್ಯಾಕಾಂಡ, ದೇವಾಲಯಗಳ ನಾಶ, ಮತ್ತು ಭಯೋತ್ಪಾದನೆಯ ಮೂಲಕ ಸಾಮ್ರಾಜ್ಯವನ್ನು ವಿಸ್ತರಿಸಿದ ಕರಾಳ ಅಧ್ಯಾಯಗಳು. ಅಕ್ಬರ್ ಆಳ್ವಿಕೆಯ ಅತ್ಯಂತ ಕರಾಳ ಪ್ರಸಂಗಗಳಲ್ಲಿ 1567–1568ರಲ್ಲಿ ನಡೆದ ಚಿತ್ತೋರ್ಗಢದ ಮುತ್ತಿಗೆಯೂ ಒಂದು.
ಅಕ್ಬರ್ನ ಬೃಹತ್ ಮೊಘಲ್ ಸೈನ್ಯವು ರಜಪೂತರ ಹೃದಯಭೂಮಿಯಾದ ಚಿತ್ತೋರ್ ಕೋಟೆಯನ್ನು ಸುತ್ತುವರೆಯಿತು. ಭಾರೀ ಫಿರಂಗಿಗಳು, ಯುದ್ಧ ಆನೆಗಳು ಮತ್ತು ಸಾವಿರಾರು ಸೈನಿಕರೊಂದಿಗೆ ಅವನು ದಾಳಿ ಮಾಡಿದ. ಆದರೆ ರಜಪೂತರು ತಮ್ಮ ತಾಯ್ನಾಡು, ಗೌರವ ಮತ್ತು ಸ್ವಾಭಿಮಾನಕ್ಕಾಗಿ ಅಪ್ರತಿಮ ಧೈರ್ಯದಿಂದ ಹೋರಾಡಿದರು.
ಯುದ್ಧ ತೀವ್ರಗೊಂಡಂತೆ ಸುಮಾರು 8,000 ರಜಪೂತ ಯೋಧರು ಕೋಟೆಯ ರಕ್ಷಣೆಗಾಗಿ ಪ್ರಾಣ ಬಿಟ್ಟರು. ಮಹಿಳೆಯರು ಮೊಘಲರ ಕೈಗೆ ಸಿಕ್ಕು ಅವಮಾನ ಅನುಭವಿಸುವುದಕ್ಕಿಂತ ಮರಣವನ್ನು ಆರಿಸಿಕೊಂಡರು. ಜೌಹರ್ ನಡೆಯಿತು. 300ಕ್ಕೂ ಹೆಚ್ಚು ಜೌಹರ್ ಹೊಂಡಗಳು ಧಗಧಗಿಸಿದವು. ರಜಪೂತ ಮಹಿಳೆಯರು ತಮ್ಮ ಗೌರವವನ್ನು ಕಾಪಾಡಿಕೊಳ್ಳಲು ಬೆಂಕಿಯನ್ನು ಆಶ್ರಯಿಸಿದರು.
ಅಕ್ಬರ್ನ ಆದೇಶದಂತೆ ಸತ್ತ ರಜಪೂತ ಯೋಧರ ಕತ್ತರಿಸಿದ ತಲೆಗಳನ್ನು ಗೋಪುರಗಳ ಮೇಲೆ ರಾಶಿ ಹಾಕಲಾಯಿತು — ಭಯೋತ್ಪಾದನೆಯ ಸ್ಪಷ್ಟ ಸಂದೇಶ ಇದಾಗಿತ್ತು. ಮೊಘಲ್ ಸೈನಿಕರು ಸತ್ತ ಹಿಂದೂಗಳ ಶವಗಳಿಂದ ಜನಿವಾರಗಳನ್ನು ಕತ್ತರಿಸಿ ಸಂಗ್ರಹಿಸಿದರು. ಇದರ ತೂಕ ಸುಮಾರು 40 ಕಿಲೋಗ್ರಾಂ ಇತ್ತು ಎಂಬ ದಾಖಲೆಗಳಿವೆ.
ಅಕ್ಬರ್ನ ಸ್ವಂತ ಆಸ್ಥಾನದ ಇತಿಹಾಸಕಾರ ಅಬುಲ್ ಫಜಲ್ ಸಹ ಈ ದಾಳಿಯ ಕ್ರೌರ್ಯವನ್ನು ವಿವರಿಸಿದ್ದಾನೆ. ಯುದ್ಧ ಆನೆಗಳ ಸೊಂಡಿಲುಗಳಿಗೆ ಬ್ಲೇಡ್ಗಳನ್ನು ಕಟ್ಟಿ, ಕೋಟೆಯೊಳಗೆ ಆಶ್ರಯ ಪಡೆದಿದ್ದ 30,000ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆಗೈಯಲಾಗಿತ್ತು.
