ನವದೆಹಲಿ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಬದಲಿಗೆ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಶಿವಸೇನೆಯ ಹಲವು ಸಂಸದರು ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ ಒಂದು ದಿನದ ನಂತರ, ಶಿವಸೇನೆ ಇಂದು ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ಮುರ್ಮು ಅವರನ್ನು ಬೆಂಬಲಿಸಿದ್ದೇವೆ ಎಂದರೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎಂದರ್ಥವಲ್ಲ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸ್ಪಷ್ಟಪಡಿಸಿದೆ.
ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಮಾತನಾಡಿ, “ಶಿವಸೇನೆಯು ತನಗೆ ಸರಿ ಎನಿಸಿದ್ದನ್ನು ಮಾಡುತ್ತದೆ. ಈ ಹಿಂದೆಯೂ ನಾವು ಕಾಂಗ್ರೆಸ್ ಅಭ್ಯರ್ಥಿ ಟಿ ಎನ್ ಶೇಷನ್ ಮತ್ತು ಯುಪಿಎ ಅಭ್ಯರ್ಥಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರಿಗೆ ಬೆಂಬಲ ನೀಡಿದ್ದೇವೆ. ರಾಜಕೀಯವನ್ನು ಮೀರಿದ ಸಂಪ್ರದಾಯವನ್ನು ಶಿವಸೇನೆ ಹೊಂದಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಜನರನ್ನು ಬೆಂಬಲಿಸುವಲ್ಲಿ ನಾವು ನಂಬುತ್ತೇವೆ” ಎಂದಿದ್ದಾರೆ.
“ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗುವ ಸಾಧ್ಯತೆಯಿರುವ ಮೊದಲ ಬುಡಕಟ್ಟು ಮಹಿಳೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ಬುಡಕಟ್ಟು ಜನಸಂಖ್ಯೆ ಇದೆ. ಬುಡಕಟ್ಟು ಪ್ರದೇಶಗಳಿಂದ ಬರುವ ಶಿವಸೈನಿಕರು ಬಹಳಷ್ಟು ಇದ್ದಾರೆ. ಶಾಸಕರೂ ಇದ್ದಾರೆ. ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರವು ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂದರ್ಥವಲ್ಲ” ಎಂದಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಉದ್ಧವ್ ಠಾಕ್ರೆ ಅವರು ತಮ್ಮ ಮುಂಬೈ ನಿವಾಸ ಮಾತೋಶ್ರೀಯಲ್ಲಿ ಕರೆದ ಸಭೆಯಲ್ಲಿ, ಶಿವಸೇನೆಯ ಹದಿನಾರು ಸಂಸದರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಒತ್ತಾಯಿಸಿದ್ದರು.
ಲೋಕಸಭೆಯಲ್ಲಿ ಪಕ್ಷವು 19 ಸಂಸದರನ್ನು ಹೊಂದಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.