ಬೆಂಗಳೂರು: ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಿದರೆ, ರಾಜ್ಯ ಸರಕಾರವು ಅದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರದಿಂದ 7,103 ಕೋಟಿ ಮತ್ತು ರಾಜ್ಯದಿಂದ 2,849 ಕೋಟಿ ರೂಪಾಯಿ ವಿತರಣೆಯಾಗಿದೆ. ಶೇ 97ರಷ್ಟು ರೈತರ ಖಾತೆಗಳು ಆಧಾರ್ ಲಿಂಕ್ ಆಗಿದ್ದು, ನೇರ ವರ್ಗಾವಣೆ (ಡಿಬಿಟಿ) ಸಾಧ್ಯವಾಗಿದೆ. ಈ ಚಟುವಟಿಕೆಗೆ 2020- 21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ ಲಭಿಸಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಶೇಕಡಾ 1.5 ರಷ್ಟು ಮಾರುಕಟ್ಟೆ ಶುಲ್ಕ ವಿಧಿಸುತ್ತಿದ್ದವು. ಅದನ್ನು ಶೇಕಡಾ 0.60ಗೆ ಇಳಿಸಲಾಗಿದೆ. 2020ರ ಜನವರಿ 31ಕ್ಕೆ ಇದ್ದ ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದರಿಂದ 55,546 ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಜಲ ಸಂಪನ್ಮೂಲ ಇಲಾಖೆಯಲ್ಲಿ ಕಳೆದ 2 ವರ್ಷಗಳಲ್ಲಿ ಭಾರಿ ಮತ್ತು ಮಧ್ಯಮ ನೀರಾವರಿಗೆ ರಾಜ್ಯದಲ್ಲಿ 33,465 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರಿಂದ 61,147 ಹೆಕ್ಟೇರ್ ಹೆಚ್ಚು ಜಮೀನು ನೀರಾವರಿಗೆ ಒಳಪಟ್ಟಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ 1201.52 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯತ್ಗಳಲ್ಲಿ 39,703 ಚದರ ಕಿಮೀ ಪ್ರದೇಶದಲ್ಲಿ ನೀರಾವರಿ ಯೋಜನೆ ಕಾರ್ಯಾನುಷ್ಠಾನ ಮಾಡಲಾಗಿದೆ ಎಂದು ವಿವರಿಸಿದರು.
ಕೋವಿಡ್ ಬಂದು ಶಾಲಾ ಕಾಲೇಜು ಬಂದ್ ಆಗಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಇತರ ಸೇವಾ ಸೌಲಭ್ಯಕ್ಕೆ ಸಂಬಂಧಿಸಿ ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಶಿಕ್ಷಕರ ಕಚೇರಿ ಅಲೆದಾಟ ತಪ್ಪಿಸಲಾಗಿದೆ. 100 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ತಲಾ 2 ಕೋಟಿಯಂತೆ 200 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇವೆ ಎಂದರು. ಎಲ್ಲ ಸಮಸ್ಯೆಗಳ ನಡುವೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಣಾಮಕಾರಿ ಅನುಷ್ಠಾನ ಮಾಡಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆದಿದೆ. ಕಾಲೇಜುಗಳ 2,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ರೂಂ ಆಗಿ ಪರಿವರ್ತಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಆನ್ಲೈನ್ ಕಲಿಕೆಗೆ ಪೂರಕವಾಗಿ 2.65 ಲಕ್ಷ ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ ಕೊಡಲಾಗಿದೆ. ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರಕಾರಿ ಐಟಿಐಗಳನ್ನು ಉನ್ನತೀಕರಣಕ್ಕೆ 4,636 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳ ಅತ್ಯಂತ ಪ್ರಮುಖ ಯೋಜನೆ ಸ್ವನಿಧಿಯಡಿ ರಾಜ್ಯದಲ್ಲಿ 1.11 ಲಕ್ಷ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರದಂತೆ ಸಾಲ ಸೌಲಭ್ಯ ಕೊಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ 2.22 ಲಕ್ಷ ಮನೆಗಳನ್ನು ಈವರೆಗೆ ನಿರ್ಮಿಸಲಾಗಿದೆ. 1,821 ಘೋಷಿತ ಕೊಳಚೆ ಪ್ರದೇಶಗಳಲ್ಲಿ 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳಡಿ ಕಳೆದ 2 ವರ್ಷಗಳಲ್ಲಿ 10.5 ಲಕ್ಷ ರೋಗಿಗಳಿಗೆ 1,849.64 ಕೋಟಿ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿಯಲ್ಲಿ ಒಟ್ಟು 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ತಂದೆತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಕುಟುಂಬಗಳ 18 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಬೆಳವಣಿಗೆಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂಪಾಯಿ ನೀಡಲಾಗುತ್ತಿದೆ. ಹೆಣ್ಣುಮಗುವಿಗೆ 21 ವರ್ಷದ ಬಳಿಕ ಉನ್ನತ ಶಿಕ್ಷಣ, ವಿವಾಹಕ್ಕೆ ಸಂಬಂಧಿಸಿ 1 ಲಕ್ಷ ರೂಪಾಯಿ ನೆರವು ನೀಡಲಾಗಿದೆ ಎಂದರು.