ಏಕಾಂಗಿ ವೀರ: ಇಸಾರ್ ದಾಸ್ ಚೌಹಾಣ್
ಕೋಟೆ ಸಂಪೂರ್ಣವಾಗಿ ಮೌನವಾಗುತ್ತಿದ್ದಂತೆ, ಹೊಗೆ ಮತ್ತು ಅವಶೇಷಗಳ ನಡುವಿನಿಂದ ಒಬ್ಬ ಏಕಾಂಗಿ ರಜಪೂತ ಯೋಧ ಹೊರಬಂದ. ಅವನೇ ಇಸಾರ್ ದಾಸ್ ಚೌಹಾಣ್.
ಅವನ ರಕ್ಷಾಕವಚ ಛಿದ್ರವಾಗಿತ್ತು. ದೇಹವೆಲ್ಲಾ ರಕ್ತ, ಬೂದಿ ಮತ್ತು ಧೂಳಿನಿಂದ ಆವೃತವಾಗಿತ್ತು. ಆದರೂ ಅವನ ಕಣ್ಣುಗಳಲ್ಲಿ ಉಗ್ರ ದೃಢನಿಶ್ಚಯ ಕಾಣುತ್ತಿತ್ತು. ಚಿತ್ತೋರ್ನಲ್ಲಿ ಉರಿಯುತ್ತಿರುವ ಮನೆಗಳು, ಜೌಹರ್ನ ಹೊಗೆ ಮತ್ತು ಸತ್ತ ಸಹೋದರರನ್ನು ನೋಡಿದ ನಂತರವೂ ಅವನು ಶರಣಾಗಲು ನಿರಾಕರಿಸಿದನು.
ಅಕ್ಬರ್ನ ದೈತ್ಯ ಯುದ್ಧ ಆನೆ ಮಧುಕರ್ನತ್ತ ಅವನು ಏಕಾಂಗಿಯಾಗಿ ದಾಳಿ ಮಾಡಿದ. ಆನೆಯ ದಂತವನ್ನು ಹಿಡಿದು ಮೇಲಕ್ಕೆ ಎಳೆದು, ಕಠಾರಿಯನ್ನು ಆಳವಾಗಿ ಚುಚ್ಚಿದನು. ನಂತರ ಮಾವುತನತ್ತ ನೋಡಿ ಅವನು ಹೇಳಿದ ಮಾತು ಇಂದಿಗೂ ಗುಂಗುಣಿಸುತ್ತದೆ: “ಜಗತ್ತನ್ನು ಅಲಂಕರಿಸುವ ನಿನ್ನ ಅರ್ಹತೆಯನ್ನು ಮೆಚ್ಚುವವನಿಗೆ ನನ್ನ ಗೌರವಗಳನ್ನು ತಿಳಿಸು.”
ಅನಂತರ ಮೊಘಲ್ ಸೈನ್ಯ ಅವನನ್ನು ಸುತ್ತುವರೆಯಿತು. ಇಸಾರ್ ದಾಸ್ ಒಬ್ಬನೇ ಹೋರಾಡಿದ. ಹಲವಾರು ಮೊಘಲ್ ಸೈನಿಕರನ್ನು ಕೆಳಗುರುಳಿಸಿದ ನಂತರ, ಅಪಾರ ಸಂಖ್ಯೆಯ ಶತ್ರುಗಳ ಈಟಿ ಮತ್ತು ಕತ್ತಿಗಳಿಗೆ ಬಲಿಯಾದ. ಆದರೆ ಅವನು ಎಂದಿಗೂ ತಲೆ ಬಗ್ಗಿಸಲಿಲ್ಲ.
ಚಿತ್ತೋರ್ಗಢದ ನಿಜವಾದ ಶ್ರೇಷ್ಠತೆ ಅಕ್ಬರ್ ಅಥವಾ ಮೊಘಲ್ ಸಾಮ್ರಾಜ್ಯಕ್ಕೆ ಸೇರಿಲ್ಲ. ಅದು ತನ್ನ ಗೌರವಕ್ಕಾಗಿ ಜೌಹರ್ ಮಾಡಿದ ಮಹಿಳೆಯರಿಗೆ, ಕೊನೆಯವರೆಗೂ ಹೋರಾಡಿದ ರಜಪೂತ ಯೋಧರಿಗೆ ಮತ್ತು ಏಕಾಂಗಿಯಾಗಿ ಅಕ್ಬರ್ನ ಆನೆಯ ಮುಂದೆ ನಿಂತ ಇಸಾರ್ ದಾಸ್ ಚೌಹಾಣ್ ಅವರಂತಹ ವೀರರಿಗೆ ಸೇರಿದೆ. ಶರಣಾಗತಿಗಿಂತ ಮರಣವನ್ನು, ಅವಮಾನಕ್ಕಿಂತ ತ್ಯಾಗವನ್ನು ಆರಿಸಿಕೊಂಡವರೇ ನಿಜವಾದ ವೀರರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



