ಮುಂಬಯಿ: ಖಾದ್ಯ ತೈಲ ಆಮದುಗಳನ್ನು ಕಡಿಮೆ ಮಾಡಲು ಮತ್ತು ದೇಶವನ್ನು ‘ಆತ್ಮನಿರ್ಭರ’ ಮಾಡಲು ಕೃಷಿ ಕ್ಷೇತ್ರವು ಎಣ್ಣೆಬೀಜ ಉತ್ಪಾದನೆಯತ್ತ ಮುಖ ಮಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಮಹಾರಾಷ್ಟ್ರದಲ್ಲಿ ಕೃಷಿಗೆ ಮೀಸಲಾದ ಸಕಾಲ ಮಾಧ್ಯಮ ಸಮೂಹದ ಪ್ರಕಟಣೆಯಾದ ಅಗ್ರೋವನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
”ಖಾದ್ಯ ತೈಲ ಆಮದು ಮಾಡಿಕೊಳ್ಳಲು ನಾವು ಪ್ರತಿ ವರ್ಷ 1.5 ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತೇವೆ. ಆಮದು ಮಾಡಿಕೊಳ್ಳುವ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಕೃಷಿ ಆದಾಯವನ್ನು ಹೆಚ್ಚಿಸಲು ಕೃಷಿ ಕ್ಷೇತ್ರವು ಈಗ ಎಣ್ಣೆಬೀಜಗಳ ಉತ್ಪಾದನೆಯತ್ತ ಮುಖ ಮಾಡಬೇಕಾಗಿದೆ” ಎಂದು ಗಡ್ಕರಿ ಹೇಳಿಕೆಯನ್ನು ಉಲ್ಲೇಖಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಗಾಗಿ ಪ್ರಸ್ತುತದ ಶೇ.12ರ ಬದಲಾಗಿ ಕೃಷಿ ಬೆಳವಣಿಗೆ ಶೇ.20ರಷ್ಟಾಗಬೇಕಿದೆ ಎಂದರು.
”ಭಾರತ ವಾರ್ಷಿಕವಾಗಿ 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಕೇವಲ 5 ಲಕ್ಷ ಕೋಟಿ ರೂ.ಗಳನ್ನು ಕೃಷಿ ಕ್ಷೇತ್ರಕ್ಕೆ ಹರಿಸಿದರೆ, ನಮ್ಮ ರೈತರು ಉರ್ಜಾದಾತ (ಇಂಧನ ಪೂರೈಕೆದಾರರು) ಮತ್ತು ಅನ್ನದಾತ (ಆಹಾರ ಪೂರೈಕೆದಾರರು) ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ,” ಎಂದು ಅವರು ಹೇಳಿದರು.
ದೇಶದ ಸಕ್ಕರೆಯ ಅವಶ್ಯಕತೆ 280 ಲಕ್ಷ ಟನ್ ಆದರೆ ಸಕ್ಕರೆ ಉತ್ಪಾದನೆ 360 ಲಕ್ಷ ಟನ್ ಮೀರಿದೆ ಎಂದು ಸಚಿವರು ಹೇಳಿದರು. ಎಥೆನಾಲ್ಗೆ ಬೇಡಿಕೆ ತುಂಬಾ ಹೆಚ್ಚಿದೆ ಎಂದು ಪ್ರತಿಪಾದಿಸಿದ ಗಡ್ಕರಿ, ಸಕ್ಕರೆಗಿಂತ ಎಥೆನಾಲ್ ಉತ್ಪಾದನೆಯತ್ತ ಗಮನ ಹರಿಸುವುದು ಉತ್ತಮ ಎಂದು ಹೇಳಿದರು.
”ಕಳೆದ ವರ್ಷ ಭಾರತದ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 400 ಕೋಟಿ ಲೀಟರ್ ಆಗಿತ್ತು. ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಬಯೋಇಥೆನಾಲ್ನಿಂದ ಕಾರ್ಯನಿರ್ವಹಿಸುವ ವಿದ್ಯುತ್ ಉತ್ಪಾದಕಗಳಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಥೆನಾಲ್ನ ಬೇಡಿಕೆಯನ್ನು ಪೂರೈಸಲು ಯೋಜನೆ ರೂಪಿಸುವ ಸಮಯ ಇದೀಗ ಬಂದಿದೆ” ಎಂದು ಅವರು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.