ಬೆಂಗಳೂರು: ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್ಪಿಒ) ಆರಂಭಿಸುವ ಸಂಕಲ್ಪ ಪ್ರಧಾನಿ ಮೋದಿಯವರದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ರೈತರನ್ನು ಒಗ್ಗೂಡಿಸಿ ಅವರಿಗೆ ಕೃಷಿ ಸಲಕರಣೆಗಳನ್ನು ಒದಗಿಸುವ ಚಿಂತನೆ ಇದೆ. ಈಗಲೂ ಕಡಿಮೆ ಬಾಡಿಗೆಗೆ ಕೃಷಿ ಸಲಕರಣೆಗಳು ಲಭಿಸುತ್ತಿವೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಖಾದ್ಯ ತೈಲದ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದರು.
ರೈತರನ್ನು ದಲ್ಲಾಳಿಗಳ ಸಮಸ್ಯೆಯಿಂದ ಮುಕ್ತರನ್ನಾಗಿಸಿದ ಕೇಂದ್ರ ಸರಕಾರ ನಮ್ಮದು ಎಂದ ಅವರು, ಈಗ ಆಹಾರ ಪದಾರ್ಥ, ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹಿಂದೆ ಆಹಾರಕ್ಕಾಗಿ ವಿದೇಶಗಳ ಎದುರು ಅಂಗಲಾಚುವ ಸ್ಥಿತಿ ಇತ್ತು ಎಂದು ತಿಳಿಸಿದರು. 2014ರಲ್ಲಿ ಯುಪಿಎ ಸರಕಾರ ಇದ್ದಾಗ ಬಜೆಟ್ನಡಿ ಕೇವಲ 21 ಸಾವಿರ ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ಬಳಸಲಾಗುತ್ತಿತ್ತು. ಕೇವಲ ಆರೇಳು ವರ್ಷಗಳಲ್ಲಿ 1,30,000 ಕೋಟಿ ರೂಪಾಯಿ ಕೃಷಿ ಅಭಿವೃದ್ಧಿಗೆ ಕೊಡಲಾಗಿದೆ. ಸುಮಾರು 460% ರಷ್ಟು ಬಜೆಟ್ನಡಿ ಹೆಚ್ಚಳವನ್ನು ಇದೊಂದು ಕ್ಷೇತ್ರದಲ್ಲೇ ನಾವು ಕಾಣುತ್ತಿದ್ದೇವೆ ಎಂದು ವಿವರಿಸಿದರು.
ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ. ಇದು ಬಿಜೆಪಿ ಸರಕಾರದ ಕೃಷಿಕರ ಅಭಿವೃದ್ಧಿ ಕುರಿತ ಬದ್ಧತೆಗೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು. ಸಣ್ಣಪುಟ್ಟ ಸ್ವಸಹಾಯ ಸಂಘಗಳನ್ನು ರಚಿಸಿ ಈರುಳ್ಳಿ, ಆಲೂಗಡ್ಡೆ ಮತ್ತಿತರ ಉತ್ಪನ್ನಗಳ ಸಂಸ್ಕರಣೆ- ಮೌಲ್ಯವರ್ಧನೆ ನಡೆಸಲು ಅವಕಾಶವಿದೆ ಎಂದು ಕಿವಿಮಾತು ಹೇಳಿದರು. ರಾಜ್ಯದಿಂದ ಕಾಫಿ ಮತ್ತು ಕರಿಮೆಣಸು ಮಾತ್ರ ರಫ್ತಾಗುತ್ತಿದೆ. ಕಾಫಿ ಬೆಳೆಗಾರರಿಗೂ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ತೆಂಗು ಮತ್ತು ತೆಂಗಿನ ಉತ್ಪನ್ನಗಳ ರಫ್ತು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬೆಳೆಗಾರರಿಗೆ ಹೆಚ್ಚು ದರ ಲಭಿಸಲಿದೆ ಎಂದು ತಿಳಿಸಿದರು.
ಕೋವಿಡ್ ಸಮಸ್ಯೆ ಇದ್ದರೂ ಕೃಷಿಕರ ಆದಾಯ ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ್ದಾರೆ. ಬಿತ್ತನೆ ಬೀಜ ಅಭಿವೃದ್ಧಿ, 80% ರಷ್ಟು ಸಣ್ಣ ರೈತರ ಅಭಿವೃದ್ಧಿಗೂ ಕೇಂದ್ರದ ಬಿಜೆಪಿ ಸರಕಾರ ಅನೇಕ ಯೋಜನೆಗಳನ್ನು ಭ್ರಷ್ಟಾಚಾರವಿಲ್ಲದೆ ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿನವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆಗೊಂಡಿದೆ. ಫಸಲ್ ಬಿಮಾ ಯೋಜನೆಯನ್ನು ಸರಳಗೊಳಿಸಿದ್ದು, ರೈತರು ಉತ್ಪನ್ನ ನಷ್ಟವಾದ ಕುರಿತ ದಾಖಲೆಗಳನ್ನು ಯಾವುದೇ ಅಧಿಕಾರಿಗಳು, ಮಧ್ಯವರ್ತಿಗಳ ನೆರವಿಲ್ಲದೆ ತಮ್ಮ ಮೊಬೈಲ್ ಮೂಲಕ ಅಪ್ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ ರೈತರು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ರೈತರ ಉತ್ಪನ್ನಕ್ಕೆ ಹೆಚ್ಚಿನ ದರ ಸಿಗುವ ನಿಟ್ಟಿನಲ್ಲಿ ಪ್ತಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸಂಸತ್ತಿಗೆ ನೂತನ ಸಚಿವರ ಪರಿಚಯ ಮಾಡಲು ವಿರೋಧ ಪಕ್ಷಗಳು ಅವಕಾಶ ಕೊಡಲಿಲ್ಲ. ಇದೇ ಕಾರಣಕ್ಕೆ ಸುಮಾರು 500ರಷ್ಟು ಸಂಸದರ ಬದಲಾಗಿ 130 ಕೋಟಿ ಜನರ ಮುಂದೆ ಹೊಸ ಸಚಿವರನ್ನು ತೆಗೆದುಕೊಂಡು ಹೋಗಲು ಮತ್ತು ಜನರಿಗೆ ನೂತನ ಸಚಿವರನ್ನು ಪರಿಚಯಿಸಲು ನಿರ್ಧರಿಸಲಾಯಿತು. ಅದೇ ಕಾರಣಕ್ಕೆ ಈ ಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.
ಸ್ಥಳೀಯವಾಗಿ ಹೆಚ್ಚಿನ ಗುರುತೇ ಇಲ್ಲದ ನನ್ನನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ನನಗೆ ಸಚಿವ ಸ್ಥಾನ ಅದರಲ್ಲೂ ಕೃಷಿ ಖಾತೆ ಸಿಕ್ಕಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆಗಳು ಎಂದರು. ಗರಿಷ್ಠ ಜಂಟಿ ಕಾರ್ಯದರ್ಶಿಗಳಿರುವ ಖಾತೆ ಇದು. ಹಲವಾರು ಯೋಜನೆಗಳನ್ನು ಈ ಖಾತೆಗೆ ಪ್ರಧಾನಿಯವರು ಕೊಟ್ಟಿದ್ದಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.