ಬಂಡವಾಳ ಆಕರ್ಷಣೆಯಲ್ಲಿ 2020ರಲ್ಲಿ ರಾಜ್ಯವು ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. 1.62 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗಿವೆ. ಏಪ್ರಿಲ್ ಮೇ ತಿಂಗಳಿನಲ್ಲಿ 17,718 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಿದೆ. ಇದರಿಂದ 19,729 ಉದ್ಯೋಗಾವಕಾಶ ಲಭಿಸಿದೆ ಎಂದರು.
ಕೇಂದ್ರ ಸರಕಾರದ ಸಹಯೋಗದಲ್ಲಿ 4762 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ, 2,484 ಕೋಟಿ ವೆಚ್ಚದಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, 35 ಸಾವಿರ ಕೋಟಿಗೂ ಹೆಚ್ಚು ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 1980 ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ನಲ್ಲಿ ಸತತ 2ನೇ ಬಾರಿ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ, ನೀತಿ ಆಯೋಗದ ಇನೊವೇಶನ್ ಇಂಡಿಯಾ ಇಂಡೆಕ್ಸ್ನಡಿ ಕರ್ನಾಟಕ 2019-20ರಲ್ಲಿ ರಾಜ್ಯವು ಪ್ರಥಮ ಸ್ಥಾನ ಪಡೆದಿದೆ. ನಾವೀನ್ಯತಾ ಪ್ರಾಧಿಕಾರ ಸ್ಥಾಪಿಸಲು ರಾಜ್ಯಕ್ಕೆ ಅನುಮತಿ ಲಭಿಸಿದೆ. ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಜ್ಞಾನಸೇತು) ಸ್ಥಾಪಿಸಲಾಗಿದೆ. ಕಲಬುರ್ಗಿ, ಬೀದರ್ನಲ್ಲಿ ವಿಮಾನನಿಲ್ದಾಣ ಪ್ರಾರಂಭಗೊಂಡಿದೆ. ಶಿವಮೊಗ್ಗ, ವಿಜಯಪುರ ವಿಮಾನನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹಾಸನದಲ್ಲೂ ಗ್ರೀನ್ಫೀಲ್ಡ್ ಏರ್ಪೋರ್ಟ್ 190 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಕೃಷಿಕರ ಮಕ್ಕಳಿಗೆ ಸುಮಾರು 1 ಸಾವಿರ ಕೋಟಿ ವೆಚ್ಚದಲ್ಲಿ ಪಿಯುಸಿ, ಪದವಿ ಕಲಿಕೆಗೆ ಸ್ಕಾಲರ್ಶಿಪ್ ಘೋಷಿಸಿದ್ದಾರೆ. ಜೊತೆಗೆ ಹಿರಿಯ ನಾಗರಿಕರು, ವಿಶೇಷ ಚೇತನ ಮಕ್ಕಳು ಮತ್ತು ವಿಧವೆಯರ ಮಾಸಾಶನವನ್ನೂ ಏರಿಸಿದ್ದಾರೆ ಎಂದರು.
