
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೀ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದಿರುವ ಭದ್ರತಾ ಲೋಪದ ಬಗ್ಗೆ ಎನ್ಐಎ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಬಂದಾಗ ಕಾಂಗ್ರೆಸ್ ಸರ್ಕಾರ ಸರಿಯಾದ ಭದ್ರತೆ ನೀಡದೆ ಲೋಪ ಎಸಗಿದೆ. ಮೋದಿ ಜೀ ಅವರು ವಿಶ್ವದೆಲ್ಲೆಡೆ ಹೋದರೆ ಸರಿಯಾದ ಭದ್ರತೆಯನ್ನು ನೀಡಲಾಗುತ್ತದೆ. ಅಂತಹುದರಲ್ಲಿ ರಾಜ್ಯಕ್ಕೆ ಬಂದಾಗ ಭದ್ರತಾ ವ್ಯವಸ್ಥೆ ಸರಿ ಇರಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಮೋದಿ ಜೀ ಅವರು ಕೇವಲ ಬಿಜೆಪಿಯವರಿಗೆ ಮಾತ್ರವೇ ಪ್ರಧಾನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಈ.ಪರಮೇಶ್ವರ್ ಅವರು ತಿಳಿದಂತಿದೆ. ಅವರು ದೇಶದ ಪ್ರಧಾನಿ. ಅವರ ಭದ್ರತೆಗೆ ಎಲ್ಲಾ ಕಡೆ ಆತಂಕ ಇರುತ್ತದೆ. ಆದರೆ ಇದನ್ನು ಸರ್ಕಾರ ತಿಳಿದಿಲ್ಲ ಎಂದರು.
ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ನೂರು ಮಂದಿ ಇನ್ಸ್ಪೆಕ್ಟರ್ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದಕ್ಕೆ ಅಂತಹ ತುರ್ತು ಏನಿತ್ತು. ಪ್ರಧಾನಿಯವರು ಸಾಗುವ ನಿಗದಿತ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು ಎಂದರು.
ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಅದರಿಂದಲೇ ಕಾಂಗ್ರೆಸ್ನವರಿಗೆ ಕೋಪ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ಮೇಲೆ ಕಾಳಜಿ ಹಾಗೂ ಗೌರವ ಇಲ್ಲ ಎಂದು ದೂರಿದರು.
ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತ ಬಳಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಹರಿಪ್ರಸಾದ್, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆ ನೋಡಿದ್ದೇನೆ. ಈ ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಹಣಕಾಸು ಸಚಿವ ಚಿದಂಬರಂ ಅವರ ಹೇಳಿಕೆಯನ್ನು ಇವರೆಲ್ಲ ನೆನಪು ಮಾಡಿಕೊಳ್ಳಬೇಕು ಎಂದರು.
ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದ ದೇಶದಲ್ಲಿ ಕಷ್ಟದ ಪರಿಸ್ಥಿತಿ ಇದೆ. ಪೆಟ್ರೋಲ್, ಡೀಸೆಲ್ ಅನ್ನು ಮಿತವಾಗಿ ಬಳಸಿ ಎಂದು ಹೇಳಿದ್ದಾರೆ. ಇವುಗಳನ್ನು ಆಮದು ಮಾಡಿಕೊಳ್ಳಲು ತೊಂದರೆ ಇದೆ. ಆದ್ದರಿಂದ ಬಳಕೆಗೆ ಮಿತಿ ಇರಲಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇದು ಬಿಟ್ಟರೆ ಬೇರೆ ಉದ್ದೇಶ ಇಲ್ಲ ಎಂದು ಹೇಳಿದರು. ಚಿದಂಬರಂ ಅವರ ಹೇಳಿಕೆಗಳನ್ನು ಮರೆತ ಕಾಂಗ್ರೆಸ್ ಅನ್ನು ದೇಶದ ಜನರು ಮರೆಯುತ್ತಾರೆ. ಕಾಂಗ್ರೆಸ್ನವರಿಗೆ ಬುದ್ಧಿ ಕಡಿಮೆ ಎಂದರು.
ಮೋದಿ ಅವರಿಂದಾಗಿ ಇಡೀ ವಿಶ್ವದಲೇ ಭಾರತಕ್ಕೆ ಗೌರವ ಸಿಕ್ಕುತ್ತಿದೆ; ಎಷ್ಟೋ ವರ್ಷಗಳ ನಂತರ ಈ ಗೌರವ ಸಿಗುತ್ತಿದೆ. ಮೇಕ್ ಇನ್ ಇಂಡಿಯಾಗೆ ಆದ್ಯತೆ ಸಿಗಬೇಕು, ಜನರಲ್ಲಿ ಜಾಗೃತಿ ಮೂಡಬೇಕು ಎಂದು ಪ್ರಧಾನಿ ಅವರು ಮಿತ ಬಳಕೆಗೆ ಸಲಹೆ ನೀಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಜಿಡಿಪಿ ಹೆಚ್ಚಿದೆ. ಇದನ್ನೆಲ್ಲ ತಿಳಿಯದೇ ಕಾಂಗ್ರೆಸ್ನವರು ಮನಸಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


