ಗದಗ : ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಾಯರಿ ಕವಿ ಈರಣ್ಣ ಇಟಗಿ ನುಡಿದರು.
ಲಕ್ಕುಂಡಿ ಉತ್ಸವ-2017ರ ಕವಿ ಗೋಷ್ಠಿಯನ್ನು ಅಜಗಣ್ಣ-ಮುಕ್ತಾಯಕ್ಕ ಸಮಾನಾಂತರ ವೇದಿಕಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಇಂದು ಹಲವಾರು ರಂಗಗಳ ಮಾಫಿಯಾಗಳಿಂದ ಸುತ್ತುವರೆದಿದೆ. ಮಾನವನನ್ನು ಇವುಗಳಿಂದ ಹೊರತರುವ ಶಕ್ತಿ ಕವಿ ಹೃದಯಕ್ಕೆ ಅವರ ಸೃಷ್ಠಿಗೆ ಸಾಧ್ಯವಿದೆ. ಮೂರೇ ಮೂರು ಅಕ್ಷರಗಳ ಕವಿತೆ ಇಡೀ ವಿಶ್ವವನ್ನೇ ಆವರಿಸುವ ಪ್ರಭಾವಳಿ ಹೊಂದಿದೆ. ಅತ್ಯಂತ ಕಡಿಮೆ ಪದಗಳಲ್ಲಿ ಬಹುದೊಡ್ಡ ಅರ್ಥ ಮೂಡಿಸುವದೇ ಕಾವ್ಯದ ಮುಖ್ಯ ಗುಣ ಎನ್ನುವುದನ್ನು ತಮ್ಮ ಶಾಯರಿಗಳ ಝಲಕುಗಳ ಮೂಲಕ ಈರಣ್ಣ ಇಟಗಿ ವಿವರಿಸಿದ್ದು ವಿಶೇಷವಾಗಿತ್ತು.
ಮಂಜುನಾಥ ಬಮ್ಮನಕಟ್ಟಿ ತಮ್ಮ ಆಶಯದ ನುಡಿಗಳಲ್ಲಿ ಇಡೀ ನಾಡಿನ ಚಿಂತನೆಗಳನ್ನು ಒರೆಗೆ ಹಚ್ಚುವ ಶಕ್ತಿ ಕಾವ್ಯಕ್ಕಿದೆ. ಕಾಲ ಕಾಲಕ್ಕೆ ಬದಲಾಗುವ ಕವಿತೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣದ ಪ್ರತಿಕ್ರಿಯೆ ಪ್ರಕಾರವಾಗಿ ಬದಲಾಗುತ್ತಿರುವದು ಉತ್ತಮ ಬೆಳವಣಿಗೆ ಅಲ್ಲ. ಧ್ಯಾನಸ್ಥ ಮನಸ್ಸಿನಲ್ಲಿ ಒಡಮೂಡುವ ಅದ್ಭುತ ವಿಷಯಗಳ ಕನ್ನಡಿಯೇ ಕಾವ್ಯ ಅದು ಅವಸರಕ್ಕೆ ದೊರೆಯುವುದಲ್ಲ. ನಮ್ಮ ಕಾವ್ಯ ಪರಂಪರೆಯನ್ನು ಅರಿಯದೇ ಜನಮನಸದ ಕವಿಗಳಾಗಿ ಬೆಳೆಯಲು ಸಾಧ್ಯವಿಲ್ಲವೆಂದರು.
ಕವಿ ಗೋಷ್ಠಿಯಲ್ಲಿ ಬಾಳು ಬದುಕಿನ ಹತ್ತು ಹಲವಾರು ಸಂಗತಿಗಳು ಆಧ್ಯಾತ್ಮದ ಸಾಧನೆ, ಸಂಸಾರ ವಿಷಯಗಳ ಕಷ್ಟ ಸುಖ, ಪ್ರೇಮಿಗಳ ಬಿಸಿ ಉಸಿರುಗಳ ಕವಿತೆ ಒಂದೆಡೆಯಾದರೆ ಹಡೆದ ತಾಯಿಯ ಸಂಕಷ್ಟದ ಜೀವನ ಜೊತೆಗೆ ಪರಿಸರ, ಮಹಾದಾಯಿ ಹೋರಾಟ, ಕಪ್ಪತಗುಡ್ಡ ರಕ್ಷಣೆ ಮುಂತಾದ ಸಾಮಾಜಿಕ ಜ್ವಲಂತ ಸಮಸ್ಯೆಗಳ ಕುರಿತ ಕವನಗಳು ವಾಚಿಸಲ್ಪಟ್ಟವು.
ಶಿಲ್ಪ ಮಲ್ಲಿಗೆಯಾಗಿ ಅರಳಿದ ಹೊತ್ತಿನ ಎನ್ನ ಧರ್ಮದೇವತೆ ಕವನ ವಾಚಿಸಿದ ನೀಲಕಂಠ ಮರಡಿ, ದೊಡಮನಿಯವರ ನನ್ನವ್ವ, ಈರಪ್ಪ ಮಾದರ ಅವರ ವೈಶಾಖದ ಹೆಣ್ಣು, ಡಾ. ಗಿರಿಜಾ ಅವರ ಪರಿಪೂರ್ಣತೆ ಗಮನಸೆಳೆದವು.
ನಾಗರಾಜ ಗುಡೇದ, ಶಂಕರ ಕುಕನೂರ, ಸಿದ್ದು ಶೆಟ್ಟಣ್ಣವರ, ವಿವೇಕಾನಂದ ಪಾಟೀಲ, ಎ.ಎಸ್.ಮಕಾನದಾರ, ಕಳಕೇರಿ, ಶ್ರೀಮತಿ ವೆಂಕಟೇಶಯ್ಯ, ಲಕ್ಷ್ಮೀ ದೇವಿ ಗವಾಯಿ, ಬಸವಾರಜ ಯಲದೇರಿ, ಎಂ.ಬಿ.ಮಾದರ, ಹಾಗೂ ಡಾ. ಎಚ್.ಡಿ.ಪೂಜಾರ ಸ್ವರಚಿತ ಕವನ ವಾಚಿಸಿದರು.
ಅಲ್ಲಮಪ್ರಭು ಬೆಟ್ಟದೂರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಡಾ.ನಿಂಗೂ ಸೊಲಗಿ ಸ್ವಾಗತಿಸಿದರು. ಡಾ. ಶೇಖರ ಲದ್ವಾ ವಂದಿಸಿದರು. ಪ್ರಕಾಶ ಮಂಗಳೂರ ನಿರೂಪಿಸಿದರು. ಸುಷ್ಮಾ ಚೆಟ್ಟ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.