ಉಪ ಚುನಾವಣೆ ಅಭಿವೃದ್ಧಿಯ ಹಿನ್ನೆಲೆಯಲ್ಲೇ ನಡೆಯಬೇಕಿತ್ತು. ಕೇಂದ್ರದ ವಿದೇಶಾಂಗ, ಶಿಕ್ಷಣ, ಕೃಷಿ, ರಕ್ಷಣಾ ನೀತಿ, ದೇಶವನ್ನು ಒಂದು ಉತ್ಪಾದಕಾ ವಲಯವಾಗಿ (ಮ್ಯಾನುಫ್ಯಾಕ್ಚರಿಂಗ್ ಹಬ್) ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಿರುವುದು, ಸಣ್ಣ ಮತ್ತು ಮಧ್ಯಮ ಉತ್ಪಾದನಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ, ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಪ್ಯಾಕೇಜ್, ಜಗತ್ತಿನ ನಾಯಕತ್ವ ವಹಿಸಿರುವುದು- ಈ ಎಲ್ಲ ಸಂಗತಿಗಳ ಚರ್ಚೆ ಆಗಬೇಕಿತ್ತು ಎಂದು ತಿಳಿಸಿದರು.
6.5 ಕೋಟಿಗೂ ಹೆಚ್ಚು ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸಲು ಸಾಮೂಹಿಕವಾಗಿ 3 ಕನ್ನಡ ಗೀತೆಗಳನ್ನು ಹಾಡಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಚಿವ ಸುನೀಲ್ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಕನ್ನಡತನ ಜಾಗೃತಗೊಳಿಸುವ ಮತ್ತು ಕನ್ನಡದ ಬಗ್ಗೆ ವಿಶೇಷ ಅಭಿಮಾನ ಬೆಳೆಸುವ ದೊಡ್ಡ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತದೆ. ಕೋವಿಡ್ ನಿಯಂತ್ರಣದಲ್ಲಿರಲು ಲಸಿಕೆ ಕಾರಣವಾಗಿದ್ದು, ಕನ್ನಡ ರಾಜ್ಯೋತ್ಸವವನ್ನು ಜನತೆ ಸಂಭ್ರಮದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ಅವರು ಸರಕಾರವನ್ನು ಪಕ್ಷದ ಪರವಾಗಿ ಒತ್ತಾಯಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. “ನೀವು ಕಾಂಗ್ರೆಸ್ನವರಲ್ಲ; ನೀವೆಲ್ಲೋ ಜನತಾದಳದಲ್ಲಿ ಇದ್ದವರು. ನೀವು ಕೂಡ ಕಾಂಗ್ರೆಸ್ಗೆ ಹೋಗಿದ್ದೀರಿ. ನೀವು ಯಾವ ಪಾಡಿಗಾಗಿ ಹೋಗಿದ್ದೀರೆಂದು ಸ್ಪಷ್ಟಪಡಿಸಿ” ಎಂದು ಸವಾಲೆಸೆದರು.
ದಲಿತರ ಬಗ್ಗೆ ಈ ರೀತಿ ಅವಹೇಳನಕಾರಿ ಮಾತನಾಡಲು ನಿಮಗೆ ಯಾವರೀತಿಯ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು. ನೀವು ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್ನಲ್ಲಿ ಹಲವು ದಶಕ ಕಾಲ ದುಡಿದ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇತ್ತು. ಆಗ ನೀವು ಹೊರಗಡೆಯಿಂದ ಬಂದವರು, ಇಡೀ ಕಾಂಗ್ರೆಸ್ಸನ್ನು ಬ್ಲ್ಯಾಕ್ಮೇಲ್ ಮಾಡಿ, ಮುಖಂಡರನ್ನು ತುಳಿದು, ದಲಿತರ ಸಂಹಾರ ಮಾಡಿ ನೀವು ಮುಖ್ಯಮಂತ್ರಿಯಾದವರು. ಸಿದ್ದರಾಮಯ್ಯ ಒಬ್ಬ ಕಪಟ ರಾಜಕಾರಣಿ, ಅವರಿಗೆ ಇನ್ನೊಬ್ಬರನ್ನು ತುಳಿದೇ ಗೊತ್ತು ಎಂದು ಅಭಿಪ್ರಾಯಪಟ್ಟರು.
“ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಚರ್ಚೆ ನಡೆಯುತ್ತಿದ್ದಾಗ 2008ರಲ್ಲಿ ಕೇವಲ 250 ಮತಗಳ ಅಂತರದಲ್ಲಿ ಗೆದ್ದ ನೀವು ಬಹುದೊಡ್ಡ ನಾಯಕರಾದಿರಿ. ನೀವೆಷ್ಟು ಕಳಪೆ ನಾಯಕ ಎಂಬುದು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿತ್ತು. ಆವತ್ತು ಅಧ್ಯಕ್ಷರಾಗಿದ್ದ ಖರ್ಗೆಯವರನ್ನು ಆವತ್ತೇ ತುಳಿದು ಇಲ್ಲಿಂದ ಓಡಿಸಿದಿರಿ. ಡಾ. ಪರಮೇಶ್ವರ್ ಅವರಿಗೆ ಅವಕಾಶ ಸಿಗಬಾರದೆಂದು ಅವರನ್ನು ಸೋಲಿಸಿದಿರಿ” ಎಂದು ತಿಳಿಸಿದರು.
ಸಿದ್ದರಾಮಯ್ಯರ ಬಗ್ಗೆ ಮಾತನಾಡಿದರೆ ಮತ್ತೆಲ್ಲಿ ಸೋಲಿಸಿಬಿಡುತ್ತಾರೋ ಎಂಬ ಭಯ ಆ ಪಕ್ಷದ ನಾಯಕರಿಗಿದೆ. ಕಾಂಗ್ರೆಸ್ನಲ್ಲಿ ಬಹಳ ಪ್ರಭಾವಿ ಲೀಡರ್ಗಳಿಲ್ಲ. ಅದನ್ನು ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ನುಡಿದರು. ಕಾಂಗ್ರೆಸ್ನ ಕೆಲವು ಲೀಡರ್ಗಳು ಬೋನ್ಲೆಸ್ ಎಂದು ತಿಳಿಸಿದರು.
ಬಂಗಾರಪ್ಪ ಅವರು ಪೊಲಿಟಿಕಲ್ ಸ್ಕಾರ್ಪಿಯನ್ (ರಾಜಕೀಯದ ಚೇಳು) ಎಂಬ ಮಾತು ಹೇಳುತ್ತಿದ್ದರು. ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ. ದೇವೇಗೌಡರಿಗೆ, ತಮ್ಮನ್ನು ಗೆಲ್ಲಿಸಿದ ಖರ್ಗೆಯವರಿಗೆ, ಪಕ್ಷಕ್ಕೆ ಕರೆತಂದ ವಿಶ್ವನಾಥ್, ರೇವಣ್ಣನ ಪರಿಸ್ಥಿತಿ ಏನಾಗಿದೆ, ಅವರ ಸಮುದಾಯದವರನ್ನೇ ಸಿದ್ದರಾಮಯ್ಯ ಬಿಟ್ಟಿಲ್ಲ, ವಿಶ್ವನಾಥರನ್ನೇ ನೀವು ಬಿಟ್ಟಿಲ್ಲ; ಅವರು ತಪ್ಪಿಸಿಕೊಳ್ಳಲು ಬಿಜೆಪಿಗೆ ಬಂದಿದ್ದಾರೆ ಎಂದು ಗಮನ ಸೆಳೆದರು. ವಿಶ್ವನಾಥರನ್ನು ನಾವು ಬಿಟ್ಟುಕೊಟ್ಟಿಲ್ಲ; ಎಂಎಲ್ಸಿ ಮಾಡಿದ್ದೇವೆ ಎಂದು ವಿವರಿಸಿದರು.
ಎಂ.ಟಿ.ಬಿ ನಾಗರಾಜ್, ಬಸವರಾಜ್ ವಿಚಾರದಲ್ಲೂ ಹೀಗೇ ಆಗಿದೆ. ಸಿದ್ದರಾಮಯ್ಯ ಕೂಡ ಒಬ್ಬ ಅಡ್ಜಸ್ಟ್ಮೆಂಟ್ ಗಿರಾಕಿ ಎಂದು ತಿಳಿಸಿದರು. ಪರಮೇಶ್ವರ್ ಕಣ್ಣೀರು ಹಾಕಿ ತಮ್ಮನ್ನು ಉಪ ಮುಖ್ಯಮಂತ್ರಿ ಮಾಡಲು ಕೇಳಿಕೊಂಡರೂ ಅದನ್ನಾದರೂ ಮಾಡಿದ್ದೀರಾ ಎಂದು ಕೇಳಿದರು. ನಿಮ್ಮ ಕುರ್ಚಿಗೆ ಇನ್ನೊಬ್ಬರ ನೆರಳು ಕೂಡ ಬೀಳದಂತೆ ನೋಡಿಕೊಂಡಿರಿ ಎಂದು ತಿಳಿಸಿದರು.
ದಲಿತರು ಆಗಬೇಕೆಂಬ ದೊಡ್ಡ ಕೂಗೆದ್ದಾಗ ನಾನೇ ದಲಿತ; ನನಗಿಂತ ದೊಡ್ಡ ದಲಿತ ಬೇಕಾ ಎಂಬ ಪ್ರಶ್ನೆ ಹಾಕಿದ ನಿಮ್ಮ ಅಹಿಂದಕ್ಕೆ ಏನು ಅರ್ಥವಿದೆ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ನಿನ್ನ ಹೃದಯದಲ್ಲಿ ಕಪಟತನ ಎಷ್ಟಿದೆ ಎಂಬುದರ ಪ್ರದರ್ಶನ ಆಗುತ್ತಿದೆ ಎಂದೂ ನುಡಿದರು. ಮಗನ ಭವಿಷ್ಯಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ನೀವು ಕಾಂಗ್ರೆಸ್ನಲ್ಲಿದ್ದೀರಿ ಎಂದು ತಿಳಿಸಿದರು.
ಸಿದ್ದರಾಮಯ್ಯರನ್ನು ಕಂಡೊಡನೆ ಕಾಂಗ್ರೆಸ್ ಮುಖಂಡರು ಬಟ್ಟೆ ಒದ್ದೆ ಮಾಡಿಕೊಂಡು ಕುಳಿತಿರುತ್ತಾರೆ. ಕಾಂಗ್ರೆಸ್ನವರನ್ನು ಇಂಥ ಪರಿಸ್ಥಿತಿಗೆ ಸಿದ್ದರಾಮಯ್ಯ ದೂಡಿದ್ದಾರೆ ಎಂದರು. ಆದ್ದರಿಂದ ದಲಿತರ ಕುರಿತು ಮಾತನಾಡಲು ಆತನಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.
ಇವತ್ತು ದಲಿತರ ನಡೆ ಬಿಜೆಪಿಯ ಕಡೆ ಆಗಿದೆ. ದಲಿತರು ಸ್ವಾಭಿಮಾನಿಗಳು. ನೀವು ಅನ್ಯಾಯ, ಮೋಸ, ವಂಚನೆ ಮಾಡುತ್ತಿದ್ದರೆ, ತುಳಿಯುತ್ತಿದ್ದರೆ, ಗೌರವ ಕೊಡದಿದ್ದರೆ ದಲಿತರಾದರೂ ಏನು ಮಾಡುತ್ತಾರೆ. ಅವರೂ ಸ್ವಾಭಿಮಾನಿಗಳಲ್ಲವೇ ಎಂದು ಪ್ರಶ್ನಿಸಿದರು. ದಲಿತರೇನೂ ಸನ್ಯಾಸಿಗಳಲ್ಲ; ಗೌರವ, ನ್ಯಾಯ ಇರುವಲ್ಲಿಗೆ ದಲಿತರು ಹೋಗುವುದು ಸಹಜ ಎಂದರು.
ಇಬ್ಬರು ಲೀಡರ್ಗಳನ್ನು ತೋರಿಸಿ ದಲಿತರನ್ನು ಮತಬ್ಯಾಂಕಾಗಿ ಕಾಂಗ್ರೆಸ್ಸಿಗರು ಪರಿವರ್ತಿಸಿದ್ದರು. ಇವತ್ತು ನಮ್ಮ ಜನರಿಗೆ ಅದು ಅರ್ಥ ಆಗಿದೆ. ಎಲ್ಲ ದಲಿತರ ನಡಿಗೆ ಬಿಜೆಪಿ ಕಡೆಗೆ ಎಂಬ ದಿನಗಳು ಬಂದಿವೆ ಎಂದರು. ಅದರಿಂದ ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸದಾಕಾಲ ಅಧಿಕಾರದಲ್ಲಿ ಉಳಿಯಲಿದೆ ಎಂದು ವಿಶ್ಲೇಷಿಸಿದರು.
ಖಾದಿ ಬಟ್ಟೆ ತೊಡಬೇಕು, ಮದ್ಯಪಾನ ಮಾಡಬಾರದು, ಸಾಮಾಜಿಕ ಅಸಮಾನತೆ ಆಚರಿಸಬಾರದು- ಹೀಗೆ ಹಲವು ವಿಚಾರಗಳನ್ನು ಕಾಂಗ್ರೆಸ್ ಸದಸ್ಯರಾಗುವವರಿಗೆ ಹೊಸದಾಗಿ ಹೇಳುತ್ತಿದ್ದಾರಂತೆ. ಇದು ಕಾಂಗ್ರೆಸ್ ಸಂವಿಧಾನ. ಇದು 2007ರಲ್ಲಿ ತಿದ್ದುಪಡಿಯೂ ಆಗಿದೆ ಎಂದ ಅವರು, ರಾಹುಲ್ ಗಾಂಧಿ ಖಾದಿಧಾರಿಯೇ, ಯಾವಾಗ ನೋಡಿದರೂ ಜೀನ್ಸ್- ಟೀಶರ್ಟ್ನಲ್ಲೇ ಇರುತ್ತಾರೆ ಎಂದು ಪ್ರಶ್ನೆ ಮುಂದಿಟ್ಟರು. ಅಧ್ಯಕ್ಷರಾಗಿದ್ದವರೇ ಅದನ್ನು ಪಾಲಿಸುವುದಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಮದ್ಯಪಾನ ಮಾಡದವರು ಯಾರು ಇದ್ದಾರೆ? ಮದ್ಯಪಾನ ಮಾಡದಿದ್ದರೆ ಕಾಂಗ್ರೆಸ್ನವರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಕಾಂಗ್ರೆಸ್ನವರು ಹುಟ್ಟುಕುಡುಕರು ಎಂದು ತಿಳಿಸಿದರು. ನಾನು ಇದನ್ನೆಲ್ಲ ನೋಡಿಬಂದಿದ್ದೇನೆ ಎಂದು ವಿವರಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು 20ರಿಂದ 25 ಕೋಟಿ ಖರ್ಚು ಮಾಡುತ್ತಾರೆ. ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ? ಶ್ರೀಮಂತರು ಮಾತ್ರ ಚುನಾವಣೆಗೆ ನಿಲ್ಲಬಹುದು ಎಂದು ನೀವೇ ಪ್ರೂವ್ ಮಾಡಿದ್ದೀರಿ ಎಂದರು. ಯುವಮೋರ್ಚಾಗೆ ನಾವು ದಲಿತರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಿಮ್ಮಂತೆ ತೋರಿಕೆಗಾಗಿ ನಾವು ಕೆಲಸ ಮಾಡುವುದಿಲ್ಲ ಎಂದರು.
ಮುಸ್ಲಿಮರನ್ನು ಬೆದರಿಸಿ, ಬಿಜೆಪಿ ಗುಮ್ಮದ ಭಯ ಹುಟ್ಟಿಸಿ ಮತಬ್ಯಾಂಕ್ ಆಗಿ ಕಾಂಗ್ರೆಸ್ ಮಾಡಿಕೊಂಡಿತ್ತು. ಈಗ ಆ ವಿಚಾರ ಮುಸ್ಲಿಮರಿಗೂ ಅರಿವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಸಂತುಷ್ಟರಾಗಿ ಇರಬಹುದೆಂದು ಅವರಿಗೂ ಗೊತ್ತಾಗಿದೆ ಎಂದು ವಿವರಿಸಿದರು. ಬಿಜೆಪಿ ಸರ್ವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಶೇಕಡಾ 15ರಿಂದ 20 ಮುಸ್ಲಿಮರು ನಮ್ಮ ಮತದಾರರಿದ್ದಾರೆ. ಆದರೆ ಸರಿಯಾದ ನಾಯಕರಿಲ್ಲ ಎಂದು ವಿಶ್ಲೇಷಿಸಿದರು.
ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.